ಬಂಟ್ವಾಳ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಅಣ್ಣ-ತಂಗಿ ಆತ್ಮಹತ್ಯೆ

Update: 2020-06-16 04:30 GMT

ಬಂಟ್ವಾಳ, ಜೂ.16: ಅವಿವಾಹಿತ ಅಣ್ಣ- ತಂಗಿ ಇಬ್ಬರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೈದ ಘಟನೆ ಸೋಮವಾರ ರಾತ್ರಿ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿಗಳಾದ ನೀಲಯ್ಯ ಶೆಟ್ಟಿಗಾರ್(42) ಹಾಗೂ ಕೇಸರಿ(39) ಮೃತಪಟ್ಟವರು. 

ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಬ್ಬರು, ರಾತ್ರಿ ಸುಮಾರು 11 ಗಂಟೆಯ ಬಳಿಕ ತಮ್ಮ ಮನೆಯ ಕೊಠಡಿಯಲ್ಲಿ ಕೃತ್ಯಗೈದಿದ್ದಾರೆ ಎಂದು ಹೇಳಲಾಗಿದೆ.

ಮನೆಯಲ್ಲಿ ನೀಲಯ್ಯ ಅವರ ಸಹೋದರ ಮತ್ತು ಅವರ ಪತ್ನಿ, ಮಗ ಕೂಡಾ ವಾಸವಿದ್ದು, ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರು. ರಾತ್ರಿ ವೇಳೆ ಜೋರಾಗಿ ನರಳಾಟದ ಶಬ್ದ ಕೇಳಿ ಬಂದಾಗ ಮನೆಮಂದಿ ಎಚ್ಚರಗೊಂಡು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಬಳಿಕ ಸ್ಥಳೀಯರು ಸೇರಿ ಸುಟ್ಟ ಗಾಯಗಳೊಂದಿಗೆ ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಇಬ್ಬರೂ ಕೊನೆಯುಸಿರೆಳೆದಿದ್ದರೆನ್ನಲಾಗಿದೆ. 

ಮಾಹಿತಿ ತಿಳಿದ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ನೀಲಯ್ಯ ಈ ಹಿಂದೆ ಕೈ ಮಗ್ಗ ನಡೆಸುತ್ತಿದ್ದು, ಬಳಿಕ ಅನಾರೋಗ್ಯದ ಕಾರಣ ಅದನ್ನು ನಿಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News