ಮಣಿಪಾಲ: ಗಾಂಧಿ ಅಧ್ಯಯನ ಕೇಂದ್ರದಲ್ಲಿ ಹೊಸ ಕೋರ್ಸ್

Update: 2020-06-05 11:50 GMT

ಮಣಿಪಾಲ, ಜೂ.5: ಅನೇಕ ಹೊಸ ಕಲಿಕಾ ವಿಷಯಗಳ ಜೊತೆಗೆ ಹೊಸಕಾಲದ ಎರಡು ಸಮಕಾಲೀನ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ಮಾಹೆ ಪ್ರಾರಂಭಿಸಿದೆ. ಕಳೆದ ವರ್ಷ ಪ್ರಾರಂಭವಾದ ಇಕೊಸೊಫಿಕಲ್ ಎಸ್ಥಟಿಕ್ಸ್ ಎಂ.ಎ ಜೊತೆಗೆ, ಈ ಬಾರಿ ಇನ್ನೊಂದು ಹೊಸ ಸ್ನಾತಕೋತ್ತರ ಪದವಿ -ಎಂ.ಎ ಇನ್ ಆರ್ಟ್ ಅಂಡ್ ಪೀಸ್ ಸ್ಟಡೀಸ್-ಯನ್ನು ಈ ಶೈಕ್ಷಣಿಕ ವರ್ಷ ದಿಂದ ಪ್ರಾರಂಭಿಸಲಾಗುತ್ತಿದೆ.

ಎರಡೂ ಪದವಿಗಳಲ್ಲಿಯೂ ಕಲೆ ಮತ್ತು ತತ್ವಶಾಸ್ತ್ರವು ಸಾಮಾನ್ಯ ಎಳೆಯಾ ಗಿದ್ದರೂ ಇಕೊಸೊಫಿಕಲ್ ಎಸ್ಥಟಿಕ್ಸ್ ಪ್ರಾಥಮಿಕವಾಗಿ ಸಮಕಾಲೀನ ಪರಿಸರದ ಬಿಕ್ಕಟ್ಟುಗಳು ಮತ್ತು ಕಲಾ ಪ್ರಕಾರಗಳ ತಾತ್ವಿಕ ರಸಗ್ರಹಣದ ಕುರಿತ ಅಧ್ಯಯನ ವಾಗಿದೆ. ಆದರೆ ಈ ಬಾರಿ ಪ್ರಾರಂಭಗೊಳ್ಳುವ ಆರ್ಟ್ ಅಂಡ್ ಪೀಸ್ ಸ್ಟಡೀಸ್ ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳ ಕುರಿತು ಹಾಗೂ ಕಲೆಯನ್ನು ಶಾಂತಿಯ ಮಾಧ್ಯಮವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗೆಗಿನ ಕಲಿಕೆಯಾಗಿದೆ ಎಂದು ಕೇಂದ್ರದ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡೂ ಸ್ನಾತಕ್ಕೋತ್ತರ ಪದವಿಗಳು ವಿದ್ಯಾರ್ಥಿಗಳನ್ನು ಬರವಣಿಗೆ -ಪತ್ರಿಕೋದ್ಯಮ, ಮಾಧ್ಯಮ ಮತ್ತು ಸಂವಹನದ ಬದುಕಿಗೆ ಸಿದ್ಧಗೊಳಿಸುತ್ತದೆ. ಇಕೊಸೊಫಿಕಲ್ ಎಸ್ಥಟಿಕ್ಸ್ ಹೊಸ ಪಠ್ಯಕ್ರಮದಲ್ಲಿ ಅನುವಾದ ಅಧ್ಯಯನ ಮತ್ತು ಯಕ್ಷಗಾನ ಅಧ್ಯಯನಗಳಂತಹ ಹೊಸ ವಿಷಯಗಳನ್ನು ಪರಿಚಯಿಸಲಾ ಗಿದೆಯಾದರೆ ಕೆಲವು ಸಾಮಾನ್ಯ ವಿಷಯಗಳ ಜೊತೆಗೆ ಪೀಸ್ ಸ್ಟಡೀಸ್, ಸೊಸೈಟಿ ಮತ್ತು ಪಾಲಿಟಿ, ಅಭಿವೃದ್ಧಿ ಅಧ್ಯಯನ, ಜೆಂಡರ್ ಸ್ಟಡೀಸ್ ಮತ್ತು ಗಾಂಧಿ ಅಧ್ಯಯನಗಳಂತಹ ವಿಷಯಗಳನ್ನು ಒಳಗೊಂಡಿದೆ ಎಂದವರು ತಿಳಿಸಿದರು.

ಯಾವುದೇ ವಿಷಯದಲ್ಲಿ ಪದವಿ ಹೊಂದಿದವರೂ ಈ ಸ್ನಾತಕೋತ್ತರ ಪದವಿಗೆ ಅರ್ಹರು. ಪತ್ರಿಕೋದ್ಯಮ, ಮಾಧ್ಯಮ ಮತ್ತು ಸಂವಹನ, ಸಾಮಾಜಿಕ-ಸಾಂಸ್ಕೃತಿಕ, ರಾಜಕೀಯ ಮತ್ತು ಪರಿಸರ ವಲಯ, ಶೈಕ್ಷಣಿಕ ಮತ್ತು ಸಂಶೋಧನೆ, ನೀತಿ ಸಂಶೋಧನಾ ಸಂಸ್ಥೆಗಳು, ಅಂತಾರಾಷ್ಟ್ರೀಯ ಸಂಬಂಧ ಸಂಸ್ಥೆಗಳು, ಪ್ರಕಾಶನ ಸೇರಿದಂತೆ ಹಲವು ವೃತ್ತಿಪರ ಸಾಧ್ಯತೆಗಳನ್ನು ಈ ಕ್ಷೇತ್ರ ಹೊಂದಿದೆ.

‘ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್’ (ಜಿಸಿಪಿಎಎಸ್) ಸಮಕಾಲೀನ ಬಿಕ್ಕಟ್ಟನ್ನು ನಿಭಾಯಿಸಬಲ್ಲ ಪರ್ಯಾಯ ಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಅಂತರಶಿಕ್ಷಣ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿದೆ. ಕೇಂದ್ರವು ಸೌಂದರ್ಯಶಾಸ್ತ್ರ, ತತ್ತ್ವಶಾಸ್ತ್ರ, ಪರಿಸರ, ಪತ್ರಿಕೋದ್ಯಮ, ಜೆಂಡರ್ ಸ್ಟಡೀಸ್, ಗಾಂಧಿ ಮತ್ತು ಶಾಂತಿ ಅಧ್ಯಯನ, ಅಭಿವೃದ್ಧಿ ಅಧ್ಯಯನವನ್ನು ನಡೆಸುತ್ತಿದೆ ಎಂದವರು ಹೇಳಿದ್ದಾರೆ.

ಹೆಚ್ಚಿನ ವಿವರಗಳು - https://manipal.edu/gandhian-centre.html - ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಪ್ರೊ.ಹಿರೇಗಂಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News