ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕೆಟ್ಟ ಚಿತ್ರಣ ನೀಡುವ ಸಮೀಕ್ಷೆಗಳ ಹುನ್ನಾರ ಬಯಲುಗೊಳಿಸುವೆವು

Update: 2020-05-03 17:04 GMT

ಹೊಸದಿಲ್ಲಿ, ಮೇ 3: ಭಾರತದಲ್ಲಿ ಮಾಧ್ಯಮಗಳು ಪತ್ರಿಕಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅನುಭವಿಸುತ್ತಿವೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದು ದೇಶದಲ್ಲಿನ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ‘ಕೆಟ್ಟ ಚಿತ್ರಣವನ್ನು ನೀಡಲು ಬಯಸುತ್ತಿರುವ ಕೆಲವು ಸಮೀಕ್ಷೆಗಳ ಹುನ್ನಾರವನ್ನು ಬಯಲಿಗೆಳೆಯುವುದಾಗಿ ಕಿಡಿ ಕಾರಿದ್ದಾರೆ.

ವಿಶ್ವಪತ್ರಿಕಾ ಸ್ವಾತಂತ್ರದ ದಿನಾಚರಣೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಜನರಿಗೆ ಮಾಹಿತಿಯನ್ನು ನೀಡುವ ಹಾಗೂ ಅರಿವು ಮಾಡಿಸುವ ಶಕ್ತಿ ಮಾಧ್ಯಮಗಳಿಗೆ ಇವೆ ಎಂದವರು ಟ್ವೀಟಿಸಿದ್ದಾರೆ.

‘‘ಭಾರತದಲ್ಲಿ ಮಾಧ್ಯಮಗಳು ಸಂಪೂರ್ಣ ಪತ್ರಿಕಾ ಸ್ವಾತಂತ್ರ್ಯವನ್ನು ಅನುಭವಿಸುತ್ತಿವೆ. ಭಾರತದಲ್ಲಿನ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಕೆಟ್ಟದಾದ ಚಿತ್ರಣ ನೀಡುವ ಸಮೀಕ್ಷೆಗಳ ಸಂಚನ್ನು ಶೀಘ್ರದಲ್ಲೇ ನಾವು ಬಯಲಿಗೆಳೆಯಲಿದ್ದೇವೆ’’ ಎಂದವರು ಹೇಳಿದ್ದಾರೆ.

ರಿಪೋರ್ಟರ್ಸ್‌ ವಿದೌಟ್ ಬಾರ್ಡರ್ಸ್‌ (ಸೀಮಾತೀತ ವರದಿಗಾರರು) ಎಂಬ ಅಂತಾರಾಷ್ಟ್ರೀಯ ಸಂಘಟನೆಯು ಕಳೆದ ವಾರ ಪ್ರಕಟಿಸಿದ ವರದಿಯಲ್ಲಿ, 180 ದೇಶಗಳ ಪತ್ರಿಕಾ ಸ್ವಾತಂತ್ರ್ಯದ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತವು 142ನೇ ರ್ಯಾಂಕ್ ಪಡೆದಿದ್ದು, ಕಳೆದ ವರ್ಷಕ್ಕಿಂತ ಎರಡು ಸ್ಥಾನಗಳಷ್ಟು ಕೆಳಗೆ ಕುಸಿದಿದೆ.

ಈ ಮಧ್ಯೆ ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಹೇಳಿಕೆಯೊಂದನ್ನು ನೀಡಿ, ಬಿಜೆಪಿಯು ಪ್ರಜಾಪ್ರಭುತ್ವದ ನಾಲ್ಕನೆ ಸ್ತಂಭವಾದ ಮಾಧ್ಯಮರಂಗವನ್ನು ನಾಶಪಡಿಸಲು ಕಟಿಬದ್ಧವಾಗಿದೆ ಎಂದು ಟೀಕಿಸಿದೆ. “ಡರೋ ಮತ್ (ಹೆದರದಿರಿ) ಎಂದು ನಾವು ಎಲ್ಲಾ ಪತ್ರಕರ್ತರಿಗೆ ಹೇಳಲು ಇಚ್ಛಿಸುತ್ತೇವೆ’’ ಎಂಬುದಾಗಿ ಅದು ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News