ಬದಲಾಗಬೇಕಿದೆ ನೇಮಕಾತಿ ಪ್ರಕ್ರಿಯೆಗಳ ವಿಳಂಬ ನೀತಿ

Update: 2020-06-16 17:26 GMT

ದೇಶಾದ್ಯಂತ ಎಲ್ಲಾ ರಾಜ್ಯಗಳ ಮತ್ತು ಕೇಂದ್ರ ಸರಕಾರಿ ನೌಕರರ ನೇಮಕಾತಿಗಳಲ್ಲಿ ಒಂದಿಲ್ಲಾ ಒಂದು ಕಾರಣಕ್ಕಾಗಿ ನೇಮಕಾತಿ ಪ್ರಕ್ರಿಯೆಗಳು ವಿಳಂಬ ನೀತಿಯನ್ನು ಅನುಸರಿಸುತ್ತಿವೆ. ಹಿಂದಿನ ನಲವತ್ತು ವರ್ಷಗಳಲ್ಲಿ ಪ್ರಸ್ತುತವಾಗಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆಯನ್ನು ಭಾರತ ಎದುರಿಸುತ್ತಿರುವ ಸಂದರ್ಭದಲ್ಲಿ ಈ ತರಹದ ಬೆಳವಣಿಗೆಗಳು ವಿಷಾದನೀಯವೇ ಸರಿ. ಇದಕ್ಕೆ ನಿದರ್ಶನವೆಂದರೆ, ಕರ್ನಾಟಕ ಸರಕಾರವು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ 1069 ಹುದ್ದೆಗಳಿಗೆ ಮೇ 2015ರಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ, ನಂತರ ಕಾರಣಾಂತರಗಳಿಂದ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ನಂತರ ಫೆಬ್ರವರಿ 2017ರಲ್ಲಿ ತಿದ್ದುಪಡಿಯೊಂದಿಗೆ ಮತ್ತೊಮ್ಮೆ ಅಧಿಸೂಚನೆಯನ್ನು ಹೊರಡಿಸಿ, 2018ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಆಗಸ್ಟ್ 2019ರಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿತು. ಸರಕಾರ ಹಾಗೂ ಕೆಇಎ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆಯನ್ನು ನಿರ್ವಹಿಸಿ, 1:1 ಪಟ್ಟಿಯನ್ನು ಬಿಡುಗಡೆಯೂ ಮಾಡಿತು. ಬಹುತೇಕ ದಾಖಲೆಗಳ ಪರಿಶೀಲನಾ ಪ್ರಕ್ರಿಯೆಯು ಮುಗಿದಿದ್ದು ಕೌನ್ಸೆಲಿಂಗ್ ನಡೆಸಿ, ಆದೇಶ ಪತ್ರವನ್ನು ನೀಡಬೇಕಾದ ಕಾರ್ಯ ಮಾತ್ರ ಬಾಕಿ ಉಳಿದಿದೆ.

ಕರ್ನಾಟಕದ ಶಿಕ್ಷಣದ ಗುಣಮಟ್ಟ ದೇಶದಲ್ಲಿಯೇ ಮಾದರಿಯಾಗಿದೆ ಏಕೆಂದರೆ, ಕರ್ನಾಟಕ ರಾಜ್ಯ ಮೊದಲಿನಿಂದಲೂ ಶಿಕ್ಷಣಕ್ಕೆ ನೀಡಿರುವ ಪ್ರಾಮುಖ್ಯತೆ. ಶಿಕ್ಷಣಕ್ಕೆ ಇಷ್ಟೆಲ್ಲಾ ಮಹತ್ವ ನೀಡಿರುವ ರಾಜ್ಯ ಸರಕಾರ ಕೆಲವೊಮ್ಮೆ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಚರ್ಚೆಗೆ ಗ್ರಾಸವಾಗುತ್ತದೆ. ಈಗಾಗಲೇ ಐದು ವರ್ಗಗಳು ಪೂರೈಸುತ್ತಿರುವ ಈ ಸುದೀರ್ಘ ನೇಮಕಾತಿ ಪ್ರಕ್ರಿಯೆಯಲ್ಲಿ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿದ್ದರೂ ಅಭ್ಯರ್ಥಿಗಳಿಗೆ ಉದ್ಯೋಗದ ಭಾಗ್ಯ ಇನ್ನೂ ದೊರೆತಿಲ್ಲ ಎನ್ನುವುದೇ ವಿಷಾದನೀಯ ಸಂಗತಿ. 2015ರಲ್ಲಿ ಉದ್ಯೋಗಕ್ಕಾಗಿ ಅರ್ಜಿಸಲ್ಲಿಸಿ, ಆಯ್ಕೆಗೊಂಡು ವಯೋಮಿತಿಯ ಅಂಚಿನಲ್ಲಿರುವ ಎಷ್ಟೋ ಅಭ್ಯರ್ಥಿಗಳ ಭವಿಷ್ಯವೂ ಡೋಲಾಯಮಾನವಾಗಿದೆ. ಯುವಶಕ್ತಿಗೆ ದುಡಿಯಲು ಉದ್ಯೋಗವನ್ನು ದೊರಕಿಸಿಕೊಡುವುದು ರಾಜ್ಯ ಮತ್ತು ಕೇಂದ್ರಗಳ ಆದ್ಯ ಕರ್ತವ್ಯ.

ಅದರೊಂದಿಗೆ, ಅಭ್ಯರ್ಥಿಗಳು ಉದ್ಯೋಗ ಪಡೆಯುತ್ತಿರುವುದು ಪದವಿಪೂರ್ವ ಕಾಲೇಜುಗಳಲ್ಲಿ, ಈ ಹಿಂದಿನ ಐದು ವರ್ಷಗಳಲ್ಲಿ ಶಿಕ್ಷಕರಿಲ್ಲದೇ ಆ ಕಾಲೇಜುಗಳಿಂದ ಓದು ಮುಗಿಸಿದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಮತ್ತು ಕಲಿಯುವ ಸಂದರ್ಭದಲ್ಲಿನ ಕ್ಲಿಷ್ಟತೆ ಊಹಿಸಲೂ ಆಗದು. ಕಾಲೇಜುಗಳಿದ್ದರೆ ಸಾಲದು, ಬೋಧನೆಗೆ ಶಿಕ್ಷಕರೂ ಅವಶ್ಯಕ. ಶಿಕ್ಷಕರಿಲ್ಲದ ತರಿಗತಿಗಳಿಂದ ಏನನ್ನೂ ಅಪೇಕ್ಷಿಸಲು ಸಾಧ್ಯವಿಲ್ಲ. ಸಮಾಜಕ್ಕೆ ಪೂರಕವಾದ ವಿದ್ಯಾರ್ಥಿಗಳನ್ನು ತಯಾರು ಮಾಡುವಲ್ಲಿ ಶಿಕ್ಷಕರ ಪಾತ್ರ ಅನನ್ಯ. ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದ್ದು, ಮುಂಬರುವ ಶೈಕ್ಷಣಿಕ ವರ್ಗಗಳಿಂದ ಪಿಯು ವಿದ್ಯಾರ್ಥಿಗಳಿಗೂ ತೊಂದರೆಯಾಗಲಿದೆ. ಹಾಗಾಗಿ ತಕ್ಷಣದಲ್ಲೇ ಕೌನ್ಸಲಿಂಗ್ ನಡೆಸಿ ನೇಮಕಾತಿ ಪ್ರತಿಯನ್ನು ನೀಡುವ ಕಾರ್ಯವನ್ನು ಪೂರ್ಣಗೊಳಿಸುವ ಅಗತ್ಯವಿದೆ. ಈ ಕಾರ್ಯ ಅತ್ಯಂತ ತ್ವರಿತ ಗತಿಯಿಂದ ನೆರವೇರಲಿ ಎನ್ನುವುದೇ ಎಲ್ಲರ ಕೋರಿಕೆ.

ಎಲ್ಲಾ ಹಂತದ ಶಿಕ್ಷಕರ ನೇಮಕಾತಿ ಮತ್ತು ಸೇವಾಪೂರ್ವ ತರಬೇತಿ ಪ್ರಕ್ರಿಯೆಯು ಗರಿಷ್ಠ ಎಂದರೆ ಒಂದು ವರ್ಷದೊಳಗೆ ಪೂರ್ಣಗೊಳಿಸುವ ನಿಯಮಗಳು ರೂಪಗೊಳ್ಳಬೇಕಿದೆ. ಉದಾಹರಣೆಗೆ ಜೂನ್ ತಿಂಗಳಲ್ಲಿ ಅಧಿಸೂಚನೆ, ಆಗಷ್ಟ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ, ಸೆಷ್ಟಂಬರ್‌ನಲ್ಲಿ ಪರೀಕ್ಷೆಯ ಫಲಿತಾಂಶ, ಆಕ್ಷಪಣೆ ಮತ್ತು ಸರಿಪಡಿಸುವಿಕೆಗೆ ಮತ್ತೊಂದು ತಿಂಗಳು ಹೀಗೆ ಡಿಸೆಂಬರ್‌ವರೆಗೆ ಎಲ್ಲಾ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡು ಜನವರಿಯಲ್ಲಿ ಕೌನ್ಸಲಿಂಗ್ ನಡೆಸಿ ಫೆಬ್ರವರಿಯಲ್ಲಿ ಕಾಲೇಜುಗಳಿಗೆ ಹೋಗಿ ವರದಿ ಮಾಡಿಕೊಂಡು ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ನೇಮಕವಾದ ಎಲ್ಲಾ ಶಿಕ್ಷಕರೂ ಸೇವಾಪೂರ್ವ ತರಬೇತಿಯನ್ನು ಪಡೆದುಕೊಂಡು ಮೇ ತಿಂಗಳಲ್ಲಿ ತಮ್ಮ ಕಾಲೇಜುಗಳಿಗೆ ತೆರಳಿ ಸೇವೆಯನ್ನು ಪ್ರಾರಂಭಿಸುವುದು. ಪ್ರತಿ ವರ್ಷ ತರಗತಿಗಳು ಪ್ರಾರಂಭವಾಗುವ ಮೊದಲೇ ಹೊಸದಾಗಿ ಆಯ್ಕೆಯಾದ ಶಿಕ್ಷಕರು ಕಾಲೇಜುಗಳಿಗೆ ನೇಮಕವಾಗುವುದರಿಂದ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು, ಮತ್ತು ವಿದ್ಯಾರ್ಥಿಗಳು ಶಿಕ್ಷಕರನ್ನು ಅರ್ಥ ಮಾಡಿಕೊಳ್ಳಲು ಸಹಾಯಕ ಮತ್ತು ಬೋಧನಾ-ಕಲಿಕಾ ಪ್ರಕ್ರಿಯೆಗೂ ಪೂರಕ. ಇನ್ನು ಮುಂದಾದರೂ ಸರಕಾರಗಳು ಈ ರೀತಿಯಾದ ನೇಮಕಾತಿ ಮಾರ್ಗಸೂಚಿಗಳನ್ನು ತಯಾರಿಸಿ ಸಮಯದ ಚೌಕಟ್ಟಿನಲ್ಲಿ ಪ್ರತೀ ವರ್ಷ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿ ಯುವಶಕ್ತಿಯಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ಕಾರ್ಯ ಕೈಗೊಳ್ಳಬೇಕಿದೆ.

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News