‘ಜೂ.8ರಿಂದ ಮಸೀದಿ ಪುನಾರಂಭಿಸುವ ಬಗ್ಗೆ ಆಯಾ ಕಮಿಟಿಗಳೇ ತೀರ್ಮಾನ ತೆಗೆದುಕೊಳ್ಳಲಿ’

Update: 2020-06-07 08:25 GMT

ಕಾಪು, ಜೂ.7: ಮಸೀದಿ ಆರಂಭಿಸುವುದರಿಂದ ಮತ್ತು ಆರಂಭಿಸದೆ ಇರುವುದರಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಜೂ.8ರಂದು ಮಸೀದಿ ತೆರೆಯುವ ಬಗ್ಗೆ ಆಯಾ ಮಸೀದಿ ಕಮಿಟಿಗಳೇ ಸೂಕ್ತವಾದ ತೀರ್ಮಾನಿಸಬೇಕೆಂಬ ನಿರ್ಧಾರವನ್ನು ಜಿಲ್ಲಾ ಖಾಝಿ ಬೇಕಲ ಉಸ್ತಾದರ ನಿರ್ದೇಶನದಂತೆ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ತೆಗೆದುಕೊಂಡಿದೆ.

ಮೂಳೂರು ಖಾಝಿ ಭವನದಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ.ಅಬೂಬಕರ್ ನೇಜಾರು ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ, ಖಾಝಿ ಬೇಕಲ್ ಉಸ್ತಾದ್‌ರ ನೇತೃತ್ವದ ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ನಿರ್ದೇಶನವನ್ನು ಸಂಪೂರ್ಣವಾಗಿ ಪಾಲಿಸುವಂತೆ ಮಸೀದಿ ಕಮಿಟಿ ಗಳಿಗೆ ಸೂಚಿಸಲಾಯಿತು.

ಲಾಕ್‌ಡೌನ್ ಸಡಿಲಿಕೆ ಮಾಡಿ ಜೂ.8ರಿಂದ ಮಸೀದಿ ಪುನಾರಂಭಿಸಲು ಅನುಮತಿ ನೀಡಿರುವ ಸರಕಾರದ ತೀರ್ಮಾನವನ್ನು ಸಭೆಯಲ್ಲಿ ಸ್ವಾಗತಿಸಲಾಯಿತು. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮಸೀದಿ ಪ್ರವೇಶಿಸಲು ನೀಡಿರುವ ಅನುಮತಿಯ ದುರುಪಯೋಗ ಅಥವಾ ಸುರಕ್ಷಿತ ಅಂತರ ಕಾಪಾಡುವುದನ್ನು ಮರೆಯಬಾರದು. ಎಲ್ಲರೂ ಸಂಯಮದಿಂದ ವರ್ತಿಸಬೇಕು. ಜಮಾಅತ್ ಅಲ್ಲದೆ ಹೊರಗಿನಿಂದ ಬಂದವರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು.

ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಕೇಂದ್ರ ಮತ್ತು ರಾಜ್ಯ ವಕ್ಫ್ ಬೋರ್ಡ್ ನೀಡುವ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ಸರಕಾರ ಮಸೀದಿ ಆರಂಭಿಸಲು ನೀಡಿರುವ ಅನುಮತಿಯನ್ನು ಪಾಲಿಸುವುದ ರೊಂದಿಗೆ ಪ್ರತಿಯೊಬ್ಬರ ಆರೋಗ್ಯವನ್ನು ಕಾಪಾಡುವುದು ಕೂಡ ನಮ್ಮ ಕರ್ತವ್ಯವಾಗಿದೆ. ಆದುದರಿಂದ ಈ ಬಗ್ಗೆ ಪ್ರತಿ ಮಸೀದಿಯ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಸಂಯುಕ್ತ ಜಮಾಅತ್ ಸಭೆಯಲ್ಲಿ ತಿಳಿಸಿದೆ.

ಅಲ್ಹಾಜ್ ಅಬ್ದುರ್ರಹ್ಮಾನ್ ಮದನಿ ಮೂಳೂರು ದುಆ ನೆರವೇರಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ವಿಷಯ ಮಂಡಿಸಿದರು. ಸಂಯುಕ್ತ ಜಮಾಅತ್ ಹಿರಿಯ ನಾಯಕ ಎಂ.ಎಚ್.ಬಿ.ಮುಹಮ್ಮದ್ ಮೂಳೂರು, ಉಸ್ಮಾನ್ ಮದನಿ ನೇಜಾರು, ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ವೈ.ಬಿ.ಸಿ.ಬಶೀರ್ ಅಲಿ, ಜಿಲ್ಲಾ ನಾಯಕರಾದ ಮನ್‌ಹರ್ ಇಬ್ರಾಹೀಂ, ಮನ್ಸೂರ್ ಮೆಕ್ಕಾಸ್, ಇಬ್ರಾಹೀಂ ತವಕ್ಕಲ್, ಅಬ್ದುಲ್ ಹಮೀದ್ ಅದ್ದು ಮತ್ತಿತರರು ಹಾಜರಿದ್ದರು.

ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News