ದ.ಕ. ಜಿಲ್ಲೆಯಲ್ಲಿ ಶನಿವಾರ 24 ಮಂದಿಗೆ ಕೊರೋನ ಸೋಂಕು ದೃಢ

Update: 2020-06-06 15:40 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜೂ.6: ದ.ಕ. ಜಿಲ್ಲೆಯಲ್ಲಿ ಶನಿವಾರ ಬಂದ 30 ಗಂಟಲ ದ್ರವ ಮಾದರಿ ವರದಿಯ ಪೈಕಿ 24 ಪ್ರಕರಣಗಳು ಪಾಸಿಟಿವ್ ಬಂದಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 175ಕ್ಕೇರಿದೆ.

ಸೋಂಕಿತರಲ್ಲಿ 11 ಮಂದಿ ಮುಂಬೈನಿಂದ ಆಗಮಿಸಿದವರಾಗಿದ್ದಾರೆ. ಉಳಿದಂತೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ಮೂವರು, ಸೌದಿ ಅರೆಬಿಯ, ಟರ್ಕಿಯಿಂದ ಆಗಮಿಸಿದ ತಲಾ ಒಬ್ಬರು, ಎನ್‌ಎಂಪಿಟಿಯ ಹಡಗು ನಿರ್ಮಾಣ ಸಿಬ್ಬಂದಿಯೊಬ್ಬರಿಗೂ ಸೋಂಕು ತಗುಲಿದೆ.
ಯಾವುದೇ ಪ್ರಯಾಣ ಇತಿಹಾಸ ಇಲ್ಲದ ನಾಲ್ವರಿಗೆ ಸೋಂಕು ಹರಡಿರುವುದು ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 175ಕ್ಕೆ ಏರಿದೆ. ಈ ನಡುವೆ ಮೂವರು ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಹೊಸ ಸೋಂಕಿತರ ಪ್ರಕರಣದಲ್ಲಿ 30 ವರ್ಷದ ಯುವಕ ಮೇ 17ರಂದು ಮುಂಬೈನಿಂದ ಆಗಮಿಸಿದ್ದು, ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಮುಗಿದು ಬಂಟ್ವಾಳಕ್ಕೆ ಆಗಮಿಸಿದ್ದರು. ಮೂಡುಬಿದಿರೆಯ ಎಂಟು ಮಂದಿ (13, 42, 38, 32 ವರ್ಷದ ಮಹಿಳೆಯರು, 53, 16, 15, 29 ವರ್ಷದ ಪುರುಷರು) ಮುಂಬೈನಿಂದ ಉಡುಪಿಯಲ್ಲಿ ಕ್ವಾರಂಟೈನ್ ಮುಗಿಸಿ ಮೂಡುಬಿದಿರೆಗೆ ಬಂದಿದ್ದರು. 30, 49 ವರ್ಷದ ಪುರುಷರಿಬ್ಬರು ಮುಂಬೈನಿಂದ ಉಡುಪಿಯಲ್ಲಿ ಕ್ವಾರಂಟೈನ್ ಆಗಿ ಬೆಳ್ತಂಗಡಿಗೆ ತೆರಳಿದ್ದರು.

ಜೂ.6ರಂದು ದುಬೈನಿಂದ ಕೇರಳದ ಕಣ್ಣೂರಿಗೆ ಬಂದ ವಿಮಾನಯಾನದ ಆರು ಮಂದಿ ಸಿಬ್ಬಂದಿಗೂ ಸೋಂಕು ಹರಡಿದೆ. ಇವರಲ್ಲಿ 36, 37, 31, 33, 24 ವರ್ಷದ ಪುರುಷರು ಹಾಗೂ 35 ವರ್ಷದ ಮಹಿಳೆ ಇದ್ದು, ಕಣ್ಣೂರಿನಿಂದ ಮಂಗಳೂರಿಗೆ ಬಂದು ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಇದೀಗ ಅವರ ಸ್ಯಾಂಪಲ್ ವರದಿ ಪಾಸಿಟಿವ್ ಬಂದಿದೆ.

ಪ್ರಯಾಣ ಇತಿಹಾಸ ಇಲ್ಲದೆಯೂ ನಾಲ್ಕು ಮಂದಿಗೆ ಕೊರೋನ ಪಾಸಿಟಿವ್ ಬಂದಿದ್ದಲ್ಲದೆ, ಸೋಂಕು ಮೂಲ ನಿಗೂಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ. 44 ವರ್ಷದ ಮಹಿಳೆ, 43 ವರ್ಷದ ಪುರುಷ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಆಗಮಿಸಿದ್ದರು. ಈಗ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನೊಬ್ಬರು 42 ವರ್ಷದ ಮಹಿಳೆ ಕೂಡ ಕುಂದಾಪುರದಿಂದ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಇನ್ನೊಂದು ಪ್ರಕರಣದಲ್ಲಿ ಎನ್‌ಎಂಪಿಟಿ ಹಡಗು ನಿರ್ಮಾಣದ 27 ವರ್ಷದ ಯುವಕನಿಗೂ ಪಾಸಿಟಿವ್ ಬಂದಿದೆ. ಸೋಂಕು ಮೂಲ ನಿಗೂಢವಾಗಿರುವುದರಿಂದ ಇವರೆಲ್ಲ ಸಂಪರ್ಕಿತರ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ಉಳಿದಂತೆ ಗುಜರಾತ್‌ನಿಂದ ಆಗಮಿಸಿದ 38 ವರ್ಷ ಪುರುಷ, ಉಕ್ರೈನ್- ಟರ್ಕಿಯಿಂದ ಬಂದ 24 ವರ್ಷದ ಪುರುಷ, ಸೌದಿ ಅರೆಬಿಯದಿಂದ ಬಂದ 30 ವರ್ಷದ ಯುವಕನಿಗೂ ಸೋಂಕು ದೃಢಪಟ್ಟಿದೆ.

ಮೂವರು ಡಿಸ್ಚಾರ್ಜ್: ಕೊರೋನಾ ಸೋಂಕಿತರು ನಿತ್ಯವೂ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಶನಿವಾರ ಮತ್ತೆ ಮೂವರು ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಇದುವರೆಗೆ 91 ಮಂದಿ ಗುಣಮುಖರಾದಂತಾಗಿದೆ. ಸದ್ಯ 77 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News