ಉತ್ತರ ಪ್ರದೇಶ: ಕನ್ನಡಿಗ ಸುಹಾಸ್ ಗೆ ಅತಿಹೆಚ್ಚು ಕೊರೊನ ಪೀಡಿತರ ಜಿಲ್ಲೆಯ ಜವಾಬ್ದಾರಿ

Update: 2020-03-31 09:07 GMT

ನೋಯ್ಡಾ, ಮಾ. 31: ಉತ್ತರ ಪ್ರದೇಶದಲ್ಲೇ ಅತಿಹೆಚ್ಚು ಕೋರೋನ ಸೋಂಕು ಪೀಡಿತರ ಜಿಲ್ಲೆ ಗೌತಮ್ ಬುದ್ಧ ನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ, ಕನ್ನಡಿಗ ಸುಹಾಸ್ ಎಲ್ ವೈ ಅವರು ಬಂದಿದ್ದಾರೆ.

ಕೋರೋನ ನಿಯಂತ್ರಣದಲ್ಲಿ ವಿಫಲವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ ಎನ್ ಸಿಂಗ್ ಅವರಿಗೆ ಸಭೆಯಲ್ಲೇ ಸಿಎಂ ಆದಿತ್ಯನಾಥ್ ತೀವ್ರ ತರಾಟೆಯ ಬೆನ್ನಿಗೆ ಸಿಂಗ್ ಅವರು ಮೂರು ತಿಂಗಳ ರಜೆ ಹಾಕಿ ತೆರಳಿದ್ದರು. ತಕ್ಷಣ ಅವರ ಜಾಗಕ್ಕೆ ಸುಹಾಸ್ ಅವರನ್ನು ನೇಮಿಸಲಾಗಿದೆ.

ಕರ್ನಾಟಕದ ಹಾಸನದವರಾದ ಸುಹಾಸ್ ಅವರು 2007ರ ಬ್ಯಾಚ್ ಐಎಎಸ್ ಅಧಿಕಾರಿ. ಇವರು ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಕೂಡ ಹೌದು. ಪುರುಷರ ಸಿಂಗಲ್ಸ್ ಪ್ಯಾರಾ ಬ್ಯಾಡ್ಮಿಂಟನ್ ನಲ್ಲಿ ಇವರು ವರ್ಲ್ಡ್ ನಂಬರ್ 2 ಸ್ಥಾನದಲ್ಲಿದ್ದಾರೆ. 2016 ಏಷಿಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಇವರು ಗೆಲ್ಲುವ ಮೂಲಕ ಇಂತಹ ಚಾಂಪಿಯನ್ ಶಿಪ್ ಗೆದ್ದ ದೇಶದ ಪ್ರಪ್ರಥಮ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇವರ ತಂದೆ ದಿವಂಗತ ಯತಿರಾಜ್ ಎಲ್ ಕೆ ಅವರು ಸರಕಾರಿ ಉದ್ಯೋಗಿಯಾಗಿದ್ದರು. ತಾಯಿಯ ಹೆಸರು ಜಯಶ್ರೀ ಸಿ ಎಸ್ . ಮಂಡ್ಯ, ಶಿವಮೊಗ್ಗ ಇತ್ಯಾದಿ ಕಡೆಗಳಲ್ಲಿ ಪ್ರಾಥಮಿಕ, ಪ್ರೌಢ , ಕಾಲೇಜು ಶಿಕ್ಷಣ ಪಡೆದ ಸುಹಾಸ್ ಸುರತ್ಕಲ್ ನ ಎನ್ ಐ ಟಿ ಕೆಯಲ್ಲಿ ಪದವಿ ಪಡೆದಿದ್ದರು. 

ಈ ಹಿಂದೆ ಆಗ್ರಾ, ಆಝಮ್ ಗಢ , ಮಥುರಾ, ಮಹಾರಾಜ್ ಗಂಜ್, ಹತ್ರಾಸ್, ಸೋನಾಭದ್ರ , ಜಾವುನಪುರ, ಅಲಹಾಬಾದ್ ( ಪ್ರಯಾಗ್ ರಾಜ್ ) ಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಸುಹಾಸ್ ದಕ್ಷ, ಜನಪರ ಅಧಿಕಾರಿ ಎಂದು ಹೆಸರು ಪಡೆದವರು. 2016 ರಲ್ಲಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಶ್ ಭಾರತಿ ಪ್ರಶಸ್ತಿಗೆ ಪಾತ್ರರಾದವರು. ಚುನಾವಣಾ ನಿರ್ವಹಣೆ, ಕಂದಾಯ ಆಡಳಿತ ಇತ್ಯಾದಿಗಳಲ್ಲಿ ದಕ್ಷ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದವರು ಸುಹಾಸ್.

ಇವರ ಪತ್ನಿ ರಿತು ಸುಹಾಸ್ ಅವರು ಅಲಹಾಬಾದ್ ನಲ್ಲಿ ಅಪರ ಮುನಿಸಿಪಲ್ ಕಮಿಷನರ್ ಆಗಿದ್ದಾರೆ. ಈಗಾಗಲೇ ತಾನು ನಿರ್ವಹಿಸಿದ ಎಲ್ಲ ಹುದ್ದೆಗಳಲ್ಲಿ ವ್ಯಾಪಕ ಜನಮನ್ನಣೆ ಗಳಿಸಿರುವ ಸುಹಾಸ್ ಅವರಿಗೆ ರಾಜ್ಯದಲ್ಲೇ ಅತಿಹೆಚ್ಚು ಕೊರೊನ ಪೀಡಿತರ ಜಿಲ್ಲೆಯಲ್ಲಿ ಅದನ್ನು ನಿಯಂತ್ರಣಕ್ಕೆ ತರುವ ಮಹತ್ವದ ಜವಾಬ್ದಾರಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News