ಸಜೀಪನಡು ಬೈಲುಗುತ್ತು ಪರಿಸರ ಜಲಾವೃತಕ್ಕೆ ಶಾಸಕರ ನಿರ್ಲಕ್ಷವೇ ಕಾರಣ: ಎಸ್ಡಿಪಿಐ ಆರೋಪ

Update: 2020-07-07 08:29 GMT

ಬಂಟ್ವಾಳ, ಜು.7: ಸಜೀಪನಡು ಗ್ರಾಮ ಪಂಚಾಯತ್ ಗೆ ಒಳಪಟ್ಟ ಬೈಲುಗುತ್ತು ಪರಿಸರವು 30 ವರ್ಷಗಳಿಂದ ಮಳೆಯ ಕಾರಣದಿಂದ ಜಲಾವೃತಗೊಳ್ಳುತ್ತಿರುವುದರಿಂದ ಪ್ರತೀ ವರ್ಷದಂತೆ ಈ ಬಾರಿಯು ಈ ಕ್ಷೇತ್ರದ ಶಾಸಕ ಯು.ಟಿ.ಖಾದರ್ ರವರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿರುವುದು ಅಭಿನಂದನಾರ್ಹ. ಆದರೆ ಈ ಭೇಟಿಯನ್ನು ಎಂದಿನ ಸಾಮಾನ್ಯ ಪಟ್ಟಿಗೆ ಸೇರಿಸದೆ ಶಾಶ್ವತ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು ಎಂದು ಎಸ್ಡಿಪಿಐ ಸಜೀಪನಡು ಗ್ರಾಮ ಸಮಿತಿ ಅಧ್ಯಕ್ಷ ನವಾಝ್ ಆಗ್ರಹಿಸಿದ್ದಾರೆ.

ಚರಂಡಿ ವ್ಯವಸ್ಥೆಗೆ ಶಾಶ್ವತ ಪರಿಹಾರ ನಡೆಸಲು ದೊಡ್ಡ ಪ್ರಮಾಣದ ಅನುದಾನದ ಅವಶ್ಯಕತೆ ಇದ್ದು, ಈ ಕಾರ್ಯ ಕೇವಲ ಗ್ರಾ.ಪಂ ಅಡಿಯಲ್ಲಿ ನಡೆಸಬೇಕಾದ ಕಾರ್ಯವಲ್ಲ. ಇದು ಶಾಸಕರ ನಿಧಿಯಿಂದ ಮಾಡಬೇಕಾಗಿರುವ ಅಭಿವೃದ್ಧಿ ಕಾರ್ಯವಾಗಿದೆ. 2016ರಿಂದಲೂ ಈ ಬಗ್ಗೆ ಸ್ಥಳೀಯರು ಶಾಸಕರಲ್ಲಿ ಹಲವು ಬಾರಿ ಮನವಿಗಳನ್ನು ನೀಡಿದ್ದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಶಾಸಕರು ಬಂದು ಪರಿಹಾರದ ಭರವಸೆ ನೀಡಿ ಫೋಟೋ ಕ್ಲಿಕ್ಕಿಸಿಕೊಂಡು ಹೋದದ್ದು 2016 ಜೂನ್ ತಿಂಗಳಲ್ಲಿ ಪತ್ರಿಕೆಯೊಂದರಲ್ಲಿ ಫೋಟೋ ಸಮೇತ ಪ್ರಕಟವಾಗಿತ್ತೇ ಹೊರತು ನೀಡಿದ ಭರವಸೆ ಈವರೆಗೂ ಈಡೇರಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

2018ರಲ್ಲಿ ಸಜಿಪನಡು ಗ್ರಾ.ಪಂ ಆಶ್ರಯದಲ್ಲಿ 'ಗ್ರಾಮೋತ್ಸವ' ನಡೆದಿತ್ತು. ಆ ಕಾರ್ಯಕ್ರಮದಲ್ಲಿ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕೆಲಸವು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಸರ್ಕಾರದ ಮೂಲಕ ನಡೆಯಬೇಕಾಗಿದೆ ಎಂಬುವುದನ್ನು ಜನರ ಸಮ್ಮುಖದಲ್ಲಿ ಗ್ರಾ.ಪಂ ಅಧ್ಯಕ್ಷರು ಶಾಸಕರಿಗೆ ಮನವಿ ನೀಡಬಯಸಿದ್ದರು. ಆದರೆ ಶಾಸಕರು ಸಮಾರಂಭಕ್ಕೆ ಗೈರು ಹಾಜರಿ ನೀಡಿದ್ದರೂ, ಗ್ರಾ.ಪಂ ಅಧ್ಯಕ್ಷ ನಾಸೀರ್ ರವರು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೂ ಕೂಡ ಈ ಕಾರ್ಯಗಳನ್ನು ತಮ್ಮಿಂದ ಮಾಡಿಸಲು ಸಾದ್ಯವಾಗದೇ ಇರುವುದು ನಿಮ್ಮ ದ್ವೇಷ ರಾಜಕೀಯಕ್ಕೆ ಒಂದು ಸ್ಪಷ್ಟವಾದ ಉದಾಹರಣೆ ಎಂದು ತಿಳಿಸಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಪಂಚಾಯತ್ ಗೆ ಸರ್ಕಾರದಿಂದ ಪಂಚವಾರ್ಷಿಕ ಯೋಜನೆಯ ಅಡಿಯಲ್ಲಿ ಐದು ವರ್ಷಕ್ಕಾಗಿ ಒಂದು ಕೋಟಿ ಇಪ್ಪತ್ತೈದು ಲಕ್ಷ ರೂ. ಮಾತ್ರ ಮಂಜೂರಾಗುತ್ತದೆ. ಇದನ್ನು ಹಂತ ಹಂತವಾಗಿ ವಿಭಾಗಿಸಿ ವರ್ಷಕ್ಕೊಮ್ಮೆ ಬಿಡುಗಡೆ ಗೊಳಿಸಲಾಗುತ್ತದೆ. ಈ ಹಣದಲ್ಲಿ 25% ಹಣ ಎಸ್ಸಿ ಎಸ್ಟಿ, ವಲಯಕ್ಕೆ ಮೀಸಲಾಗಿರುತ್ತದೆ, 25% ಹಣ ವಿದ್ಯುತ್ ಬಿಲ್ ಕಡಿತವಾಗುತ್ತದೆ, 15% ಹಣ ನೀರು ಸರಬರಾಜು ಯೋಜನೆಗೆ, 25% ಹಣ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅಥವಾ ಚರಂಡಿ ನಿರ್ಮಾಣಕ್ಕೆ,10% ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಮೀಸಲಾಗಿರುತ್ತದೆ.

ಈ ನಿಧಿಯನ್ನು ಸಜೀಪನಡು ಗ್ರಾಮ ಪಂಚಾಯತ್ ಪ್ರತಿವರ್ಷವೂ ಸಮರ್ಪಕವಾಗಿ ಬಳಸಿಕೊಂಡು ಬಂದಿದೆ ಹಾಗು ಇನ್ನಿತರ ಕೆಲವು ಕೆಲಸ ಕಾರ್ಯಗಳನ್ನು ಸರ್ಕಾರದ ನಿಧಿಯಿಂದಲೂ ಒತ್ತಡ ಹಾಕಿ ಅನುದಾನವನ್ನು ತರಿಸಿ ಕೆಲಸ ಮಾಡಿಸಿರುತ್ತದೆ. ಅದೇ ರೀತಿ ನಮ್ಮ ಪಕ್ಷದ ಕಾರ್ಯಕರ್ತರ ಶ್ರಮದಾನದ ಮೂಲಕ ಮತ್ತು SDPI ಪಕ್ಷದ ನೇರ ಧನಸಹಾಯದಿಂದ ಕೂಡ ಈ ಪಂಚಾಯತ್ ನ ಅಭಿವೃದ್ಧಿಗೆ ಶ್ರಮವಹಿಸಿ ಕರ್ನಾಟಕ ರಾಜ್ಯದಲ್ಲೆ ಸಜೀಪನಡು ಗ್ರಾಮ ಪಂಚಾಯತ್ ನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಲು ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪ್ರತೀ ವರ್ಷ ಜಲಾವೃತಗೊಳ್ಳುವ ಪ್ರದೇಶವಾದ ಬೈಲುಗುತ್ತು ಪ್ರದೇಶಕ್ಕೆ ಅಂದರೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಹಿಡಿದು ಲಕ್ಷ್ಮಣ ಕಟ್ಟೆಯವರೆಗೆ ತೋಡು ಅಗೆದು ಶಾಶ್ವತ ಪರಿಹಾರ ಕಲ್ಪಿಸಲು ಸುಮಾರು 40 ಲಕ್ಷಕ್ಕೂ ಅಧಿಕ ಮೊತ್ತದ ಅನುದಾನದ ಅವಶ್ಯಕತೆ ಇದೆ. ಈ ಮೊತ್ತವನ್ನು ಗ್ರಾ.ಪಂ ಗಳಿಂದ ಭರಿಸಲು ಸಾಧ್ಯವಿಲ್ಲ. ಈ ಕಾರಣದಿಂದ ಶಾಸಕರಿಗೆ ಹಲವಾರು ಬಾರಿ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಈಗ ಗ್ರಾ.ಪಂ ಚುನಾವಣೆ ಸಮೀಪಿಸುವಾಗ ಬಂದು ಚರಂಡಿ ಮುಂಭಾಗ ನಿಂತು ಫೋಟೋ ತೆಗೆದು ಕೇವಲ ಪರಿಹಾರದ ಭರವಸೆ ನೀಡಿ ಹೋಗಿದ್ದಾರೆ. ತುಂಬೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೊಬ್ಬರ ಸಜೀಪ ನೇತ್ರಾವತಿ ನದಿ ಬದಿಯಲ್ಲಿರುವ ಅಡಿಕೆ ಮರದ ತೋಟಕ್ಕೆ ಶಾಸಕ ನಿಧಿಯಿಂದ 25 ಲಕ್ಷ ರೂ. ವೆಚ್ಚ ಮಾಡಿಕೊಂಡು ಬೃಹತ್ತಾಕಾರದ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಿದ್ದೀರಿ. ಪ್ರತಿವರ್ಷ ವೂ ಬೈಲಗುತ್ತು ಪರಿಸರದ ಸುಮಾರು 25ಕ್ಕೂ ಹೆಚ್ಚು ಮನೆಗಳು ನೆರೆ ನೀರಿನಲ್ಲಿ ಜಲಾವೃತಗೊಂಡು ಆ ಮನೆಯವರು ಅನುಭವಿಸುವ ಕಷ್ಟ ನೋವುಗಳಿಗಿಂತಲೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರ ತೋಟದ ಸಮಸ್ಯೆಯೇ ನಿಮಗೆ ದೊಡ್ಡದಾಯಿತೇ ಎಂದು ಅವರು ಪ್ರಶ್ನಿಸಿದ್ದಾರೆ. 

ಇನ್ನಾದರೂ ನಾವು ಸಲ್ಲಿಸಿದ ಮನವಿಯ ಪುಟಗಳನ್ನು ಓದಿ. ಬೈಲುಗುತ್ತು ಪ್ರದೇಶದ ಸಮಸ್ಯೆ ಮಾತ್ರವಲ್ಲದೇ ಶಾಸಕರ ನಿಧಿಯಿಂದ ನಡೆಯಬೇಕಾಗಿರುವ ಹಲವಾರು ಕೆಲಸ ಕಾರ್ಯಗಳು ಬಾಕಿ ಇವೆ. ಹಾಗಾಗಿ ಇನ್ನೊಮ್ಮೆ ಭೇಟಿ ಕೊಡುವಾಗ ನಾವು ಸಲ್ಲಿಸಿದ ಮನವಿ ಪತ್ರಗಳನ್ನು ಓದಿಕೊಂಡು ಅನುದಾನವನ್ನು ತೆಗೆದುಕೊಂಡೇ ಬರಲಿ ಎಂದು ಮುಹಮ್ಮದ್ ನವಾಝ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News