ಕರಾವಳಿಗರಿಗೆ ಸಿಹಿಸುದ್ದಿ: ಲಾಕ್ ಡೌನ್ ನಡುವೆ ಮೀನುಗಾರಿಕೆಗೆ ಅವಕಾಶ

Update: 2020-04-11 13:45 GMT

ಮಂಗಳೂರು, ಎ.11: ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಎ.30ರವರೆಗೆ ಲಾಕ್‌ ಡೌನ್ ವಿಸ್ತರಣೆ ಬಗ್ಗೆ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಕೇಂದ್ರ ಗ್ರಹ ಸಚಿವಾಲಯವು ಮೀನುಗಾರಿಕೆ, ಕೋಳಿ ಫಾರ್ಮ್ಸ್ ಸೇರಿದಂತೆ ಕೆಲ ಚಟುವಟಿಕೆಗಳಿಗೆ ವಿನಾಯಿತಿ ನೀಡಿದೆ. ಮೀನುಗಾರಿಕೆಗೆ ವಿನಾಯಿತಿ ನೀಡಿರುವುದು ದ.ಕ., ಉಡುಪಿ ಸೇರಿದಂತೆ ಮೀನುಗಾರಿಕೆಯನ್ನೇ ಮುಖ್ಯ ಉದ್ಯಮವಾಗಿಸಿಕೊಂಡಿರುವ, ಮೀನು ಖಾದ್ಯವನ್ನು ಇಷ್ಟಪಡುವ ಕರಾವಳಿಗರಿಗೆ ಖುಷಿ ನೀಡಿದೆ. ಆದರೆ ಲಾಕ್‌ಡೌನ್ ಇರುವ ಕಾರಣ ಮೀನು ಮಾರಾಟ, ಸಾಗಾಟದ ಜತೆಯಲ್ಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ ಎಂಬ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಮೀನುಗಾರರು.

ಈಗಾಗಾಲೇ ಕಳೆದ 18 ದಿನಗಳ ಹಿಂದೆ ಎ.14ರವರೆಗೆ ದೇಶಾದ್ಯಂತ ಲಾಕ್‌ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಆಳ ಸಮುದ್ರ ಮೀನುಗಾರಿಕೆಯೂ ಸ್ಥಗಿತಗೊಂಡಿತ್ತು. ಇದರಿಂದಾಗಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ಸಾವಿರಾರು ಕಾರ್ಮಿಕರು ಬಹುತೇಕವಾಗಿ ಹಿಂತಿರುಗಿದ್ದರೆ, ಮತ್ತೆ ಕೆಲವರು ವಿವಿಧ ಕಡೆ ಆಶ್ರಯ ಪಡೆದಿದ್ದಾರೆ. ಹಳೆ ಬಂದರು ಧಕ್ಕೆ ಬಹುತೇಕ ಸ್ತಬ್ಧವಾಗಿದೆ. ಮೀನುಗಾರಿಕಾ ದೋಣಿಗಳು ದಡ ಸೇರಿವೆ. ಆಳ ಸಮುದ್ರ ಮೀನುಗಾರಿಕೆಗೆ ದೋಣಿಯೊಂದರಲ್ಲಿ ಕನಿಷ್ಠ ಏಳೆಂಟು ಮಂದಿಯಾದರೂ ಏಳೆಂಟು ದಿನಗಳ ಕಾಲ ಮೀನುಗಾರಿಕೆ ಮಾಡಬೇಕಾಗುತ್ತದೆ. ಸದ್ಯ ಜಿಲ್ಲೆಯ ಸಮುದ್ರ ತೀರದ ಮೀನುಗಾರರು ನಾಡದೋಣಿ ಮೀನುಗಾರಿಕೆಯನ್ನು ನಡೆಸುತ್ತಿದ್ದರು. ಆದರೆ ನಿನ್ನೆ ಕೆಲವು ಕಡೆ ಮೀನುಗಾರ ಮುಖಂಡರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೀನುಗಾರರ ಹಿತದೃಷ್ಟಿಯಿಂದ ನಾಡದೋಣಿಯಲ್ಲೂ ಮೀನುಗಾರಿಕೆ ಮಾಡದಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಇದೀಗ ಮೀನುಗಾರಿಕೆ ಆರಂಭವಾದರೂ ಮೀನನ್ನು ಮಾರಾಟ ಮಾಡುವುದು ಹೇಗೆ?, ಅದನ್ನು ಜನರಿಗೆ ತಲುಪಿಸುವುದು ಅಥವಾ ಫಿಶ್ ಮಿಲ್‌ಗಳಿಗೆ ಸಾಗಿಸುವುದು, ದಾಸ್ತಾನು ಮಾಡುವುದು, ರಫ್ತು ಮಾಡುವುದು (ಸಾಗಾಟ ) ಹೇಗೆ ಎಂಬ ಪ್ರಶ್ನೆಗಳು ಮೀನುಗಾರರದ್ದು.

ಈಗಾಗಲೇ ಜಾರಿಯಲ್ಲಿರುವ ಲಾಕ್‌ ಡೌನ್‌ ನಿಂದ ತಮ್ಮ ರಾಜ್ಯಕ್ಕೆ ಹಿಂತಿರುಗಲಾಗದ ಒಡಿಶಾ, ಜಾರ್ಖಂಡ್, ತಮಿಳುನಾಡು, ಆಂಧ್ರ ಪ್ರದೇಶದ ಮೊದಲಾದ ಕಡೆಯ ಸುಮಾರು 500ರಷ್ಟು ಕಾರ್ಮಿಕರು ಬಂದರಿನಲ್ಲಿಯೇ ಉಳಿದಿದ್ದಾರೆ. ಒಂದು ವೇಳೆ ಕೆಲ ದೋಣಿಗಳ ಮೂಲಕ ಆಳ ಸಮುದ್ರ ಮೀನುಗಾರಿಕೆ ಆರಂಭಿಸಬಹುದಾದರೂ ಮೀನು ಮಾರಾಟ, ಸಾಗಾಟದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟ ಸಾಧ್ಯ.

‘‘ಮಂಗಳೂರು ಬಂದರಿನಲ್ಲಿ ಲಾಕ್‌ ಡೌನ್ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದೀಚೆಗೆ 1200ರಷ್ಟು ಆಳ ಸಮುದ್ರ ಮೀನುಗಾರಿಕೆಯ ದೋಣಿಗಳು ಲಂಗರು ಹಾಕಿವೆ. ಅದರಲ್ಲಿ ಸುಮಾರು 700 ದೋಣಿಗಳ ಕಾರ್ಮಿಕರು ಹೊರ ರಾಜ್ಯದವರಾಗಿದ್ದು, ಅವರಲ್ಲಿ ಬಹುತೇಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಯಾವ ರೀತಿಯ ಮೀನುಗಾರಿಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಮ್ಮಲ್ಲಿ ಆಳ ಸಮುದ್ರ, ನಾಡದೋಣಿ, ಅಂತರ್‌ರಾಜ್ಯ, ಒಳನಾಡು ಮೀನುಗಾರಿಕೆ ಹೀಗೆ ಹಲವಾರು ರೀತಿಯ ಮೀನುಗಾರಿಕೆ ಇದೆ. ನಾಡದೋಣಿಯಾದರೆ ಸ್ಥಳೀಯವಾಗಿ ಹಿಡಿದ ಮೀನನ್ನು ಅಲ್ಲೇ ಬೀಚ್ ಬದಿಗಳಲ್ಲಿ ಮಾರಾಟ ಮಾಡಬಹುದು. ಉಳಿದಂತೆ ಅಂತರ್‌ರಾಜ್ಯ, ಒಳನಾಡು, ಆಳ ಸಮುದ್ರ ಮೀನುಗಾರಿಕೆಗೆ ಅವಕಾಶ ನೀಡಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ ಸಾಧ್ಯವಾಗಬಹುದು’’ ಎಂದು ಮೀನುಗಾರ ಮುಖಂಡ ನಿತಿನ್ ಕುಮಾರ್ ಅಭಿಪ್ರಾಯಿಸಿದ್ದಾರೆ.

‘‘ಕಳೆದ ಬಾರಿಯ ಲಾಕ್‌ ಡೌನ್ ಘೋಷಿಸಿದಾಗ ಅದಾಗಲೇ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಕೊನೆ ಕ್ಷಣದಲ್ಲಿ ಮೀನುಗಾರಿಕೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿ ಹಿಂತಿರುಗಬೇಕಾಯಿತು. ಕೆಲವು ದೋಣಿಗಳಿಗೆ ಮೀನು ಮಾರಾಟಕ್ಕೆ ಸಮಸ್ಯೆಯಾದರೆ, ಮತ್ತೆ ಕೆಲವರು ಬರಿಗೈಯಲ್ಲೇ ಹಿಂತಿರುಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಮೀನುಗಾರಿಕೆಗೆ ಅವಕಾಶ ನೀಡುವುದೆಂದರೆ ಮಾರುಕಟ್ಟೆ ಇಲ್ಲದೆ, ಲಾರಿ, ಟೆಂಪೋಗಳ ಬಳಕೆ ಮಾಡದೆ, ಕಾರ್ಮಿಕರಿಲ್ಲದೆ ಅಸಾಧ್ಯ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಯಾವ ರೀತಿಯ ನಿರ್ಣಯ ಕೈಗೊಳ್ಳಲಿದೆ ಎಂಬುದನ್ನು ನೋಡಬೇಕಾಗಿದೆ’’ ಎಂದು ನಿತಿನ್ ಕುಮಾರ್ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News