ಇಂದು ಜುಮಾ ಬದಲು ಮನೆಯಲ್ಲೇ ಲುಹರ್ ನಮಾಝ್ ನಿರ್ವಹಿಸಿ: ಖಾಝಿ ಬೇಕಲ್ ಉಸ್ತಾದ್
Update: 2020-04-10 06:36 GMT
ಮಂಗಳೂರು, ಎ.10: ಸುಮಾರು ಮೂರು ತಿಂಗಳ ಹಿಂದೆ ಮಂಗಳೂರಿನಲ್ಲಿ ಕರ್ಫ್ಯೂ ಜಾರಿಯಲ್ಲಿದ್ದ ಸಂದರ್ಭ ಶುಕ್ರವಾರದ ಜುಮಾ ನಮಾಝ್ಗೆ ಅವಕಾಶ ಕಲ್ಪಿಸಿ ನಗರ ಪೊಲೀಸ್ ಆಯುಕ್ತರು ನೀಡಿದ್ದ ಹೇಳಿಕೆಯೊಂದನ್ನು ಇದೀಗ ಇಂದಿನ(ಎಪ್ರಿಲ್ 10) ಹೇಳಿಕೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಇದು ಹಳೆಯ ಸುದ್ದಿಯಾಗಿದ್ದು, ಇದನ್ನು ಯಾರು ಕೂಡಾ ಪರಿಗಣಿಸದೆ ಇಂದು (ಎ.10) ಜುಮಾ ನಮಾಝ್ಗೆ ಮಸೀದಿಗಳಿಗೆ ತೆರಳದೆ ಈ ಹಿಂದಿನ ಎರಡು ಶುಕ್ರವಾರಗಳಂತೆ ಮನೆಯಲ್ಲೇ ಲುಹರ್ ನಮಾಝ್ ನಿರ್ವಹಿಸಬೇಕು ಎಂದು ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ತಿಳಿಸಿದ್ದಾರೆ.
ಅದೇರೀತಿ ಮುಂದಿನ ಸೂಚನೆಯವರೆಗೆ ಮಸೀದಿಗಳಿಗೆ ತೆರಳದೆ ಎಲ್ಲ ನಮಾಝ್ಗಳನ್ನು ಮನೆಯಲ್ಲಿ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಎಲ್ಲ ರೀತಿಯಲ್ಲೂ ಸಹಕರಿಸುವಂತೆ ಖಾಝಿ ಕರೆ ನೀಡಿದ್ದಾರೆ.