ಉಡುಪಿ ಜಿಲ್ಲಾ ಸರಕಾರಿ ಕೋವಿಡ್ ಲ್ಯಾಬ್ ಕಾರ್ಯನಿರ್ವಹಣೆಗೆ ಸಿದ್ಧ

Update: 2020-07-07 16:19 GMT

ಉಡುಪಿ, ಜು.7: ಕೋವಿಡ್-19 ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾದ ಸರಕಾರಿ ಕೋವಿಡ್-19 ಲ್ಯಾಬ್ ನಿರ್ಮಾಣದ ಕಾರ್ಯ ಇದೀಗ ಸಂಪೂರ್ಣಗೊಂಡಿದ್ದು, ಯಾವುದೇ ಸಮಯದಲ್ಲಿ ಅಧಿಕೃತವಾಗಿ ತನ್ನ ಪರೀಕ್ಷಾ ಕಾರ್ಯ ಆರಂಭಿಸಲಿದೆ.

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಲ್ಯಾಬ್ ನಿರ್ಮಾಣಕ್ಕೆ ಒಂದು ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಯಂತ್ರಗಳು ಮತ್ತು ಉಪಕರಣಗಳ ಸರಬರಾಜು ಆಗಿದ್ದು, ಲ್ಯಾಬ್ ನಿರ್ಮಾಣದ ಕಟ್ಟಡದ ಕಾಮಗಾರಿಗೆ 45 ಲಕ್ಷ ರೂ. ವೆಚ್ಚವಾಗಿದೆ. ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಲು 1 ಮೈಕ್ರೋ ಬಯೋಲಜಿಸ್ಟ್ ಹಾಗೂ 8 ಮಂದಿ ಲ್ಯಾಬ್ ಟೆಕ್ನೀಷಿಯನ್‌ಗಳನ್ನು ನೇಮಕ ಮಾಡಿಕೊಂಡಿದ್ದು, ಮೈಕ್ರೋ ಬಯೋಲಾಜಿಸ್ಟ್ ಹಾಗೂ ಇಬ್ಬರು ಲ್ಯಾಬ್ ಟೆಕ್ನೀಷಿಯನ್‌ಗಳಿಗೆ ಈಗಾಗಲೇ ಬೆಂಗಳೂರಿನ ನಿಮಾನ್ಸ್‌ನಲ್ಲಿ ಅಗತ್ಯ ತರಬೇತಿ ನೀಡಲಾಗಿದೆ.

ನಿಮಾನ್ಸ್ ಮೂಲಕ 5 ಸ್ಯಾಂಪಲ್‌ಗಳನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಉಡುಪಿ ಸರಕಾರಿ ಕೋವಿಡ್ ಪ್ರಯೋಗಾಲಯಕ್ಕೆ ನೀಡಿದ್ದು, ಈ ಸ್ಯಾಂಪಲ್ ಗಳನ್ನು ಪರೀಕ್ಷಿಸಿ, ಈಗಾಗಲೇ ವರದಿಯನ್ನು ನಿಮಾನ್ಸ್‌ಗೆ ಕಳುಹಿಸಲಾಗಿದೆ. ಈ ವರದಿ ನಿಮಾನ್ಸ್‌ನ ವರದಿಯೊಂದಿಗೆ ಸರಿಯಾದಲ್ಲಿ, ಜಿಲ್ಲೆಯ ಸರಕಾರಿ ಪ್ರಯೋಗಾಲಯದಲ್ಲಿ ಕೋವಿಡ್-19 ಮಾದರಿಗಳ ಪರೀಕ್ಷೆ ಆರಂಭವಾಗಲಿದೆ. ಮುಂದಿನ 2 ದಿನಗಳೊಳಗೆ ನಿಮಾನ್ಸ್‌ನ ವರದಿ ಬರಲಿದೆ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಮಧುಸೂಧನ್ ನಾಯಕ್ ತಿಳಿಸಿದ್ದಾರೆ.

ದಿನಕ್ಕೆ 300 ಮಾದರಿಯ ಪರೀಕ್ಷೆ
ಸಂಪೂರ್ಣ ಹವಾನಿಯಂತ್ರಿತವಾಗಿರುವ ಈ ಪರೀಕ್ಷಾ ಲ್ಯಾಬ್‌ನಲ್ಲಿ ಒಂದು ಬಾರಿಗೆ 96 ಸ್ಯಾಂಪಲ್‌ಗಳ ಪರೀಕ್ಷೆ ಮಾಡಬಹುದಾಗಿದೆ. ಪರೀಕ್ಷಾ ವರದಿಗಾಗಿ 4 ರಿಂದ 6 ಗಂಟೆಗಳ ಅವಧಿ ತೆಗೆದುಕೊಳ್ಳಲಿದೆ. ಈ ಪ್ರಕಾರದಲ್ಲಿ ಈ ಲ್ಯಾಬ್ ನಲ್ಲಿ ದಿನಕ್ಕೆ ಗರಿಷ್ಠ 300 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಪಡೆಯಬಹುದಾಗಿದೆ. ಸ್ಯಾಂಪಲ್‌ನ ಸ್ವೀಕೃತಿಯಿಂದ, ವರದಿಯವರೆಗೆ ಸಂಪೂರ್ಣ ಆನ್ ಲೈನ್‌ನಲ್ಲಿ ಮಾಹಿತಿ ದಾಖಲಿಸುವುದು ಮತ್ತು ಐಸಿಎಂಆರ್ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸಲಾಗುತ್ತದೆ.

‘ಲ್ಯಾಬ್‌ನಲ್ಲಿ ಪಿಪಿಇ ಕಿಟ್‌ಗಳನ್ನು ಧರಿಸಿಯೇ ಪರೀಕ್ಷೆ ನಡೆಸಬೇಕಾಗಿದ್ದು, ಟೆಸ್ಟಿಂಗ್ ಕಾರ್ಯ ನಿರ್ವಹಣೆ ಕುರಿತಂತೆ, ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಸಂಪೂರ್ಣ ತರಬೇತಿ ಪಡೆಯಲಾಗಿದೆ. ಸ್ಯಾಂಪಲ್‌ಗಳನ್ನು ಆರಂಭದಲ್ಲಿ ಪ್ರೊಸೆಸಿಂಗ್ ಕೊಠಡಿಯಲ್ಲಿ ಸ್ವೀಕರಿಸಿ, ಬಯೋ ಸೇಪ್ಟಿ ಕ್ಯಾಬಿನಿಟ್‌ನಲ್ಲಿಟ್ಟು ನಂತರ ಪಾಸ್ ಬಾಕ್ಸ್ ಮೂಲಕ ಪರೀಕ್ಷ ಕೊಠಡಿಗೆ ತಲುಪಿಸಲಾಗುವುದು. ಕೊನೆಗೆ ಆರ್.ಟಿ.ಪಿ.ಸಿ.ಆರ್ ಯಂತ್ರವಿರುವ ಕೊಠಡಿಗೆ ತಲುಪಿಸಿ, ಅಲ್ಲಿರುವ ಯಂತ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಲ್ಯಾಬ್‌ನ ಮೈಕ್ರೋ ಬಯಾಲಜಿಸ್ಟ್ ಡಾ.ಆನೀಟ್ ಡಿಸೋಜ ತಿಳಿಸಿದರು.

ಒಂದು ಸ್ಯಾಂಪಲ್‌ನ ಪರೀಕ್ಷೆಗೆ ಟೆಸ್ಟ್ ಕಿಟ್‌ಗಳು ಮತ್ತು ಇತರೆ ಅಗತ್ಯ ಸುರಕ್ಷತಾ ವಸ್ತುಗಳ ಬಳಕೆಯ ವೆಚ್ಚ ಸೇರಿದಂತೆ 1600ರೂ. ವೆಚ್ಚವಾಗಲಿದ್ದು, ಈ ಎಲ್ಲಾ ವೆಚ್ಚವನ್ನು ಜಿಲ್ಲಾ ಪ್ರಾಕೃತಿಕ ವಿಕೋಪ ನಿಧಿಯಿಂದ ಭರಿಸಲಾಗುವುದು. ಈ ಲ್ಯಾಬ್‌ನಿಂದ ಜಿಲ್ಲೆಯ ಕೋವಿಡ್ ಶಂಕಿತರ ಗಂಟಲು ದ್ರವದ ಪರೀಕ್ಷೆಯನ್ನು ಇತರೆ ಜಿಲ್ಲೆಗಳಿಗೆ ಕಳುಹಿಸಿ ವರದಿ ಪಡೆಯುವ ಬದಲು ಜಿಲ್ಲೆಯಲ್ಲಿಯೇ ಪ್ರಕರಣಗಳ ವರದಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಸರ್ಜನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News