ಕುದ್ಲೂರು: ನೆಟ್ ವರ್ಕ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಶಾಸಕರಿಗೆ ಮನವಿ

Update: 2020-06-06 17:38 GMT

ಉಪ್ಪಿನಂಗಡಿ, ಜೂ.6: ಆತೂರು ಸಮೀಪದ ಕುದ್ಲೂರು ಪರಿಸರದಲ್ಲಿನ ಮೊಬೈಲ್ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಕುದ್ಲೂರು ಪರಿಸರದಲ್ಲಿ ಹಿಂದಿನಿಂದಲೂ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇದೆ. ದೈನಂದಿನ ಸಂಪರ್ಕ ಹಾಗೂ ಅಂತರ್ಜಾಲ ವಿನಿಯೋಗಕ್ಕೆ ನೆಟ್ ವರ್ಕ್  ಇಲ್ಲದೇ ಇರುವುದರಿಂದ ಬಹಳ ಕಷ್ಟವಾಗುತ್ತಿದೆ. ಇದೀಗ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಮಕ್ಕಳ ವಿಧ್ಯಾಭ್ಯಾಸ ಕೂಡಾ ಆನ್ ಲೈನ್ ಮೂಲಕ ನಡೆಯುತ್ತಿರುವುದರಿಂದ ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಡಕಾಗುತ್ತಿದೆ. ಮಕ್ಕಳು ಮನೆಯ ಹಂಚು, ಗುಡ್ಡೆಯನ್ನು ಹತ್ತಿ ನೆಟ್ ವರ್ಕ್ ಗಾಗಿ ಪರದಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಶಾಸಕರಲ್ಲಿ ಅಳಲು ತೋಡಿಕೊಂಡಿದ್ದಾರೆ.

ಕುದ್ಲೂರು ಪರಿಸರದ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಿಕೊಡಲು ಈ ಮೊದಲು ಎರಡು ಬಾರಿ ಶಾಸಕ ಎಸ್. ಅಂಗಾರ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ಇದರಿಂದ ಇನ್ನೂ ಪ್ರಯೋಜನವಾಗದ ಹಿನ್ನೆಲೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮನವಿ ಸಲ್ಲಿಕೆ ಸಂದರ್ಭ ಪಂಚಾಯತ್ ಸದಸ್ಯ ತಿಮ್ಮಪ್ಪ ಗೌಡ, ಎಂ.ಎಂ ಮಹ್ ರೂಫ್ ಆತೂರು, ಸಿರಾಜ್ ಆತೂರು, ಇಲ್ಯಾಸ್, ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News