ಹುತಾತ್ಮ ಯೋಧರಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಶ್ರದ್ಧಾಂಜಲಿ

Update: 2020-06-19 08:59 GMT

ಮಂಗಳೂರು, ಜೂ.19: ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಚೀನದೊಂದಿಗೆ ಘರ್ಷಣೆಯಲ್ಲಿ ಹುತಾತ್ಮರಾದ ಸೈನಿಕರಿಗೆ  ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮಂಗಳೂರು ನಗರದಲ್ಲಿರುವ ವೀರ ಯೋಧರ ಸ್ಮಾರಕಕ್ಕೆ ಭೇಟಿ ನೀಡಿದ ವೆಲ್ಫೇರ್ ಪಾರ್ಟಿ ಜಿಲ್ಲಾ ಮುಖಂಡರು ಹೂಗುಚ್ಛವನ್ನಿಟ್ಟು ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ, ಮಡಿದ ಯೋಧರಿಗೆ ಸರಕಾರ ತಲಾ ಒಂದು ಕೋಟಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

"ಜೈ ಜವಾನ್ ಜೈ ಕಿಸಾನ್" ಯೋಧರು ಮತ್ತು ರೈತರು  ನಮ್ಮ ದೇಶದ ಹೆಮ್ಮೆಯ ಸಂಕೇತ ಎಂದು ಹೇಳಿದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಹ ಪ್ರಧಾನಿಯ ಅವಶ್ಯಕತೆ ಇದೆ ಹೊರತು ಚೀನಾ ನಮ್ಮ ದೇಶದ 60 ಚದರ ಕಿ.ಮೀ ಭೂ ಪ್ರದೇಶವನ್ನು ಆಕ್ರಮಿಸಿ ಬರುವಾಗಲು ರಾಜಸ್ಥಾನದಲ್ಲಿ ಶಾಸಕರನ್ನು ಖರೀದಿಸುವುದರಲ್ಲಿ ತಲ್ಲೀನರಾಗಿರುವ ಪ್ರಧಾನ ಮಂತ್ರಿಯ ಅಗತ್ಯವಿಲ್ಲ ಎಂದು ಕಿಡಿಕಾರಿದ ಅವರು, ಅದೇ ರೀತಿ ಚೀನಾದೊಂದಿಗೆ ನಮ್ಮ ಎಲ್ಲಾ ವ್ಯವಹಾರವನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.

  ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ದ.ಕ. ಜಿಲ್ಲಾ ಕಾರ್ಯದರ್ಶಿ ದಿವಾಕರ್ ಬೊಳೂರ್ ಮಾತನಾಡಿ, ನಮ್ಮ ಸುತ್ತಲಿರುವ ಸಣ್ಣ ಪುಟ್ಟ ರಾಷ್ಟ್ರಗಳು ಬೃಹತ್ ರಾಷ್ಟವಾದ ಭಾರತಕ್ಕೆ ತೊಂದರೆ ನೀಡುತ್ತಿದ್ದು, ಇದನ್ನು ಅಂತರ್ ರಾಷ್ಟ್ರೀಯವಾಗಿ ಗಮನಕ್ಕೆ ತಂದು ಆ ದೇಶದ ವಿರುದ್ಧ ಕ್ರಮ ಕೈಕೊಳ್ಳುವಂತೆ ಮಾಡಬೇಕು ಹಾಗೂ ದೇಶದ ಕೈಗಾರಿಕಾ ಮತ್ತು ಉದ್ಯೋಗ ಸೃಷ್ಟಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. 

ಪಕ್ಷದ ಮಂಗಳೂರು ವಲಯಧ್ಯಕ್ಷರಾದ ಮುತ್ತಲಿಬ್ ಎಸ್.ಎಂ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ಫಾರಾಝ್ ಅಡ್ವಕೇಟ್, ಮಾಜಿ ಜಿಲ್ಲಾಧ್ಯಕ್ಷ ಝಹೀದ್ ಹುಸೈನ್ ಮತ್ತು ಫ್ರಟರ್ನಿಟಿ ಮೂವ್ ಮೆಂಟ್ ಕರ್ನಾಟಕದ ರಾಜ್ಯಾಧ್ಯಕ್ಷ ತಫ್ಲೀಲ್ ಯು. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News