ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಆಪ್ತರ ಮನೆ ಮೇಲೆ ಐಟಿ ದಾಳಿ

Update: 2020-07-13 07:04 GMT

ಜೈಪುರ/ಹೊಸದಿಲ್ಲಿ, ಜು.13: ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ಬಂಡಾಯ ಎದ್ದ ಬಳಿಕ ರಾಜಸ್ಥಾನ ಸರಕಾರದಲ್ಲಿ ಬಿಕ್ಕಟ್ಟು ತಲೆತೋರಿದ್ದು, ಈ ಸಮಸ್ಯೆಯ ನಡುವೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ರ ಇಬ್ಬರ ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ಮಾಡಿದ್ದಾರೆ.

ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿದ್ದ ಕಾಂಗ್ರೆಸ್, ರಾಜಸ್ಥಾನ ಸರಕಾರಕ್ಕೆ ಯಾವುದೇ ಭೀತಿ ಇಲ್ಲ ಎಂದು ಹೇಳಿದ ಕೆಲವೇ ಗಂಟೆಗಳ ಬಳಿಕ ಕಾಂಗ್ರೆಸ್‌ನ ರಾಜಸ್ಥಾನ ಘಟಕದ ಉಪಾಧ್ಯಕ್ಷ ರಾಜೀವ್ ಅರೋರ ಹಾಗೂ ಧರ್ಮೇಂದ್ರ ರಾಥೋರ್ ಮನೆ ಮೇಲೆ ಐಟಿ ದಾಳಿ ನಡೆದಿದೆ.

ತೆರಿಗೆ ವಂಚನೆ ಆರೋಪದ ಮೇಲೆ ಜೈಪುರ ಹಾಗೂ ಕೋಟಾದಲ್ಲಿರುವ ಇಬ್ಬರು ನಾಯಕರ ಐದು ಕಟ್ಟಡಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ದಿಲ್ಲಿ, ಜೈಪುರ,ಮುಂಬೈ ಹಾಗೂ ಕೋಟಾದಲ್ಲಿ ಇಂದು ಬೆಳಗ್ಗೆ ನಡೆಸಿರುವ ಭಾರೀ ಐಟಿ ದಾಳಿಯಲ್ಲಿ 80ಕ್ಕೂ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News