ತೊಕ್ಕೊಟ್ಟು: ನೇತ್ರಾವತಿ ಸೇತುವೆಯಲ್ಲಿ ಅನಾಥವಾಗಿ ಕಾರು ಪತ್ತೆ; ಮಾಲಕ ನಾಪತ್ತೆ

Update: 2020-04-16 05:47 GMT
ವಿಕ್ರಂ ಗಟ್ಟಿ

ಮಂಗಳೂರು, ಎ.16: ಕಾರೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಮಾಲಕ ನಾಪತ್ತೆಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆ ಬಳಿ ಕಳೆದ ರಾತ್ರಿ ನಡೆದಿದೆ.

ನಾಪತ್ತೆಯಾದವರನ್ನು ಮೂಲತಃ ಸೋಮೇಶ್ವರ ಕೊಲ್ಯ ನಿವಾಸಿ ವಿಕ್ರಂ ಗಟ್ಟಿ(34) ಎಂದು ಗುರುತಿಸಲಾಗಿದೆ. ಸದ್ಯ ಕೊಣಾಜೆ ಪುಳಿಂಚಾಡಿ ಬಳಿ ಹೊಸ ಮನೆಯನ್ನು ಕಟ್ಟಿ ವಾಸವಾಗಿದ್ದ ವಿಕ್ರಂ ಗಟ್ಟಿಯವರ ಕಾರು ರಾತ್ರಿ 10:30ಕ್ಕೆ ತೊಕ್ಕೊಟ್ಟು ಕಡೆಯಿಂದ ಸೇತುವೆ ಪ್ರವೇಶಿಸುವಲ್ಲಿ ಪತ್ತೆಯಾಗಿದೆ. ಕಾರಿನ ಹೆಡ್ ಲೈಟ್ ಉರಿಯುತ್ತಿದ್ದು, ಬಾಗಿಲು ತೆರೆದ ಸ್ಥಿತಿಯಲ್ಲಿತ್ತೆನ್ನಲಾಗಿದೆ. ಈ ನಡುವೆ ವಿಕ್ರಂ ಗಟ್ಟಿ ನಾಪತ್ತೆಯಾಗಿದ್ದು, ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಂಕನಾಡಿ ನಗರ ಠಾಣೆ ಪೊಲೀಸರು ಆಗಮಿಸಿದ್ದು, ಶೋಧ ಮುಂದುವರಿಸಿದ್ದಾರೆ.

 ಕೊಣಾಜೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು

ಕೊಲ್ಯದಲ್ಲಿ ಗ್ಯಾರೇಜ್ ಉದ್ಯಮವನ್ನು‌ ನಡೆಸುತ್ತಿದ್ದ ವಿಕ್ರಮ್ ಗಟ್ಟಿ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಯದಲ್ಲಿ ವಾಸವಾಗಿದ್ದ ವಿಕ್ರಮ್ ಐದು ವರ್ಷಗಳ ಹಿಂದೆ ಕೈರಂಗಳದ ಪ್ರತಿಕ್ಷಾ ಎಂಬವರನ್ನು ವಿವಾಹವಾಗಿದ್ದರು. ಇವರಿಗೆ ನಾಲ್ಕು ವರ್ಷದ ಪುತ್ರ  ಇದ್ದಾನೆ. ಒಂದೂವರೆ ವರ್ಷದ ಹಿಂದೆ ಕೊಣಾಜೆಯ ಪುಳಿಂಚಾಡಿ ಬಳಿ ಪ್ರತಿಕ್ಷಾ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಮನೆ ನಿರ್ಮಿಸಿ ಅಲ್ಲೇ ಕುಟುಂಬ ಸಮೇತ ವಾಸವಾಗಿದ್ದರು. ಎ.15ರಿಂದ ವಿಕ್ರಂ ಗಟ್ಟಿ ನಾಪತ್ತೆಯಾಗಿರುವುದಾಗಿ ಅವರ ಸಹೋದರ‌ ಜೀವನ್ ಗಟ್ಟಿ ಕೊಣಾಜೆ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಎ.15ರಂದು ರಾತ್ರಿ ಪುಳಿಂಚಾಡಿಯ ಮನೆಯಲ್ಲಿ ವಿಕ್ರಮ್ ಅವರ ಪತ್ನಿಯ ತಂದೆ, ತಾಯಿ‌ ಹಾಗೂ‌ ಪತ್ನಿ ಮಗು ಇದ್ದರು ಎನ್ನಲಾಗಿದೆ. ರಾತ್ರಿ ಒಂಬತ್ತು ಗಂಟೆಯ ವೇಳೆಗೆ ಎಲ್ಲರೂ‌ ಟಿ.ವಿ. ವೀಕ್ಷಿಸುತ್ತಿದ್ದ ವೇಳೆ ವಿಕ್ರಮ್ ಕಾರಿನ ಬ್ಯಾಟರಿ ರೀಚಾರ್ಜ್ ಮಾಡುವ ಉದ್ದೇಶದಿಂದ ಕೊಣಾಜೆ ಪದವು ತನಕ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಬಳಿಕ ಅವರ ಮೊಬೈಲ್ ಪೋನ್  ಸ್ವಿಚ್ ಆಫ್ ಬರುತ್ತಿದ್ದು, ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಕೊಣಾಜೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News