ರಾಜ್ಯಪಾಲರನ್ನು ಭೇಟಿಯಾದ ಅಶೋಕ್ ಗೆಹ್ಲೋಟ್
ಹೊಸದಿಲ್ಲಿ,ಜು.14:ರಾಜಸ್ಥಾನದಲ್ಲಿರುವ ಅಶೋಕ್ ಗೆಹ್ಲೋಟ್ ಸರಕಾರ ಸುಭದ್ರವಾಗಿದೆ ಎಂದು ಸಾಬೀತುಪಡಿಸಲು ಬಹುಮತ ಸಾಬೀತುಪಡಿಸುವುದೇ ಒಂದು ಆಯ್ಕೆಯಾಗಿದೆ ಎಂದು ಬಿಜೆಪಿ ಹೇಳಿದೆ. ಮತ್ತೊಂದೆಡೆ ಕಾಂಗ್ರೆಸ್ನ ಶಾಸಕರ ಸಂಖ್ಯೆ ಬಹುಮತಕ್ಕಿಂತ ಕಡಿಮೆಯಾಗುತ್ತಿದೆ. ಸಂಖ್ಯೆಗಳ ಸಾಬೀತಿಗೆ ಬಹುಮತ ಸಾಬೀತುಪಡಿಸುವುದೇ ಏಕೈಕ ಮಾರ್ಗ ಎಂದು ಎಲ್ಲ ಬೆಳವಣಿಗೆಯನ್ನು ಹತ್ತಿರದಿಂದ ನೋಡುತ್ತಿರುವ ಬಿಜೆಪಿ ಹೇಳಿದೆ.
ಮತ್ತೊಂದೆಡೆ,ತನಗೆ ಬಹುಮತವಿದೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯಪಾಲ ಕಲರಾಜ್ ಮಿಶ್ರಾರನ್ನು ಇಂದು ಭೇಟಿಯಾದರು.
ನಿನ್ನೆ ಶಾಸಕಾಂಗ ಸಭೆ ನಡೆಸಿದ್ದ ಕಾಂಗ್ರೆಸ್ ತನ್ನ ಬಳಿ 106 ಶಾಸಕರ ಬೆಂಬಲವಿದೆ ಎಂದು ಹೇಳಿತ್ತು. ಆದರೆ ಇಂದು ಬೆಳಗ್ಗೆ ಮೂವರು ಶಾಸಕರು ಗೆಹ್ಲೋಟ್ ಬಣದಿಂದ ನಿರ್ಗಮಿಸಿದ್ದಾರೆ. ಹೀಗಾಗಿ ಶಾಸಕರ ಬಲ 100ಕ್ಕೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.
ಇಬ್ಬರು ಶಾಸಕರನ್ನು ಹೊಂದಿರುವ ಭಾರತೀಯ ಟ್ರೈಬಲ್ ಪಾರ್ಟಿ ನಿನ್ನೆ ಸಂಜೆ ಗೆಹ್ಲೋಟ್ ಸರಕಾರದ ಬೆಂಬಲ ಹಿಂಪಡೆದಿತ್ತು.