ಜಾನುವಾರು ಮೇವಿನ ಹಣ ಪಾವತಿ ಬಾಕಿ: ಸರಕಾರದ ಖಜಾನೆ ಖಾಲಿಯಾಗಿದೆಯೇ ?
ಹೋಟೆಲಿನಲ್ಲಿ ಭರಪೂರ ಊಟ ಮಾಡಿದ ನಂತರ ದುಡ್ಡಿಲ್ಲ ಎಂದರೆ ಹೋಟೆಲಿನವರು ನಿಮಗೆ ಸನ್ಮಾನ ಮಾಡುವುದಿಲ್ಲ. ಬದಲಿಗೆ ಒಂದೋ ರುಬ್ಬುತ್ತಾರೆ ಇಲ್ಲವೇ ರುಬ್ಬಿಸುತ್ತಾರೆ. ಹಾಗಂತ ನಮ್ಮನ್ನಾಳುವ ಸರ್ಕಾರ ಬರ ಬಂದಿದೆಯೆಂದು ಎಪ್ಪತ್ತು ಲಕ್ಷಗಳ ಮೇವನ್ನು ಖಾಸಗಿ ಪೂರೈಕೆದಾರರಿಂದ ಖರೀದಿಸಿ ಎಂಟೆಂಟು ತಿಂಗಳುಗಳ ಸುದೀರ್ಘ ಮೌನ ವ್ರತ ಮಾಡಿದರೆ ? ಪೂರೈಕೆದಾರ ಏನೂ ಮಾಡುವಂತಿಲ್ಲ. ಒಂದೋ ಕಾಯಬೇಕು ಇಲ್ಲವಾದರೆ ಸಾಯಬೇಕು!
ಹೌದು. ಕಳೆದ ವರ್ಷ ಸರ್ಕಾರ ಬರಗಾಲ ಪೀಡಿತ ಪ್ರದೇಶ ಎಂದು 156 ತಾಲೂಕುಗಳ ಪಟ್ಟಿ ತಯಾರಿಸಿದಾಗ ಅದರಲ್ಲಿ ಚಿಕ್ಕಬಳ್ಳಾಪುರದ ಹೆಸರೂ ಸೇರಿಕೊಂಡಿತ್ತು. ಜಾನುವಾರುಗಳು ಮೇವಿಲ್ಲದೇ ಸಾಯುತ್ತಿರುವುದನ್ನು ನೋಡಲಾಗದೇ ರಾಜ್ಯ ಹೈಕೋರ್ಟ್ ನಿರ್ದೇಶನದನ್ವಯ ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಗೋಶಾಲೆಗಳನ್ನು ಆರಂಭಿಸಿ ಮೇವು ಖರೀದಿಗೆ ಆದೇಶ ಹೊರಡಿಸಿತ್ತು.
"ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮೂರೇ ದಿನಗಳ ಒಳಗೆ ಪಾವತಿ ಮಾಡುವುದಾಗಿ ಮಾತು ಕೊಟ್ಟು ಮೇವು ಖರೀದಿಸಿದ್ದರು. ಗೋವುಗಳ ಕುರಿತ ಕಾಳಜಿ ಮತ್ತು ವ್ಯಾಪಾರದ ಉತ್ಸಾಹದಲ್ಲಿ ನಾನೂ ಹಿಂದೆ ಮುಂದೆ ನೋಡದೇ ಸರಬರಾಜು ಆದೇಶ ಸಿಕ್ಕಿದೊಡನೆ ಅಂದರೆ 2019 ಆಗಸ್ಟಿನಲ್ಲಿ ಮೇವು ಪೂರೈಸಿದೆ. ಆದರೀಗ ಪೇಮೆಂಟು ಸಿಗದೇ ಕಚೇರಿಯಿಂದ ಕಚೇರಿಗೆ ಅಲೆದು ನೇಣು ಹಾಕಿಕೊಳ್ಳಲಿಕ್ಕಷ್ಟೇ ಬಾಕಿ ಉಳಿದಿದೆ..." ಎಂದು ಮೇವು ಪೂರೈಕೆದಾರ ಸುರೇಶ್ ಒಂದೊಂದಾಗಿ ನೆನಪಿಸಿಕೊಳ್ಳುತ್ತಾರೆ.
ರಾಸುಗಳೇನೋ ಜೀವ ಉಳಿಸಿಕೊಂಡವು. ಆದರೀಗ ಈ ವ್ಯಾಪಾರಿಗೆ ಬದುಕು ಭಾರವಾಗಿದೆ. ಮೇವು ಪೂರೈಕೆ ಆದೇಶವನ್ನು ನೀಡಿದ್ದ ಜಿಲ್ಲಾಧಿಕಾರಿ ವರ್ಗಾವಣೆಯಾಗಿದೆ. ಈಗಿರುವ ಜಿಲ್ಲಾಧಿಕಾರಿ "ಪಾವತಿ ಬೇಕಾದರೆ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಿ" ಎನ್ನುತ್ತಿದ್ದಾರೆ ! ಉಪನಿರ್ದೇಶಕರು ನೀಡುವ ಕಾರಣ ಬೇರೆಯೇ ಇದೆ. "ಈ ಪಾವತಿಯನ್ನು ಜಿಲ್ಲಾಧಿಕಾರಿಯವರೇ ಮಾಡಬೇಕು. ಖರೀದಿ ಮಾಡಿದ್ದು NDRF ಫಂಡಿನಿಂದ.. ಸಹಜವಾಗಿ ಪಾವತಿಯನ್ನು ಅದೇ ಫಂಡಿನಿಂದ ಜಿಲ್ಲಾಧಿಕಾರಿಯವರೇ ಮಾಡುವುದು ಅನಿವಾರ್ಯ.." ಎಂದು ಉಪ ನಿರ್ದೇಶಕರು ಲಿಖಿತ ಉತ್ತರಿಸಿದ್ದಾರೆ. ಅಧಿಕಾರಿಗಳ ಈ ವರ್ತನೆಯಿಂದ ಸೋತು ಸುಣ್ಣವಾಗಿದ್ದು ಮೇವು ಪೂರೈಕೆದಾರ !
ಈ ನಡುವೆ ದಕ್ಷ ಐಎಎಸ್ ಅಧಿಕಾರಿ ಎಂದೇ ಮನೆಮಾತಾಗಿರುವ ಪಶುಸಂಗೋಪನಾ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ ಸವಿವರ ಪತ್ರ ಬರೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ಕೋರಿ ಹದಿನೈದು ದಿನಗಳು ಕಳೆದಿವೆ. ಆದರೆ ಫಲಿತಾಂಶ ಶೂನ್ಯ.
ಸುಮಾರು ಎಪ್ಪತ್ತು ಲಕ್ಷ ರೂ.ಗಳ ಮೇವು ಪೂರೈಕೆ ಮಾಡಿ ಒಂಬತ್ತು ತಿಂಗಳುಗಳು ದಾಟಿದರೂ ಸರ್ಕಾರದಿಂದ ಪಾವತಿ ಸಿಗದೇ ಹಣದ ಮುಗ್ಗಟ್ಟನ್ನು ಅನುಭವಿಸುತ್ತಿರುವ ಪೂರೈಕೆದಾರ ತನ್ನ ಪತ್ನಿಯ ಮಾಂಗಲ್ಯವನ್ನು ಕೂಡಾ ಅಡವು ಇಟ್ಟು ಸಾಲವನ್ನು ಪಡೆದಿರುವುದಾಗಿಯೂ, ಕೂಡಲೇ ಬಾಕಿಯನ್ನು ಪಾವತಿ ಮಾಡಬೇಕಾಗಿಯೂ ಮುಖ್ಯಮಂತ್ರಿ ಯಡಿಯೂರಪ್ಪ, NDRF ಹೊಣೆ ಹೊತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಂದಾಯ ಸಚಿವ ಆರ್. ಅಶೋಕರಂತಹ ಗಣ್ಯಾತಿಗಣ್ಯರಿಗೆ ಟ್ವಿಟರ್ ಮೂಲಕ ಅಂಗಲಾಚಿದ್ದಾರೆ.
ಡಿಸಿ ಕಚೇರಿಗೆ ಹೋಗಿ ಬಂದದ್ದಕ್ಕೆ ಲೆಕ್ಕವಿಲ್ಲ. ಇಷ್ಟಾದರೂ ಚಿಕ್ಕಾಸೂ ಬಂದಿಲ್ಲ. ಸಾಲಗಾರರ ಕಾಟ ತಡೆಯಲಾರೆ. ನನಗೇನಾದರೂ ಹೆಚ್ಚು ಕಡಿಮೆ ಆದರೆ ಅಧಿಕಾರಿಗಳೇ ಹೊಣೆ. ಜಾನುವಾರುಗಳು ಸಾಯಬಾರದೆಂದು ಉಸಿರಾಡಲು ಅವಕಾಶ ನೀಡದೇ ನನ್ನಿಂದ ಮೇವು ಖರೀದಿಸಿದ್ದ ಅಧಿಕಾರಿಗಳು ನನ್ನ ಸಾವಿಗೆ ಕಾಯುತ್ತಿದ್ದಾರೆಯೇ? ಎಂದು ಸುರೇಶ್ ಖಾರವಾಗಿಯೇ ಪ್ರಶ್ನಿಸುತ್ತಾರೆ.
ಆಡಳಿತಾರೂಢ ಸರ್ಕಾರಕ್ಕೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ಅಗತ್ಯವಿಲ್ಲವೇ ? ಸರ್ಕಾರಕ್ಕೂ ವಿನಿವಿಂಕ್ ಶಾಸ್ತ್ರಿಗೂ ವ್ಯತ್ಯಾಸ ಇರಬೇಡವೇ ?
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಉತ್ತರಿಸಬೇಕು.
-ರಾಜೇಂದ್ರ ಪೈ