ಪುತ್ತೂರು: ಅನಗತ್ಯ ಸಂಚಾರಕ್ಕೆ ಪೊಲೀಸರ ತಡೆ; 37 ವಾಹನಗಳ ಜಪ್ತಿ

Update: 2020-04-04 07:52 GMT

ಪುತ್ತೂರು, ಎ.4: ಲಾಕ್‍ಡೌನ್ ಹಿನ್ನಲೆಯಲ್ಲಿ ನಗರದಲ್ಲಿ ಅನಗತ್ಯವಾದ ಓಡಾಟಕ್ಕೆ ತಡೆ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪುತ್ತೂರು ನಗರ ಹಾಗೂ ಸಂಚಾರಿ ಠಾಣೆಯಲ್ಲಿ ಸುಮಾರು 37ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಗರದಲ್ಲಿ ಅನಗತ್ಯವಾಗಿ ಓಡಾಡುವ ಜನತೆಯನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಕಳೆದ 11 ದಿನಗಳಿಂದ ದೇಶದಲ್ಲಿ ಲಾಕ್‍ಡೌನ್ ವ್ಯವಸ್ಥೆ ಜಾರಿಯಲ್ಲಿದ್ದು, ದೇಶದ ಜನತೆ ಮನೆಯಲ್ಲಿಯೇ ಇರಬೇಕು ಎಂಬ ಉದ್ದೇಶದ ಮೂಲಕ ಕೊರೋನವನ್ನು ಹಿಮ್ಮೆಟ್ಟಿಸುವ ಕೆಲಸಕ್ಕೆ ಮುನ್ನುಡಿ ಬರೆಯಲಾಗಿತ್ತು. ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರು ಕಂಡುಬಂದ ಹಿನ್ನಲೆಯಲ್ಲಿ ಸಂಪೂರ್ಣ ಬಂದ್ ಜಾರಿಯಾಗಿತ್ತು. ಆದರೆ ಜನತೆಗೆ ಆಹಾರ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲು ನಿರ್ಬಂಧ ಸಡಿಲಿಕೆ ಮಾಡಿದ ಸಂದರ್ಭದಲ್ಲಿ ಜನತೆ ದಿನಸಿಗಳಿಗಾಗಿ ಮುಗಿಬಿದ್ದ ಕಾರಣ ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ದಿನಸಿ, ಮೆಡಿಕಲ್, ಹಾಲು ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಯಿತು. ಈ ಅವಕಾಶವನ್ನು ಬಹಳಷ್ಟು ಮಂದಿ ದುರುಪಯೋಗ ಮಾಡುತ್ತಿರುವ ಹಿನ್ನಲೆಯಲ್ಲಿ ಖಾಸಗಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಯಿತು. ಆದರೂ ಇದನ್ನು ಪಾಲಿಸದೇ ಇದ್ದುದರಿಂದ ಪುತ್ತೂರು ನಗರ ಹಾಗೂ ಉಪ್ಪಿನಂಗಡಿ ಪೇಟೆಯಲ್ಲಿ ಖಾಸಗಿ ವಾಹನಗಳು ಮತ್ತು ಬೈಕ್ ಸವಾರರ ಅನಗತ್ಯ ಸಂಚಾರ ತಡೆಯುವ ನಿಟ್ಟಿನಲ್ಲಿ ಪೊಲೀಸರು ವಾಹನಗಳನ್ನು ಜಪ್ತಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಶುಕ್ರವಾರ ಪುತ್ತೂರು ನಗರ ಠಾಣೆಯಲ್ಲಿ 13 ವಾಹನಗಳನ್ನು ಹಾಗೂ ಸಂಚಾರಿ ಠಾಣೆಯಲ್ಲಿ 8 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಗುರುವಾರ 16 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಪೊಲೀಸರ ಈ ಕ್ರಮದಿಂದ ಜನತೆಯ ಅನಗತ್ಯ ಓಡಾಟ ಅಲ್ಪ ನಿಯಂತ್ರಣದಲ್ಲಿದೆ. ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ದರ್ಬೆ ವೃತ್ತ, ಪರ್ಲಡ್ಕ ಹಾಗೂ ಬೊಳುವಾರು ಬಳಿ ಬ್ಯಾರಕೇಡ್ ಅಳವಡಿಸಿ ಪೊಲೀಸರು ಜನ ಸಂಚಾರ ನಿಯಂತ್ರಿಸುವ ಕೆಲಸ ನಡೆಸುತ್ತಿದ್ದಾರೆ. ಉಪ್ಪಿನಂಗಡಿಯ ಗಾಂಧಿಪಾರ್ಕ್, ಬಸ್ ನಿಲ್ದಾಣ ಬಳಿ ಪೊಲೀಸರ ಕಾರ್ಯಾಚರಣೆ ನಡೆಯಿತು. ಕಳೆದ ದಿನಗಳಿಗೆ ಹೋಲಿಕೆ ಮಾಡಿದರೆ ಶನಿವಾರ ಜನತೆಯ ಅನಗತ್ಯ ಓಡಾಟವನ್ನು ನಿಯಂತ್ರಿಸುವಲ್ಲಿ ಪೊಲೀಸರು ಭಾಗಶ: ಯಶಸ್ವಿಯಾಗಿದ್ದಾರೆ. 

ಗ್ರಾಮೀಣ ಭಾಗದಲ್ಲೂ ಪಡಿತರ ವಿತರಣೆ
ಬಡಜನತೆಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡುವ ಕಾರ್ಯ ನಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲೂ ಶನಿವಾರ ಪಡಿತರ ವಿತರಣೆ ಆರಂಭಿಸಲಾಗಿದೆ. ಪ್ರಸ್ತುತ ದಿನಸಿ ಅಂಗಡಿಗಳಿಗಿಂತಲೂ ನ್ಯಾಯಬೆಲೆ ಅಂಗಡಿಗಳಲ್ಲಿ ಜನತೆಯ ಗುಂಪು ಕಂಡುಬರುತ್ತಿದೆ. ಆದರೂ ತಾಲೂಕಿನ ಕೆಲವು ನ್ಯಾಯಬೆಲೆಗಳಲ್ಲಿ ಇನ್ನೂ ಪಡಿತರ ವಿತರಣೆ ನಡೆಯುತ್ತಿಲ್ಲ. ಪಡಿತರ ಅಕ್ಕಿಯ ಪೂರೈಕೆ ಕೊರತೆಯಿಂದ ವಿತರಣೆ ವಿಳಂಬವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News