ಜೂನ್‍ನಲ್ಲಿ ಎಸೆಸೆಲ್ಸಿ ಪರೀಕ್ಷೆ ಆತುರದ ನಿರ್ಧಾರ: ಪಿ.ವಿ.ಮೊಹನ್

Update: 2020-05-08 09:58 GMT

ಮಂಗಳೂರು, ಮೇ 8: ಕರ್ನಾಟಕ ಸರಕಾರವು ಜೂನ್ ತಿಂಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮವು ಅತ್ಯಂತ ಆತುರದ ಹೆಜ್ಜೆಯಾಗಿದೆ. ಆತ್ಮಘಾತುಕ ಕ್ರಮವಾಗಿದೆ. ಪರೀಕ್ಷೆಗಳನ್ನು ಸದ್ಯದ ಪರಿಸ್ಥಿತಿ ತಿಳಿಯಾದ ಮೇಲೆ  ಜುಲೈ ಕೊನೆಯ ವಾರ ಅಥವಾ ಆಗಸ್ಟ್ ನಲ್ಲಿ ಮಾಡುವುದು ಸೂಕ್ತ ಎಂದು ಕೆಪಿಸಿಸಿ ಅಭಿಪ್ರಾಯಿಸಿದೆ.

ಕೊರೋನ ಸೋಂಕು ನಿರ್ಬಂಧದಲ್ಲಿ ಮೇ ಮತ್ತು ಜೂನ್ ತಿಂಗಳ  ಮೊದಲ ವಾರ  ಬಹಳ ನಿರ್ಣಾಯಕವೆಂದು ಹಲವು  ಸಾಂಕ್ರಾಮಿಕ ರೋಗ ತಜ್ಞರು, ವೈದ್ಯಕೀಯ ಕ್ಷೇತ್ರದ ತಜ್ಞರು ಈಗಾಗಲೇ ಹೇಳಿದ್ದಾರೆ. ದೇಶದಲ್ಲಿ ಈ ವೈರಸ್ ಪ್ರಕರಣಗಳು ಬರುವ ಜೂನ್-ಜುಲೈನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪುವ ಅಪಾಯವಿದೆ ಎಂದು  ಭಾರತದ ಉನ್ನತ ವೈದ್ಯಕೀಯ ಸಂಸ್ಥೆಯಾದ ಏಮ್ಸ್ ಹೇಳಿದೆ. ದೇಶದಲ್ಲಿ ಕೊವಿಡ್-19 ಪ್ರಕರಣಗಳು ಈಗ 50 ಸಾವಿರ ಗಡಿ ದಾಟಿದ್ದು, ಇದರ ಆಧಾರದ ಮೇಲೆ ಮತ್ತು ಮಾಹಿತಿಯ ಪ್ರಕಾರ ಬರುವ ಜೂನ್-ಜುಲೈನಲ್ಲಿ ಕೊರೋನ ಹರಡುವಿಕೆ ಪ್ರಮಾಣ ಬಹಳ ಉತ್ತುಂಗಕ್ಕೇರುವ ಸಾಧ್ಯತೆ ಇದೆ ಎಂದಿದೆ. ಮಾರ್ಚ್ ನಲ್ಲಿ ಮೊದಲ ಲಾಕ್ ಡೌನ್ 25ರಂದು ಕೋವಿಡ್ ಸೋಂಕಿನ ಪ್ರಕರಣಗಳು 657 ಇದ್ದು,  130 ಜಿಲ್ಲೆಗಳಲ್ಲಿ ಹಂಚಿಹೋಗಿತ್ತು. ಮೇ 3ರಂದು ಸೋಂಕಿನ ಪ್ರಕರಣಗಳು 42, 836  ದಾಖಲಾಗಿದ್ದು, 401  ಜಿಲ್ಲೆಗಳಿಗೆ ಹಬ್ಬಿದೆ. ಮೇ ತಿಂಗಳ ಅಂತ್ಯದಲ್ಲಿ  3 ಲಕ್ಷ ಮುಟ್ಟುವ ಸಾಧ್ಯತೆಯು ಹೆಚ್ಚಿದೆ.  ಮೇ 17 ರ ತನಕ ಲಾಕ್ ಡೌನ್ ಇದೆ. ಪರಿಸ್ಠಿತಿ ಮತ್ತಷ್ಟು ಉಲ್ಬಣಗೊಂಡರೆ ಲಾಕ್ ಡೌನ್ ಅನ್ನು ಮುಂದುವರಿಸುವ ಸಾದ್ಯತೆ ಇದೆ. ಕೊರೋನ ಸಂಬಂಧಿಸಿ ವಿವಿಧ ದೇಶಗಳಲ್ಲಿ ಮತ್ತು ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯೋಗ ಕಳಕೊಂಡವರು, ವೃತ್ತಿಪರರು, ಉದ್ದಿಮೆದಾರರು ಇತ್ಯಾದಿ ಸುಮಾರು 75,000  ಕನ್ನಡಿಗರು ಮೇ ತಿಂಗಳ ಅಂತ್ಯದೊಳಗೆ ಬರಲಿದ್ದಾರೆ. ಇದನ್ನು ನಿಭಾಯಿಸುವುದು ಕರ್ನಾಟಕ ಸರ್ಕಾರ ಕ್ಕೆ ಇದೊಂದು ದೊಡ್ಡ ಸವಾಲಾಗಿದೆ. ಇದರ ನಡುವೆ ಪರೀಕ್ಷೆ ನಡೆಸುವ ಚಿಂತನೆಯು ದೊಡ್ಡ ಪ್ರಮಾದಕ್ಕೆ ಎಡೆಮಾಡಲಿದೆ ಎಂದು ಕೆಪಿಸಿಸಿ ವಕ್ತಾರ ಪಿ.ವಿ.ಮೋಹನ್ ಎಚ್ಚರಿಸಿದ್ದಾರೆ.

ಕೋವಿಡ್ ಸೋಂಕು ಪ್ರಕರಣಗಳಲ್ಲಿ ಶೇ.80 ರಷ್ಟು ಹೆಚ್ಚಿನ ಸಂಖ್ಯೆಯ ಸೋಂಕಿನಲ್ಲಿ ರೋಗದ ಲಕ್ಷಣಗಳು ಇಲ್ಲದಿರುವುದರಿಂದ ಕ್ವಾರಂಟೈನ್ ಮತ್ತು ಐಷೋಲೇಶನ್ ವ್ಯವಸ್ಥೆಗಳಲ್ಲಿ ಹೆಚ್ಚು ಕಡಿಮೆಯಾದರೆ ರೋಗವು ಹರಡುವ ಸಂಭವ ಇದೆ. ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯವಾದರೂ ಅದರಲ್ಲಿ ಸಮಾಜದ ಪಾತ್ರ ಬಹಳಷ್ಟು ಪ್ರಮುಖ ಮತ್ತು ನಿರ್ಣಾಯಕ ವಾಗಿದೆ. ಸದ್ಯ ವಾತಾವರಣದಲ್ಲಿ ಇಡೀ ಸಮಾಜವೇ ಒತ್ತಡ, ಯಾತನೆ ಮತ್ತು ಅತಂತ್ರ ಸ್ಠಿತಿಯಲ್ಲಿದೆ. ಆರ್ಥಿಕವಾಗಿ ಕುಸಿದಿದೆ. ಇದೊಂದು ದೀರ್ಘಕಾಲೀನ ಹೋರಾಟವಾಗಿರುವುದರಿಂದ, ಪ್ರಾಯೋಗಿಕ ಮತ್ತು ವಾಸ್ತವಿಕತೆ ಅರಿತು, ಈ ಸಮಯದಲ್ಲಿ ಪರೀಕ್ಷೆಗಳನ್ನು ಮುಂದೂಡುವುದು ಉಚಿತ ಮತ್ತು ವಿವೇಕ ಕ್ರಮವಾಗಿದೆ

ಸುಮಾರು 9 ಲಕ್ಷ ಮಕ್ಕಳು ಎಸೆಸೆಲ್ಸಿ ಪರೀಕ್ಷೆ ಗೆ ಹಾಜರಾಗುತ್ತಾರೆ. ಸರಕಾರವು ಫೇಸ್‌ಬುಕ್‌ ಮೂಲಕ  ಎಸೆಸೆಲ್ಸಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನುದ್ದೇಶಿಸಿ  ಮಾತಾಡುತ್ತದೆ. ಎಷ್ಟು ಮಂದಿ ಮಕ್ಕಳ ಹತ್ತಿರ ಫೇಸ್ ಬುಕ್ ಇದೆ? ಎಷ್ಟು ಮಂದಿ ಮಕ್ಕಳ ಮನೆಯಲ್ಲಿ ಟಿವಿ ಇದೆ?  ಬಡವರ ಮಕ್ಕಳಿಗೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳಿಗೆ  ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ಪುನರ್‌ಮನನ ಕಾರ್ಯಕ್ರಮವನ್ನು  ವೀಕ್ಷಿಸಿಸಲು ಸಮುದಾಯ ಭವನಗಳಲ್ಲಿ ಟಿವಿಗಳನ್ನು ಸಜ್ಜುಗೊಳಿಸಿ, ಅವರೆಲ್ಲ ರನ್ನು ಪರೀಕ್ಷೆಗೆ ಸಿದ್ದಗೊಳಿಸುವ ಸಾಮಾಜಿಕ ನ್ಯಾಯವನ್ನು ಇವತ್ತು ಮಾನ್ಯ ಸಚಿವರು ತೋರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶುಲ್ಕಗಳನ್ನು ಹೆಚ್ಚಿಸದಿರುವಂತೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಸರ್ಕಾರ ನೀಡಿರುವ ನಿರ್ದೇಶನವನ್ನು ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಸರ್ಕಾರದ ಅಧಿಸೂಚನೆ ಅನ್ವಯ ಪ್ರತಿವರ್ಷ ಶೇ.15ರಷ್ಟು ಬೋಧನಾ ಶುಲ್ಕವನ್ನು ಹೆಚ್ಚಿಸಲು ಶಾಲಾಡಳಿತ ಮಂಡಳಿಗಳಿಗೆ ಅವಕಾಶವಿದೆ. ಆದರೆ, ಕೊರೋನ ವೈರಾಣು ಸೋಂಕಿನ ಭೀತಿಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪೋಷಕರಿಗೆ ಶಾಲಾ ಶುಲ್ಕದ ಹೆಚ್ಚಳ ಹೊರೆಯಾಗಿ ಪರಿಣಮಿಸುವುದರಿಂದ, ಈ ಬಾರಿ ಶುಲ್ಕವನ್ನು ಹೆಚ್ಚಿಸದಿರುವಂತೆ ಸರ್ಕಾರ ತಿಳಿಸಿದೆ. ಆದರೆ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಿಸಿದಲ್ಲದೆ ಮೂರು ದಿನಗಳಲ್ಲಿ ಕಟ್ಟಿ ಸೀಟ್ ಅನ್ನು ಖಾತ್ರಿ ಮಾಡಬೇಕೆಂದು ತಾಕೀತನ್ನು ಮಾಡಿದೆ. ಸರ್ಕಾರದ ಸೂಚನೆ ಬಾರದೆ ಈಗಾಗಲೇ ದಾಖಲಾತಿ ಪ್ರಕ್ರಿಯೆ ನಡೆಸುವಂತಿಲ್ಲ ಎಂದವರು ಹೇಳಿದ್ದಾರೆ.

ಆನ್ ಲೈನ್ ಮೂಲಕ ಸೀಟ್ ಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಧಾರಾಳವಾಗಿ ನಡೆಯುತ್ತಿವೆ. ಸರ್ಕಾರದ  ಸೂಚನೆಗೆ ಕಿಮ್ಮತ್ ಬೆಲೆಯನ್ನುಖಾಸಗಿ ಶಾಲೆ ಮತ್ತು ಕಾಲೇಜು ಆಡಳಿತ ಮಂಡಳಿಯ ನೀಡಲಿಲ್ಲ. ಸರ್ಕಾರವು ಕೂಡಲೇ ನಡು ಪ್ರವೇಶವನ್ನು ಮಾಡ ಬೇಕು. ಕೋವಿಡ್–‌ 19ರ ಭೀತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು–ಪೋಷಕರ ಹಿತಾಸಕ್ತಿಯನ್ನು ರಕ್ಷಿಸುವ ಬದಲು ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆಗೆ ಶಾಮೀಲಾಗಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಇದನ್ನು ಮೊದಲು ಸರಿಪಡಿಸಿ. ಮತ್ತು ಇದೇ ಸರ್ಕಾರವು ಇನ್ನೊಂದೆಡೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ಪದವಿಯ (ಎಂ.ಡಿ.) ಸೀಟಿನ ವಾರ್ಷಿಕ ಶುಲ್ಕವನ್ನು ಭಾರಿ ‍ಪ್ರಮಾಣದಲ್ಲಿ ಹೆಚ್ಚಿಸಿದೆ . ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸರ್ಕಾರಿ ಸೀಟಿಗೆ ಈವರೆಗೆ ಇದ್ದ ವಾರ್ಷಿಕ ಶುಲ್ಕವನ್ನು ಶೇ.23ರಷ್ಟು ಹಾಗೂ ಕೌನ್ಸೆಲಿಂಗ್‌ ಮೂಲಕ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದವರಿಗೆ ಶುಲ್ಕವನ್ನು ಶೇ.32ರಷ್ಟು ಹೆಚ್ಚಿಸಲಾಗಿದೆ. ಈ ಸೀಟು ಗಳ ಶುಲ್ಕವನ್ನು ಕಳೆದ ವರ್ಷವಷ್ಟೆ ದೊಡ್ಡ ಪ್ರಮಾಣದಲ್ಲಿ ಏರಿಸಲಾಗಿದೆ. ಈ ರೀತಿ ಮಾರಕವಾಗಿ ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚೆಲ್ಲಾಟವಾಡುತ್ತಿರುವುದನ್ನು ಖಂಡನೀಯ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವಾಗ ಬೇಕಾಬಿಟ್ಟಿ ಯಾಗಿ ಮಾತಾಡುತ್ತಿದ್ದ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಈಗ ಯಾಕೆ ಸುಮ್ಮನೆ ಕೂತಿದೆ? ಇದು ಕೂಡ ಬಿಜೆಪಿಯ ಕಪಟ ನಾಟಕದ ಪ್ರಮುಖ ಪಾತ್ರಧಾರಿ ಎಂದು ಪಿ.ವಿ.ಮೋಹನ್ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News