ಹೊರ ರಾಜ್ಯ ಕಾರ್ಮಿಕರನ್ನು ಕಳುಹಿಸಲು ಕ್ರಮ ಕೈಗೊಳ್ಳವಂತೆ ಮುಖ್ಯಮಂತ್ರಿಗೆ ದ.ಕ. ಕಾಂಗ್ರೆಸ್ ಮನವಿ

Update: 2020-06-02 10:24 GMT

ಮಂಗಳೂರು, ಜೂ.2: ಕೋವಿಡ್-19ನಲ್ಲಿ ತೊಂದರೆಗೆ ಒಳಗಾಗಿರುವ ಕಾರ್ಮಿಕರನ್ನು ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಲು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ  ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ದ.ಕ. ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರು ಗುಜರಾತ್, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ ಮೊದಲಾದ ರಾಜ್ಯಗಳಿಂದ ಬಂದು ಕೋವಿಡ್-19 ಕಾರಣಗಳಿಗಾಗಿ ಅವರವರ ಜಿಲ್ಲೆಗಳಿಗೆ ತೆರಳು ಸಾಧ್ಯವಾಗದೇ ಇನ್ನೂ ಬೀದಿಯಲ್ಲಿರುವುದು ಕಂಡುಬಂದಿದೆ. ಅವರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ರೈಲುಗಳ ವ್ಯವಸ್ಥೆ ಕಲ್ಪಿಸಬೇಕು, ಹೊರ ರಾಜ್ಯಗಳಿಂದ ಕರ್ನಾಟಕ್ಕೆ ಆಗಮಿಸುವ ಅದರಲ್ಲೂ ಕರಾವಳಿ ಜಿಲ್ಲೆಗಳಿಗೆ ಆಗಮಿಸಲು ಅರ್ಜಿ ಸಲ್ಲಿಸಿರುವ ಸುಮಾರು 50 ಸಾವಿರಕ್ಕೂ ಅಧಿಕ ಮುಂಬೈ ಮತ್ತು ನೆರೆ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಯಾವುದೇ ವ್ಯವಸ್ಥೆಯನ್ನು ಮಾಡದೇ ಆ ಭಾಗದಲ್ಲಿ ವಾಸಿಸುತ್ತಿರುವ ನಮ್ಮ ಕನ್ನಡಿಗರು ಅತಂತ್ರರಾಗಿದ್ದಾರೆ. ಅಲ್ಲದೇ ಆಕ್ರೋಶಕ್ಕೂ ಒಳಗಾಗಿದ್ದಾರೆ. ಕೇಂದ್ರ ಸರ್ಕಾರವು ಹೊರ ರಾಜ್ಯಗಳಿಂದ ತವರು ಜಿಲ್ಲೆಗಳಿಗೆ / ರಾಜ್ಯಗಳಿಗೆ ತೆರಳಲು ಯಾವುದೇ ಅಡ್ಡಿ ಇಲ್ಲವೆಂದು ಘೋಷಣೆ ಮಾಡಿದ್ದರೂ, ಇವರೆಗೆ ಕರಾವಳಿ ಜಿಲ್ಲೆಗಳಿಗೆ ಆಗಮಿಸಲು ಈ ಭಾಗದ ಜಿಲ್ಲಾಡಳಿತಗಳು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.

ಕರಾವಳಿ ಭಾಗದಲ್ಲಿ ಕೋವಿಡ್-19 ವೈರಾಣು ಹೆಚ್ಚುತ್ತಿರುವುದರಿಂದ ಮೂಲಭೂತ ವ್ಯವಸ್ಥೆಗಳನ್ನು ಹೆಚ್ಚಿಸಲು ಕ್ವಾರೆಂಟೈನ್ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಕೂಡಲೇ ವ್ಯವಸ್ಥೆ ಮಾಡಬೇಕು.

ವಿದೇಶದಿಂದ ಆಗಮಿಸುವ ಕನ್ನಡಿಗರಿಗೆ ಸೂಕ್ತ ಕ್ವಾರೆಂಟೈನ್ ವ್ಯವಸ್ಥೆ ಮಾಡಬೇಕಲ್ಲದೆ ಕೋವಿಡ್ ಸಂಶಯಾಸ್ಪದ ವ್ಯಕ್ತಿಗಳಿಗೆ ನಿರ್ದಿಷ್ಟ ಮಟ್ಟದ ಚಿಕಿತ್ಸೆ ಜೊತೆಗೆ ಹಾರೈಕೆಗೆ ವಿಶೇಷ ಗಮನ ನೀಡಬೇಕು.

ವಿದೇಶದಲ್ಲಿರುವ ಕರಾವಳಿ ಭಾಗದ ಕನ್ನಡಿಗರಿಗೆ ಮಂಗಳೂರಿಗೆ ಆಗಮಿಸಲು ಸರ್ಕಾರ ವಿಮಾನಗಳ ಏರ್ಪಾಡು ಮಾಡಬೇಕು. ಅದೇರೀತಿ ಜಿಲ್ಲೆಯಲ್ಲಿರುವ ಉದ್ಯೋಗಕ್ಕಾಗಿ ತೆರಳಲಿರುವ ಕಾರ್ಮಿಕರಿಗೂ ವಿಮಾನ ಮತ್ತು ರೈಲುಗಳ ವ್ಯವಸ್ಥೆ ಮಾಡಬೇಕು.

ಅಸಂಘಟಿತ ಕಾರ್ಮಿಕರಿಗೆ ಅಂದರೆ ಬೀಡಿ ಕಾರ್ಮಿಕರಿಗೆ, ಬಸ್ಸು ನೌಕರರಿಗೆ, ಟೈಲರ್ ಗಳಿಗೆ, ಬೀದಿಬದಿ ವ್ಯಾಪರಸ್ಥರಿಗೆ, ಗ್ಯಾರೇಜ್ ಕಾರ್ಮಿಕರಿಗೆ, ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನ್ನು ನೀಡಬೇಕು ಎಂದೂ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಶಾಸಕರಾದ ಯು.ಟಿ.ಖಾದರ್, ಐವನ್ ಡಿಸೋಜ, ಹರೀಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News