×
Ad

ಕೊರೋನಾ ವೈರಸ್: ಕೇವಲ ತೀವ್ರತರ ಪ್ರಕರಣಗಳನ್ನಷ್ಟೇ ಬಿಡುಗಡೆಗೆ ಮುನ್ನ ಪರೀಕ್ಷಿಸಲು ಸೂಚನೆ

Update: 2020-05-09 23:10 IST

ಹೊಸದಿಲ್ಲಿ: ಕೋವಿಡ್-19 ರೋಗಿಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ಪರಿಷ್ಕರಿಸಿದೆ. ಇದರ ಪ್ರಕಾರ ಗಂಭೀರ ಪ್ರಕರಣಗಳನ್ನಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೆ ಮುನ್ನ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ.

ಎರಡು ಪುಟಗಳ ಪರಿಷ್ಕೃತ ಮಾರ್ಗಸೂಚಿ ತಕ್ಷಣದಿಂದ ಜಾರಿಗೆ ಬಂದಿದೆ. ಈವರೆಗೆ ಇದ್ದ ಮಾರ್ಗಸೂಚಿಯ ಪ್ರಕಾರ, ಸೋಂಕಿತರನ್ನು 14 ಮತ್ತು 21 ದಿನಗಳಲ್ಲಿ ಎರಡು ಬಾರಿ ಪರೀಕ್ಷೆಗೆ ಗುರಿಪಡಿಸಿ, ವರದಿ ನೆಗೆಟಿವ್ ಬಂದಲ್ಲಿ ಮಾತ್ರ ಅವರನ್ನು ಬಿಡುಗಡೆ ಮಾಡಲು ಅವಕಾಶವಿತ್ತು.

ಹೊಸ ಮಾರ್ಗಸೂಚಿಯಲ್ಲಿ ತೀರಾ ಅಲ್ಪ ಪ್ರಮಾಣದ ಸೋಂಕು, ಅಲ್ಪ ಪ್ರಮಾಣದ ಸೋಂಕು, ರೋಗಲಕ್ಷಣ ಪೂರ್ವ ಹಾಗೂ ಮಂದ ಪ್ರಮಾಣದ ಪ್ರಕರಣಗಳಲ್ಲಿ ರೋಗಿಗಳ ಬಿಡುಗಡೆಗೆ ಮುನ್ನ ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ. ರೋಗಲಕ್ಷಣ ಕಂಡುಬಂದ ಸೋಂಕಿತರಲ್ಲಿ ಮೂರು ದಿನಗಳ ಕಾಲ ಜ್ವರ ಇಲ್ಲದಿದ್ದಲ್ಲಿ 10 ದಿನಗಳ ಬಳಿಕ ಅವರನ್ನು ಬಿಡುಗಡೆ ಮಾಡಬಹುದಾಗಿದೆ ಎಂದು ಗೃಹ ಸಚಿವಾಲಯದ ಹೇಳಿಕೆ ಸ್ಪಷ್ಟಪಡಿಸಿದೆ.

ಆದಾಗ್ಯೂ ಬಿಡುಗಡೆ ಹೊಂದಿದ ರೋಗಿಗಳು ಮುಂದೆ ಏಳು ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿ ವಾಸಿಸಬೇಕು. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಬಳಿಕ ರೋಗಿಗಳಲ್ಲಿ ಜ್ವರ, ಕಫ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ತಕ್ಷಣ ಕೋವಿಡ್ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಲಾಗಿದೆ. ಅಂಥವರ ಆರೋಗ್ಯದ ಮೇಲೆ ಟೆಲೆಕಾನ್ಫರೆನ್ಸ್ ಮೂಲಕ ಮತ್ತೆ 14 ದಿನಗಳ ಕಾಲ ನಿಗಾ ಇಡಲಾಗುತ್ತದೆ.

ಅಂತೆಯೇ ಮಂದ ಪ್ರಕರಣಗಳಲ್ಲಿ, ದೇಹದ ಉಷ್ಣತೆ ಮತ್ತು ಆಮ್ಲಜನಕದ ಶುದ್ಧತ್ವವನ್ನು ಗಮನಿಸಲಾಗುತ್ತದೆ. ಮೂರು ದಿನಗಳ ಒಳಗಾಗಿ ಜ್ವರ ಇಳಿಮುಖವಾದಲ್ಲಿ ಮತ್ತು ರೋಗಿಯಲ್ಲಿ ಆಮ್ಲಜನಕ ಶುದ್ಧತೆ ಪ್ರಮಾಣ ಶೇಕಡ 95 ಇದ್ದಲ್ಲಿ, ಮುಂದಿನ ನಾಲ್ಕು ದಿನಗಳ ಕಾಲ ಕೃತಕ ಉಸಿರಾಟ ಅಗತ್ಯ ಇಲ್ಲ ಎಂದಾದಲ್ಲಿ ರೋಗಲಕ್ಷಣ ಕಾಣಿಸಿಕೊಂಡ 10 ದಿನಗಳ ಬಳಿಕ ಅವರನ್ನು ಬಿಡುಗಡೆ ಮಾಡಬಹುದಾಗಿದೆ. ಆದರೆ ಜ್ವರಕ್ಕೆ ಔಷಧಿ ನೀಡದಿದ್ದರೂ, ಕೊನೆಯ ಮೂರು ದಿನ ಯಾವುದೇ ಜ್ವರ, ಉಸಿರಾಟದ ತೊಂದರೆ ಇರಬಾರದು.

ಪರೀಕ್ಷೆ ಇಲ್ಲದೇ ರೋಗಿಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡುವ ಈ ಪರಿಷ್ಕೃತ ಮಾರ್ಗಸೂಚಿ ಆಪಾಯಕಾರಿ ಎಂದು ಎಐಐಎಂಎಸ್ ಸನಿವಾಸ ವೈದ್ಯರ ಸಂಘದ ಪ್ರಧಾನ ಕಾರ್ಯದಶಿ ಶ್ರೀನಿವಾಸ್ ರಾಜಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇಂಥವರನ್ನು ವಾಪಾಸು ಕಳುಹಿಸುವುದರಿಂದ ಹಲವು ಮಂದಿಗೆ ಆತ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ. ಪರೀಕ್ಷೆಗೆ ಸಾಕಷ್ಟು ಸೌಲಭ್ಯ ಕಲ್ಪಿಸದೇ ಸರ್ಕಾರ 40 ದಿನಗಳಿಂದ ಏನು ಮಾಡುತ್ತಿದೆ? ಪ್ರಸ್ತುತ ಅಂದಾಜಿನಂತೆ ಎರಡು ಲಕ್ಷ ಅಥವಾ ಅಧಿಕ ಮಂದಿಯನ್ನು ಬಲಿಕೊಡಲು ಸರ್ಕಾರ ಸಿದ್ಧವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಏಕ ಪರೀಕ್ಷೆ ಮಾನದಂಡ ತೀವ್ರತರದ ವೈರಸ್ ಸೋಂಕು ಪ್ರಕರಣಗಳಿಗೆ ಮತ್ತು ಪ್ರತಿರೋಧ ಶಕ್ತಿಯ ಸಮಸ್ಯೆ ಇರುವ ಎಚ್‌ಐವಿ ಮತ್ತಿತರ ರೋಗಿಗಳಿಗೂ ಅನ್ವಯಿಸುತ್ತದೆ. ಶನಿವಾರ ಮುಂಜಾನೆ ವೇಳೆಗೆ ದೇಶದ ಒಟ್ಟು ಸೋಂಕಿತರ ಸಂರ್ಖಯೆ 59662 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News