ಸ್ವರ್ಣಾ ನದಿಗೆ ಬ್ಯಾರೇಜ್ ನಿರ್ಮಿಸುವ ಯೋಜನೆಗೆ ಸ್ಥಳ ಪರಿಶೀಲನೆ

Update: 2020-05-31 16:46 GMT

ಉಡುಪಿ, ಮೇ 31: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹರಿಯುತ್ತಿರುವ ಸ್ವರ್ಣಾ ನದಿಗೆ ಮೂರು ಕಡೆಗಳಲ್ಲಿ ಬ್ಯಾರೇಜ್ ನಿರ್ಮಿಸಿ ಉಪ್ಪು ನೀರನ್ನು ತಡೆಗಟ್ಟುವ ಜೊತೆ ಕೃಷಿ ಚಟುವಟಿಕೆಗಳಿಗೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಸಂಬಂಧಿಸಿದಂತೆ ಇಂದು ಸ್ಥಳ ಪರಿಶೀಲನೆ ಮಾಡಲಾಯಿತು.

ಇಲಾಖಾ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ಈ ಯೋಜನೆಯಲ್ಲಿ ಸ್ವರ್ಣಾ ನದಿಗೆ ಕಲ್ಯಾಣಪುರ ಸೇತುವೆ ಬಳಿಯ ನಯಂಪಳ್ಳಿ ಎಂಬಲ್ಲಿ ಬ್ಯಾರೇಜ್ ನಿರ್ಮಿಸಿ ಉಪ್ಪು ನೀರನ್ನು ತಡೆಗಟ್ಟುವುದು, ನಂತರ ಪೆರಂಪಳ್ಳಿ ಹಾಗೂ ಕೀಳಿಂಜೆ ಎಂಬಲ್ಲಿ ಬ್ಯಾರೇಜ್ ನಿರ್ಮಿಸಿ ನೀರನ್ನು ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಅಂತರ್ಜಲ ವೃದ್ಧಿಸುವ ಜತೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಬೇಕಾದಷ್ಟು ನೀರನ್ನು ಒದಗಿಸಬಹುದಾಗಿದೆ ಎಂದು ತಿಳಿಸಿದರು.

ಅಂದಾಜು 300 ಕೋಟಿ ವೆಚ್ಚದ ಈ ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಿಸಲು ಸರಕಾರದಿಂದ ಆದೇಶ ಆಗಿದ್ದು, ಈ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ನಡೆಸಲು ಕನ್ಸಲ್ಟೆನ್ಸಿ ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸೂಕ್ತ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ರಘುಪತಿ ಭಟ್ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಮತ್ತು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶೇಷ ಕೃಷ್ಣ, ವಾರಾಹಿ ಯೋಜನೆಯ ಸಹಾಯಕ ಇಂಜಿನಿಯರ್ ಪ್ರೀತಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News