ಸುರಕ್ಷಿತ ಅಂತರವನ್ನು ಅಸ್ಪೃಶ್ಯತೆಗೆ ಹೋಲಿಸಿದ್ದ ಕವಿ: ಪ್ರಕರಣ ದಾಖಲು

Update: 2020-06-03 17:45 GMT

ಹೈದರಾಬಾದ್,ಜೂ.3: ಚಿತ್ರಗೀತೆಗಳ ರಚನೆಕಾರ ಜೊನ್ನವಿತ್ತುಲ ರಾಮಲಿಂಗೇಶ್ವರ ರಾವ್ ಅವರು ಮಾ.23ರಂದು ಟಿವಿ ವಾಹಿನಿಯೊಂದರಲ್ಲಿ ವಾಚಿಸಿದ್ದ ಕವನವೊಂದು ದಲಿತರ ವಿರುದ್ಧದ ಜಾತಿ ಪೂರ್ವಾಗ್ರಹ ಹೊಂದಿರುವ ಕವನವೊಂದು  ಕುರಿತು ತೀವ್ರ ಚರ್ಚೆಗೆ ಕಾರಣವಾಗಿದೆ. ರಾವ್ ತನ್ನ ಕವನದಲ್ಲಿ ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಪಾಲಿಸಬೇಕಾದ ಸುರಕ್ಷಿತ ಅಂತರವನ್ನು ಅಸ್ಪೃಶ್ಯತೆಗೆ ಹೋಲಿಸಿದ್ದರು.

ಮಾಲ ವೆಲ್ಫೇರ್ ಅಸೋಸಿಯೇಷನ್‌ನ ದೂರಿನ ಮೇರೆಗೆ ಮೇ 25ರಂದು ಹೈದರಾಬಾದ್ ಪೊಲೀಸರು ರಾವ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ (ಪಿಸಿಆರ್)ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆಂಧ್ರಪ್ರದೇಶದ ವಿಜಯವಾಡಾ ನಿವಾಸಿ ಹಾಗೂ ಬ್ರಾಹ್ಮಣರಾಗಿರುವ ರಾವ್ ಅವರು ಕೊರೋನ ವೈರಸ್ ನಿಯಂತ್ರಿಸಲು ನೆರವಾಗಲು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ತೆಲಂಗಾಣ ಸರಕಾರವು ಆಯ್ಕೆ ಮಾಡಿದ್ದ ಚಿತ್ರರಂಗದ ಸೆಲೆಬ್ರೆಟಿಗಳಲ್ಲಿ ಒಬ್ಬರಾಗಿದ್ದರು.

ಮಾ.23ರಂದು ತನ್ನ ಕವನ ಪಠಣದ ಬಳಿಕ ರಾವ್ ಅವರು ಸಮಾಜದಲ್ಲಿ ಜಾತಿ ದ್ವೇಷವನ್ನು ಹರಡಲು ಮೇಲ್ಜಾತಿ ಪರಿಕಲ್ಪನೆಗಳನ್ನು ಉತ್ತೇಜಿಸುತ್ತಿರುವುದಕ್ಕಾಗಿ ವಿವಿಧ ಜಾತಿ ವಿರೋಧಿ ಗುಂಪುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದಾರೆ. ಅವರ ಕವನ ಪಠಣವು ಈ ಎರಡು ತೆಲುಗು ಭಾಷಿಕ ರಾಜ್ಯಗಳಲ್ಲಿ ಆಗಾಗ್ಗೆ ಅಸ್ಪೃಶ್ಯತೆ, ಜಾತಿ ಪೂರ್ವಾಗ್ರಹ ಮತ್ತು ಸಾಮಾಜಿಕ ಬಹಿಷ್ಕಾರಗಳನ್ನು ಅನುಭವಿಸುತ್ತಿರುವ ದಲಿತರ ವಿರುದ್ಧ ಮುಂದುವರಿದಿರುವ ತಾರತಮ್ಯದ ಪರಿಪಾಠಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News