‘ವರುಣ್ ಸಿನಿ ಕ್ರಿಯೇಷನ್ಸ್’ನ ಚೊಚ್ಚಲ ಚಿತ್ರದ ಶೀರ್ಷಿಕೆ ಬಿಡುಗಡೆ

Update: 2020-07-10 13:51 GMT

ಉಡುಪಿ, ಜು.10: ಕನ್ನಡದ ಹೊಸ ಚಲನಚಿತ್ರ ನಿರ್ಮಾಣ ಸಂಸ್ಥೆ ‘ವರುಣ್ ಸಿನಿ ಕ್ರಿಯೇಷನ್ಸ್’ನಿಂದ ನಿರ್ಮಾಣಗೊಳ್ಳುತ್ತಿರುವ ಚೊಚ್ಚಲ ಕನ್ನಡ ಚಲನಚಿತ್ರದ ಶೀರ್ಷಿಕೆ ‘ನಿಮ್ಮೆಲ್ಲರ ಆಶೀರ್ವಾದ’ದ ಬಿಡುಗಡೆ ಸಮಾರಂಭ ಇಂದು ಉಡುಪಿಯ ಪತ್ರಿಕಾ ಭವನದಲ್ಲಿ ನೆರವೇರಿತು.

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ಅವರು ಶೀರ್ಷಿಕೆಯ ಪೋಸ್ಟರ್‌ನ್ನು ಬಿಡುಗಡೆಗೊಳಿಸಿದರು. ಅದೇ ರೀತಿ ಬಡಗುಬೆಟ್ಟು ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಉದ್ಯಮಿ ಶ್ರೀನಿವಾಸ್ ಅವರು ಚಿತ್ರದ ನಾಯಕ-ನಾಯಕಿಯರಾದ ಪ್ರತೀಕ್ ಶೆಟ್ಟಿ ಹಾಗೂ ಪಾಯಲ್ ರಾಧಾಕೃಷ್ಣ ಅವರ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು.

ಉಡುಪಿಯಲ್ಲೇ ಸಂಪೂರ್ಣ ಚಿತ್ರೀಕರಣ ಮುಗಿಸಿರುವ ‘ನಿಮ್ಮೆಲ್ಲರ ಆಶೀರ್ವಾದ’ ನಿರ್ಮಾಪಕ ವರುಣ್ ಹೆಗ್ಡೆ ಅವರ ಚೊಚ್ಚಲ ಪ್ರಯತ್ನವಾಗಿದೆ. ಅದೇ ರೀತಿ ಯುವ ನಿರ್ದೇಶಕ ರವಿಕಿರಣ್ ಅವರು ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ. ಕೊರೋನಾ ಲಾಕ್‌ಡೌನ್‌ಗೆ ಮೊದಲೇ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ ಎಂದು ನಿರ್ದೇಶಕ ರವಿಕಿರಣ್ ತಿಳಿಸಿದರು.

ಚಿತ್ರದ ನಾಯಕ-ನಾಯಕಿ ಪ್ರತೀಕ್ ಶೆಟ್ಟಿ, ಪಾಯಲ್ ರಾಧಾಕೃಷ್ಣ ಅಲ್ಲದೇ ಹಿರಿಯ, ಅನುಭವಿ ನಟ-ನಟಿಯರಾದ ಎಂ.ಎನ್.ಲಕ್ಷ್ಮಿದೇವಿ, ಅರವಿಂದ ಬೋಳಾರ್, ಗೋವಿಂದೇಗೌಡ, ಸ್ವಾತಿ ಗುರುದತ್, ದಿನೇಶ್ ಮಂಗಳೂರು ಮತ್ತಿತರು ನಟಿಸಿದ್ದಾರೆ ಎಂದರು.

ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸರವಣನ್ ಜಿ.ಎನ್, ಛಾಯಾಗ್ರಾಹಕರಾಗಿದ್ದು, ರೂಪೇಂದ್ರ ಆಚಾರ್ ಕಲಾ ನಿರ್ದೇಶಕರು. ಸುನಾದ್ ಗೌತಮ್ ಸಂಗೀತ ನಿರ್ದೇಶಕರಾದರೆ, ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಸುರೇಶ್ ಆರ್ಮುಗಂ ಸಂಕಲನಕಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News