ಪುತ್ತೂರು ಜಾತ್ರೆಗೆ ಗೊನೆ ಮುಹೂರ್ತ
ಪುತ್ತೂರು, ಎ.1: ಕೊರೋನ ಭೀತಿಯಿಂದ ದೇಶವೇ ಲಾಕ್ಡೌನ್ ಆಗಿರುವ ಹಿನ್ನಲೆಯಲ್ಲಿ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಪ್ರತಿ ಎಪ್ರಿಲ್ 10ರಿಂದ 19ರ ತನಕ ನಡೆಯುತ್ತಿರುವ ಅದ್ದೂರಿ ಜಾತ್ರೋತ್ಸವವನ್ನು ಈ ಬಾರಿ ಸರಳ ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ.
ಜಾತ್ರೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಗೊನೆ ಮುಹೂರ್ತ ನೆರವೇರಿತು. ದೇವಳದ ಪ್ರಧಾನ ಅರ್ಚಕ ವಿ.ಎಸ್. ಭಟ್ ಗೊನೆ ಮುಹೂರ್ತ ನಡೆಸಿದರು. ಈ ಸಂದರ್ಭ ಇನೋರ್ವ ಪ್ರಧಾನ ಅರ್ಚಕ ವಸಂತ ಕೆದಿಲಾಯ, ಶಾಸಕ ಸಂಜೀವ ಮಠಂದೂರು, ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ದೇವಳದ ಆಡಳಿತಾಧಿಕಾರಿ ಸಿ.ಲೋಕೇಶ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್, ವಾದ್ಯ ಸೇವೆಯ ಪಿ.ಕೆ. ಗಣೇಶ್, ಇಬ್ಬರು ಪರಿಚಾರಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಇದುವರೆಗೆ ಅದ್ದೂರಿಯಾಗಿ ನಡೆಯುತ್ತಿದ್ದ ಪುತ್ತೂರು ಜಾತ್ರೆಯು ಈ ಬಾರಿ ಅರ್ಚಕರು, ದೇವಸ್ಥಾನದ ಸಿಬ್ಬಂದಿ ಮಾತ್ರ ಸೇರಿಕೊಂಡು ಧಾರ್ಮಿಕ ಸಂಪ್ರದಾಯವನ್ನು ನಡೆಸಲಿದ್ದಾರೆ. ಜಾತ್ರೆಯ ವೇಳೆಗೆ ಯಾವುದೇ ಭಕ್ತರಿಗೆ ಅವಕಾಶವಿರುವುದಿಲ್ಲ.