ಖಾಸಗಿ ಬಸ್ ನೌಕರರಿಗೆ ಮಾಲಕರು ಪರಿಹಾರಧನ ನೀಡಲಿ: ಡಿವೈಎಫ್‌ಐ

Update: 2020-05-23 09:25 GMT

ಮಂಗಳೂರು, ಮೇ 23: ಅವಿಭಜಿತ ದ.ಕ. ಜಿಲ್ಲೆಯ ಜೀವನಾಡಿಯಾಗಿರುವ ಖಾಸಗಿ ಬಸ್‌ಗಳಲ್ಲಿ ಕನಿಷ್ಠ ಹದಿನೈದು ಸಾವಿರದಷ್ಟು ಚಾಲಕರು, ನಿರ್ವಾಹಕರು ಸೇರಿದಂತೆ ವಿವಿಧ ರೀತಿಯ ಕಾರ್ಮಿಕರಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ತಿಂಗಳಲ್ಲಿ ಉದ್ಯೋಗ ಇಲ್ಲದೆ ಮನೆಯಲ್ಲಿ ಉಳಿದಿರುವ ಈ ವಿಭಾಗಕ್ಕೆ ಯಾವುದೇ ವೇತನ, ಸರಕಾರದ ಪ್ಯಾಕೇಜುಗಳು ದೊರಕಿಲ್ಲ. ಇದರಿಂದ ಬಸ್ ನೌಕರ, ಕಾರ್ಮಿಕರ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿದ್ದು ಬಸ್ ಮಾಲಕರು ತಕ್ಷಣವೇ ತಿಂಗಳಿಗೆ ತಲಾ ಐದು ಸಾವಿರದಂತೆ ಹತ್ತು ಸಾವಿರ ರೂ.ವನ್ನು ಬಸ್ ಮಾಲಕರು ತಾತ್ಕಾಲಿಕ ಪರಿಹಾರವಾಗಿ ನೀಡಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ಲಾಕ್‌ಡೌನ್‌ನಿಂದ ಉಂಟಾದ ಬಿಕ್ಕಟ್ಟು ಖಾಸಗಿ ಬಸ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಲ್ಲಿ ದುಡಿಯುವ ಕಾರ್ಮಿಕರು ದುಡಿಮೆ ಇಲ್ಲದೆ ಮನೆಗಳಲ್ಲಿ ಉಳಿದಿದ್ದಾರೆ. ಖಾಸಗಿ ಸಾರಿಗೆ ಉದ್ಯಮಪತಿಗಳ ಗೊಂದಲಗಳಿಂದಾಗಿ ಬಹುತೇಕ ಬಸ್ ನೌಕರರು ಕಾರ್ಮಿಕ ಇಲಾಖೆಗಳಲ್ಲಿ ನೋಂದಣಿಗೊಂಡಿಲ್ಲ. ದಶಕಗಳ ಕಾಲದ ದುಡಿಮೆಯ ಹೊರತಾಗಿಯು ಕಾರ್ಮಿಕ ಕಾಯ್ಧೆಯ ಯಾವ ಸವಲತ್ತುಗಳೂ ಅವರಿಗೆ ದೊರಕುತ್ತಿಲ್ಲ. ಲಾಕ್‌ಡೌನ್ ಹಿನ್ನ್ನೆಲೆಯಲ್ಲಿ ಸರಕಾರ ಘೋಷಿಸಿದ ಪ್ಯಾಕೇಜುಗಳಲ್ಲೂ ಇವರನ್ನು ಹೊರಗಿಡಲಾಗಿದೆ. ಎಲ್ಲ ನೌಕರರಿಗೂ ಲಾಕ್‌ಡೌನ್ ಅವಧಿಯಲ್ಲಿ ರಜೆ ಸಹಿತ ಪೂರ್ಣ ವೇತನ ನೀಡಬೇಕು ಎಂದು ಸರಕಾರದ ಆದೇಶವಿದ್ದರೂ ಬಸ್ ಮಾಲಕರು ಆರ್ಥಿಕ ಸಂಕಷ್ಟದ ಕಾರಣ ಮುಂದಿಟ್ಟು ಸರಕಾರದ ಆದೇಶವನ್ನು ಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಸಂಘಟಿತ ವಲಯದ ಬಸ್ ಚಾಲಕ, ನಿರ್ವಾಹಕ ಸಹಿತ ಸಿಬ್ಬಂದಿ ವರ್ಗವು ವೇತನ ಸಹಿತ ಯಾವುದೇ ಆದಾಯವಿಲ್ಲದೆ ಕಠಿಣ ಪರಿಸ್ಥಿತಿಗೆ ಈಡಾಗಿದ್ದಾರೆ. ಅವರ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿವೆ. ದಿನದ 15-16 ತಾಸು ಯಾವುದೇ ಭದ್ರತೆ ಇಲ್ಲದೆ ದುಡಿಯುವ ಬಸ್ ನೌಕರರನ್ನು ಈ ರೀತಿ ಕಡೆಗಣಿಸುವುದು ಸರಿಯಲ್ಲ. ರಸ್ತೆ ತೆರಿಗೆ, ಆಸನ ತೆರಿಗೆ ವಿನಾಯತಿ, ಟಿಕೆಟ್ ದರ ಏರಿಕೆ ಸಹಿತ ಮಾಲಕರ ಪರವಾದ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿರುವ ಖಾಸಗಿ ಬಸ್ ಮಾಲಕ ಸಂಘಗಳು ಅದೇ ಸಂದರ್ಭ ತಮ್ಮ ಬಸ್ಸುಗಳಲ್ಲಿ ದುಡಿಯುವ ಕಾರ್ಮಿಕರನ್ನು ಪೂರ್ಣವಾಗಿ ಕಡೆಗಣಿಸಿರುವುದು ಸರಿಯಲ್ಲ. ಮಾಲಕರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಲಾಕ್‌ಡೌನ್ ಅವಧಿಯ ವೇತನ, ಮುಂದಿನ ದಿನಗಳ ದುಡಿಮೆಯ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಬೇಕು. ಸರಕಾರದ ಜೊತೆಯ ಮಾತುಕತೆಗಳ ಸಂದರ್ಭ ನೌಕರರ ಬೇಡಿಕೆಗಳನ್ನು ಮುಂದಿಟ್ಟು ಚರ್ಚಿಸಬೇಕು ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News