ಮೇ 3ರ ತನಕ ಲಾಕ್ ಡೌನ್ ಮುಂದುವರಿಕೆ: ಪ್ರಧಾನಿ ಮೋದಿ

Update: 2020-04-14 05:34 GMT

ಹೊಸದಿಲ್ಲಿ, ಎ.14: ಮಹಾಮಾರಿ ಕೊರೋನ ವೈರಸ್ ಸೋಂಕು ಹರಡುವುದರ ವಿರುದ್ಧ  ಹೋರಾಟ ಮಾಡುತ್ತಿದ್ದೇವೆ. ಲಾಕ್ ಡೌನ್ ಮಾಡಿದ್ದೇವೆ. ಲಾಕ್ ಡೌನ್ ಲಾಭ ಭಾರತಕ್ಕೆ ಸಿಕ್ಕಿದೆ. ಈಗಾಗಲೇ ಜಾರಿಯಲ್ಲಿರುವ ಲಾಕ್ ಡೌನ್ ನ್ನು ಮೇ 3ರ ತನಕ ವಿಸ್ತರಿಸಲಾಗುವುದು  ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದರು.

ದೇಶವನ್ನುದ್ದೇಶಿಸಿ ಮಂಗಳವಾರ  ಮಾತಾನಾಡಿದ ಅವರು  ಲಾಕ್ ಡೌನ್ ವಿಸ್ತರಣೆಯಾಗಿರುವ ಅವಧಿಯಲ್ಲಿ  ಜನರು ಏನೆಲ್ಲಾ ಮಾಡಬೇಕು  ಮತ್ತು ಏನೆಲ್ಲಾ ಮಾಡಬಾರದು ಎಂಬ ವಿಷಯಗಳ ಬಗ್ಗೆ ಸರಕಾರ  ಬುಧವಾರ ವಿವರವಾದ ಮಾರ್ಗಸೂಚಿಯನ್ನು ಹೊರಡಿಸಲಿದೆ ಎಂದರು 

ಎಲ್ಲಾ ದೇಶವಾಸಿಗಳ ತಪಸ್ಸಿನ ಫಲವಾಗಿ ಈ  ಹೋರಾಟದಲ್ಲಿ ಯಶಸ್ಸು ಸಾಧಿಸಿದ್ದೇವೆ. ಕೆಲವರಿಗೆ ಊಟಕ್ಕೆ, ಕೆಲವರಿಗೆ ಓಡಾಟಕ್ಕೆ ಈ ನಡುವೆ  ತೊಂದರೆಯಾಗಿದೆ ಎಂದು  ಹೇಳಿದರು.

19 ದಿನಗಳ ಲಾಕ್ ಡೌನ್ ನ್ನು ಮುಂದುವರಿಸಿದ ಪ್ರಧಾನಿ ಮೋದಿ  ಅವರು ಎ.20ರ ಬಳಿಕ ಪರಿಸ್ಥಿತಿಯನ್ನು  ಅವಲೋಕಿಸಿ ಮುಂದಿನ ನಿರ್ಧಾರ ಕೈಕೊಳ್ಳಲಾಗುವುದು ಎಂದರು

ಈಗಾಗಲೇ  ಆರ್ಥಿಕತೆಯ ವಿಷಯದಲ್ಲಿ ಭಾರತವು ಭಾರಿ ನಷ್ಟವನ್ನು ಅನುಭವಿಸಬೇಕಾದರೂ ಜನರ ಜೀವನವು ಹೆಚ್ಚು ಮಹತ್ವದ್ದಾಗಿದೆ ಎಂದು ಪ್ರಧಾನಿ ಹೇಳಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಯುವ ಭಾರತದ ಪ್ರಯತ್ನವು ವಿಶ್ವದ ಹೆಚ್ಚಿನ ದೇಶಗಳಿಗಿಂತ ಉತ್ತಮವಾಗಿದೆ. ಪ್ರಕರಣಗಳಲ್ಲಿ ಒಂದೇ ಒಂದು ಪ್ರಕರಣ ಇರುವುದಕ್ಕೂ ಮುಂಚೆಯೇ, ನಾವು ವಿದೇಶದಿಂದ ಬರುವ ಪ್ರಯಾಣಿಕರನ್ನು ಪರೀಕ್ಷಿಸಲು ಪ್ರಾರಂಭಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಜನರು, ವಿಶೇಷವಾಗಿ ವಲಸೆ ಕಾರ್ಮಿಕರು ಎದುರಿಸುತ್ತಿರುವ ಎಲ್ಲಾ ಕಷ್ಟಗಳ ನಡುವೆಯೂ ಕೋವಿಡ್ -19 ವಿರುದ್ಧದ ಸಾಮೂಹಿಕ ಹೋರಾಟಕ್ಕೆ ಧನ್ಯವಾದ ಸಲ್ಲಿಸಿದ ಮೋದಿ  ಅವರು ಸಾಮೂಹಿಕ ಪ್ರಯತ್ನಗಳನ್ನು ಶಿಸ್ತಿನ ಸೈನಿಕನ ಪ್ರಯತ್ನಕ್ಕೆ ಹೋಲಿಸಿದರು.

ದೇಶದ ಜನತೆಯ ಮುಂದಿಟ್ಟ ಸಪ್ತ ಸೂತ್ರ

ಭಾರತದಲ್ಲಿ ಕೊರೋನ ವೈರಸ್  ಸೋಂಕು ಹರಡುವುದನ್ನು   ತಡೆಯಲು ಪ್ರಧಾನಿ  ಮೋದಿಯವರು ಇದೇ ಸಂದರ್ಭದಲ್ಲಿ  ಏಳು ಸೂಚನೆಗಳು ಮತ್ತು  ಮುನ್ನೆಚ್ಚರಿಕೆಗಳನ್ನು ಒಳಗೊಂಡ ಪಟ್ಟಿಯನ್ನು ದೇಶದ ಜನತೆಯ  ಮುಂದಿಟ್ಟಿದ್ದಾರೆ, ವಿವರ ಇಂತಿವೆ

*ನಿಮ್ಮ ಮನೆಯ ಹಿರಿಯ ನಾಗರಿಕರನ್ನು, ಅದರಲ್ಲೂ ವಿಶೇಷವಾಗಿ ಸಮಸ್ಯೆಗಳಿರುವವರನ್ನು ಸರಿಯಾಗಿ ನೋಡಿಕೊಳ್ಳಿ.

* ಲಾಕ್‌ಡೌನ್ ಮತ್ತು ಸಾಮಾಜಿಕ ದೂರವನ್ನು ಸರಿಯಾಗಿ ಅನುಸರಿಸಬೇಕು. ಮನೆಯಲ್ಲಿ ತಯಾರಿಸಿದ ಫೇಸ್ ಕವರ್ ಮತ್ತು ಮಾಸ್ಕ್ ಗಳನ್ನು ಬಳಸಬೇಕು.

 * ಆಯುಷ್ ಸಚಿವಾಲಯ ನೀಡಿದ ನಿರ್ದೇಶನಗಳನ್ನು ಅನುಸರಿಸಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ.

 * ಕೊರೊನಾವೈರಸ್ ಹರಡುವಿಕೆಯನ್ನು ತಡೆಯಲು, ಆರೋಗ್ಯ ಸೇತು  ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

 * ಸಾಧ್ಯವಾದಲ್ಲೆಲ್ಲಾ ಬಡ ಕುಟುಂಬಗಳಿಗೆ ಸಹಾಯ ಮಾಡಿ.

 * ನಿಮ್ಮ ವ್ಯವಹಾರಗಳಲ್ಲಿ, ನಿಮ್ಮ ಸಹೋದ್ಯೋಗಿಗಳಿಗೆ ಸಹಾಯ ಮಾಡಿ, ನೌಕರರನ್ನು ಕೆಲಸದಿಂದ  ತೆಗದುಹಾಕಬೇಡಿ.

* ಕೊರೋನ ವೈರಸ್ 'ಸೈನಿಕರು' - ವೈದ್ಯರು, ದಾದಿಯರು, ನೈರ್ಮಲ್ಯ ಕಾರ್ಮಿಕರನ್ನು ಗೌರವಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News