ಉಳ್ಳಾಲದಲ್ಲಿ ಕೋವಿಡ್ ನಿಯಂತ್ರಣಕ್ಕೆ ಶೀಘ್ರವೇ ಹೆಲ್ಪ್‌ಲೈನ್: ಶಾಸಕ ಯು.ಟಿ. ಖಾದರ್

Update: 2020-07-10 12:53 GMT

ಮಂಗಳೂರು, ಜು.9: ಉಳ್ಳಾಲದಲ್ಲಿ ಕೊರೋನ ಸೋಂಕು ನಿಯಂತ್ರಿಸುವ ಸಲುವಾಗಿ ಈಗಾಗಲೇ ಸಾಮೂಹಿಕ ತಪಾಸಣೆ ನಡೆಸಲಾಗಿದ್ದು, ಇದಕ್ಕೆ ಪೂರಕವಾಗಿ ಎನ್‌ಜಿಒಗಳ ಸಹಭಾಗಿತ್ವದಲ್ಲಿ ಸಹಾಯವಾಣಿ ಶೀಘ್ರವೇ ಆರಂಭಿಸಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಈಗಾಗಲೇ ಉಳ್ಳಾಲ ನಗರ ಸಭೆಯ ಪ್ರತಿ ವಾರ್ಡ್‌ನಲ್ಲಿರುವ ಅನಧಿಕೃತ ವಾರ್ಡ್ ಸಮಿತಿಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕೃತವಾಗಿ ರಚಿಸಲಾಗುವುದು. ಪ್ರತಿ ವಾರ್ಡ್‌ನಲ್ಲಿ 18 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದೊಳಗಿನ ಆರೋಗ್ಯವಂತ ಆಸಕ್ತರ ತಂಡ ರಚಿಸಿ ಕಾರ್ಯಪಡೆ ರಚನೆ ಮಾಡಲಾಗುವುದು ಎಂದು ಅವರು ಹೇಳಿದರು.

ಕಾರ್ಯಪಡೆಯ ಸದಸ್ಯರಿಗೆ ಅಗತ್ಯ ತರಬೇತಿ ಹಾಗೂ ಗುರುತಿನ ಚೀಟಿ ನೀಡಿ ಮುಂದಿನ ಪರಿಸ್ಥಿತಿಯನ್ನು ನಿಭಾಯಿಸಲು ಕ್ರಮ ಕೈಗೊಳ್ಳಲಾಗುವುದು. ಇದೇ ವೇಳೆ ವಾರ್ಡ್‌ನ ಪ್ರತಿ ಮನೆಗಳ ಸರ್ವೆ ಕಾರ್ಯ ನಡೆಸಲಾಗುವುದು. 50 ವರ್ಷ ಮೇಲ್ಪಟ್ಟ ಹಾಗೂ 10 ವರ್ಷ ಕೆಳಗಿನ ಮಕ್ಕಳು ಹಾಗೂ ವಿವಿಧ ರೀತಿಯ ಇತರ ಕಾಯಿಲೆ (ಡಯಾಲಿಸಿಸ್, ಅಸ್ತಮಾ, ಕಿಡ್ನಿ ಸಮಸ್ಯೆ ಮೊದಲಾದವುಗಳು)ಯುಳ್ಳವರ ಪಟ್ಟಿ ತಯಾರಿಸಲಾಗುವುದು. ಅವರನ್ನು ರ್ಯಾಪಿಡ್ ಕಿಟ್ ಮೂಲಕ ತಪಾಸಣೆಗೊಳಪಡಿಸಿ ಸೋಂಕು ಅಥವಾ ಶಂಕೆ ಇದ್ದಲ್ಲಿ ಅವರಿಗೆ ಅಗತ್ಯಚಿಕಿತ್ಸೆಗೆ ಕ್ರಮ ವಹಿಸಲಾಗುವುದು ಎಂದು ಖಾದರ್ ತಿಳಿಸಿದರು.

ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ಅವರದ್ದೇ ಖರ್ಚಿನಲ್ಲಿ ಅಥವಾ ವೆನ್‌ಲಾಕ್‌ನಲ್ಲಿ ಹಾಸಿಗೆ ಇದ್ದಲ್ಲಿ ಅಥವಾ ವೆನ್‌ಲಾಕ್‌ಗೆ ದಾಖಲಿಸಿ ಚಿಕಿತ್ಸೆ ಅಲ್ಲಿ ಬೆಡ್‌ಗಳು ಲಭ್ಯವಿಲ್ಲದಾಗ ಜಿಲ್ಲಾಡಳಿತದಿಂದ ಸೂಚಿಸಲಾದ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಅಥವಾ ಮನೆಯವರೇ ಯಾರಿಗೂ ಸೋಂಕು ಹರಡದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾದಲ್ಲಿ ಹೋಂ ಐಸೋಲೇಶನ್‌ಗೆ ಸೂಚಿಸಲಾಗುವುದು. ಅವರನ್ನು ಆಶಾ ಕಾರ್ಯಕರ್ತರು ನಿಗಾ ಇರಿಸಲಿದ್ದಾರೆ. ಇದೇ ವೇಳೆ ಉಳ್ಳಾಲ ವ್ಯಾಪ್ತಿಯಲ್ಲಿ ದಾನಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಮಾಜಿ ಸಚಿವ ಖಾದರ್ ಮಾಹಿತಿ ನೀಡಿದರು.

ಉಳ್ಳಾಲದಲ್ಲಿ ಕೋವಿಡ್‌ನಿಂದ ಇಬ್ಬರು ಮೃತಪಟ್ಟಾಗ ಅವರ ಮನೆಯವರನ್ನು ತಪಾಸಣೆಗೊಳಪಡಿಸಲಾಯಿತು. ಈ ಸಂದರ್ಭ ಹಲವರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದ ಕಾರಣ ಅಲ್ಲಿ ಸಾಮೂಹಿಕ ತಪಾಸಣೆ ನಡೆಸಲಾಯಿತು. ಇದೀಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನೂ ನಡೆಸಲಾಗಿದೆ. ರ್ಯಾಂಡಮ್ ತಪಾಸಣೆಯ ಮೂಲಕ ಮಾತ್ರವೇ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಿ ಸೋಂಕು ಹರಡುವುದನ್ನು ಅಥವಾ ಸಾವಿನ ಅಪಾಯವನ್ನು ತಪ್ಪಿಸಬಹುದಾಗಿದೆ. ಸೋಂಕು ಇದ್ದಾಗ ಯಾರೂ ಗಾಬರಿಯಾಗದೆ ಸೂಕ್ತ ರೀತಿಯಲ್ಲಿ ಚಿಕಿತ್ಸೆಗೊಳಪಟ್ಟಲ್ಲಿ ಕೊರೋನ ಸೋಂಕು ನಿಯಂತ್ರಿಸಲು ಸಾಧ್ಯವಾಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಬೇಕು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮುಹಮ್ಮದ್ ಮೋನು, ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಖಾಸಗಿ ಆಸ್ಪತ್ರೆಯ ಸುಲಿಗೆ ಬಗ್ಗೆ ಲಿಖಿತ ದೂರು ನೀಡಿ
ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ಚಿಕಿತ್ಸೆ ಹೆಸರಿನಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪದ ಕುರಿತಂತೆ ಸಂಬಂಧಪಟ್ಟವರು ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಬೇಕು. ಸದ್ಯ ಸರಕಾರಿ ಆಸ್ಪತ್ರೆಗಳಲ್ಲಿಯೂ ಸೋಂಕಿನ ಭಯದಿಂದ ವೈದ್ಯರು, ನರ್ಸ್‌ಗಳು ಕೆಲಸಕ್ಕೆ ಹಾಜರಾಗಲು ಭಯ ಪಡುತ್ತಿದ್ದಾರೆ. 100 ಜನ ಆರೋಗ್ಯ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಲ್ಲಿ ಪ್ರಸ್ತುತ ಶೇ. 60ರಷ್ಟು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇರುವ ವ್ಯವಸ್ಥೆಯಲ್ಲಿ ಚಿಕಿತ್ಸೆ ಒದಗಿಸುವುದು ಅಗತ್ಯವಾಗಿದೆ. ಹಿಂದಿನ ರೀತಿಯಲ್ಲಿ ಚಿಕಿತ್ಸೆಯನ್ನು ನಿರೀಕ್ಷಿಸುವುದು ಕೂಡಾ ಸಾಧ್ಯವಾಗದು. ಈ ಬಗ್ಗೆ ಜನರು ಕೂಡಾ ಮನವರಿಕೆ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಖಾದರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News