ಪ್ರಾಪರ್ಟಿ ಕಾರ್ಡ್ ಬಗ್ಗೆ ಮುಂದುವರಿದ ಅನಿಶ್ಚಿತತೆ: ನಿಧಾನಗತಿಯಲ್ಲಿ ನಡೆಯುತ್ತಿದೆ ಪ್ರಕ್ರಿಯೆ

Update: 2020-06-25 17:34 GMT

ಮಂಗಳೂರು, ಜೂ.25: ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯವನ್ನು ಸದ್ಯ ಮುಂದಿನ ಆದೇಶದವರೆಗೆ ರಾಜ್ಯ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಸದ್ಯ ಪ್ರಾಪರ್ಟಿ ಕಾರ್ಡ್ ಪ್ರಕ್ರಿಯೆ ನಗರದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ. 

ಆಸ್ತಿ ನೋಂದಣಿಗೆ ಮತ್ತೆ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳ್ಳುವ ಅಥವಾ ಕಡ್ಡಾಯವಾಗಿಲ್ಲವಾದರೆ ಪ್ರಾಪರ್ಟಿ ಕಾರ್ಡ್‌ನ ಪ್ರಯೋಜನದ ಕುರಿತಂತೆ ಗೊಂದಲದ ನಡುವೆ ಪ್ರಾಪರ್ಟಿ ಕಾರ್ಡ್‌ಗಾಗಿನ ಬೇಡಿಕೆ ಸದ್ಯ ಕ್ಷೀಣಿಸಿದೆ. ಮಂಗಳೂರು ನಗರದಲ್ಲಿ ಯುಪಿಒಆರ್ ಯೋಜನೆಯಡಿ ಆಸ್ತಿಗಳ ನೋಂದಣಿಗಾಗಿ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸಲಾಗಿದ್ದ ಸಂದರ್ಭ ನಗರದ ಮಿನಿ ವಿಧಾನಸೌಧದ ಸಮೀಪದ ಭೂಮಾಪನ ಇಲಾಖೆಯ ಕಚೇರಿಯಲ್ಲಿ ಸಾರ್ವಜನಿಕರ ನೂಕುನುಗ್ಗಲು, ಸರ್ವರ್ ಸಮಸ್ಯೆ, ವಿಳಂಬದ ಆಕ್ಷೇಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯವನ್ನು ಮುಂದಿನ ಆದೇಶದವರೆಗೆ ವಿನಾಯಿತಿ ಈಡಿ 2019ರ ಅಕ್ಟೋಬರ್ 11ರಂದು ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಆದೇಶಿಸಿದ್ದರು.

ಈ ನಡುವೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳ ಅವಧಿಯಲ್ಲಿ ಇತರ ಸರಕಾರಿ ಕಚೇರಿಗಳಂತೆ ಪ್ರಾಪರ್ಟಿ ಕಾರ್ಡ್ ನೋಂದಣಿ ಕಚೇರಿಯಲ್ಲಿಯೂ ಸಾರ್ವಜನಿಕ ಸೇವೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಸಾರ್ವಜನಿಕರು ಮತ್ತೆ ಪ್ರಾಪರ್ಟಿ ಕಾರ್ಡ್ ನೋಂದಣಿ ಯಲ್ಲಿ ತೊಡಗಿಕೊಂಡಿದ್ದರೂ ಹಿಂದಿನಂತೆ ಜನರ ದಟ್ಟನೆ ಕಚೇರಿಯಲ್ಲಿ ಕಂಡು ಬರುತ್ತಿಲ್ಲ. ಕಡ್ಡಾಯವಾಗಿದ್ದ ಸಂದರ್ಭ ದಿನವೊಂದಕ್ಕೆ ಸುಮಾರು 250ಕ್ಕೂ ಅಧಿಕ ಪ್ರಾಪರ್ಟಿ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದರೆ, ನೂರಾರು ಮಂದಿಯಿಂದ ಅರ್ಜಿಯನ್ನೂ ಸ್ವೀಕರಿಸಲಾಗುತ್ತಿತ್ತು.ದ.ಕ. ಜಿಲ್ಲಾ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಸಾದಿನಿ ಅವರು ಹೇಳುವಂತೆ ಸದ್ಯ ಪ್ರಾಪರ್ಟಿ ಕಾರ್ಡ್‌ಗಾಗಿ ದಿನವೊಂದಕ್ಕೆ ಸುಮಾರು 25ರಷ್ಟು ಅರ್ಜಿಗಳು ಸ್ವೀಕೃತವಾಗುತ್ತಿವೆ. ಉಳಿದಂತೆ ಈ ಹಿಂದೆ ಸ್ವೀಕರಿಸಲಾಗಿದ್ದ ಅರ್ಜಿಗಳನ್ನು, ಈಗಾಗಲೇ ದಾಖಲೆ ಸಂಗ್ಸರಹಿಸಿ ಅಳತೆ ಮಾಡಿರುವ ಆಸ್ತಿಗಳ ಕಾರ್ಡ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಕಾರ್ಡ್ ಕಡ್ಡಾಯಕ್ಕೆ ಸದ್ಯ ವಿನಾಯಿತಿ ನೀಡಿರುವುದರಿಂದ ಪ್ರಾಪರ್ಟಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದೇ ವೇಳೆ ಕೊರೋನ ಹಿನ್ನೆಲೆಯಲ್ಲಿ ಕಚೇರಿಯ ಕೆಲವೊಂದು ಸಿಬ್ಬಂದಿಯನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ. ಇರುವ ಸಿಬ್ಬಂದಿ, ಸಂಗ್ರಹಿಸಲಾದ ದಾಖಲೆಗಳನ್ನು ಸಿದ್ಧಪಡಿಸುವ ಕಾರ್ಯ ಮಾಡುತ್ತಿದ್ದಾರೆ ಎನ್ನುತ್ತಾರೆ.

ಮಂಗಳೂರು ನಗರದಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸಲಾದ ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ಜಾರಿಗೊಂಡು ಮುಂದೂಡಿಕೆಯಾಗಿದೆ. ಸದ್ಯ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯಕ್ಕೆ ವಿನಾಯಿತಿ ನೀಡಲಾಗಿದ್ದು, ಮತ್ತೆ ಇದು ಜಾರಿಗೊಳ್ಳುವುದೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲವಾಗಿದೆ. ಮಂಗಳೂರು ನಗರದಲ್ಲಿ ಪ್ರಸ್ತುತ ಆಸ್ತಿಗಳ ಸಂಖ್ಯೆ 2 ಲಕ್ಷ ಮೀರಿದೆ. ಭೂ ಮಾಪನಾ ಇಲಾಖೆಯಿಂದ ಸರ್ವೆ ಮಾಡಲಾಗಿರುವ 1,59,500 ಆಸ್ತಿಗಳಲ್ಲಿ 2020ರ ಜೂನ್ 19ರವರೆಗೆ 86229 ಆಸ್ತಿಗಳ ದಾಖಲೆ ಪತ್ರಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ 64528 ಕರಡು ಕಾರ್ಡ್‌ಗಳನ್ನು ಸಿದ್ಧಪಡಿಸಿ 45029 ಅಂತಿಮಗೊಂಡು 41800 ಕಾರ್ಡ್‌ಗಳನ್ನು ವಿತರಿಸಲಾಗಿದೆ. ಸರ್ವೆ ಮಾಡಿರುವ ದಾಖಲೆಗಳ ಪೈಕಿ 72,771 ಆಸ್ತಿಗಳ ದಾಖಲೆ ಸಂಗ್ರಹವಾಗಬೇಕಿದೆ ಎಂದು ಪ್ರಸಾದಿನಿ ತಿಳಿಸಿದ್ದಾರೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟಕ್ಕೆ ನಿರ್ಧಾರಮಂಗಳೂರು, ಜೂ.25: ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗು ಬೀಜ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ರೈತಾಪಿ ಕೃಷಿ ಉಳಿವಿಗಾಗಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಜೂ.29ರಿಂದ ಜು.1 ರ ತನಕ ಪ್ರತಿಭಟನೆ ಆಯೋಜಿಸಿದೆ.ಬಿಜೆಪಿ ನೇತೃತ್ವದ ಕೇಂದ್ರ ಹಾಗು ರಾಜ್ಯ ಸರ್ಕಾರ ಕರೊನಾ ಲಾಕ್‌ಡೌನ್ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ದೇಶದ ಕೃಷಿ, ಮಾರುಕಟ್ಟೆಯನ್ನು ಕಾರ್ಪೋರೆಟ್ ಕಂಪೆನಿಗಳಿಗೆ ಒಪ್ಪಿಸಲು ಪೂರಕವಾಗಿ ಕಾನೂನುಗಳಿಗೆ ತಿದ್ದುಪಡಿಯನ್ನು ಸುಗ್ರಿವಾಜ್ಞೆ ಮೂಲಕ ತಂದು ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುತ್ತಿದೆ ಎಂದು ಸಮಿತಿಯ ರಾಜ್ಯ ಕಾರ್ಯದರ್ಶಿ ರವಿ ಕಿರಣ್ ಪುಣಚ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಎಲ್ಲ ರೈತ ವಿರೋಧಿ ಕಾನೂನು ತಿದ್ದುಪಡಿಗಳನ್ನು ಜಾರಿಗೆ ಬರದಂತೆ ವಿರೋಧಿಸಬೇಕಾಗಿದೆ. ಇಲ್ಲದಿದ್ದರೆ ರೈತರು, ದಲಿತರು, ಕಾರ್ಮಿಕರು ಇತರ ದುಡಿಯುವ ವರ್ಗದ ಬದುಕು ನಾಶವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ನಿಲುವುಗಳನ್ನು ಖಂಡಿಸಿ, ಸಹಾಯಕ ಆಯುಕ್ತರು ಹಾಗು ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಆಕ್ಷೇಪ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದವರು ವಿವರಿಸಿದರು.

ಸಮಿತಿ ರಾಜ್ಯ ಉಪಾಧ್ಯಕ್ಷ ಕೆ.ಯಾದವ ಶೆಟ್ಟಿ, ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಪೆರಾಬೆ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಸುದ್ದಿಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News