ಮಂಗಳೂರು: ಲಾಕ್ ಡೌನ್ ಸಂಧರ್ಭ ಜನತೆಗೆ ಆಹಾರ ಸಾಮಗ್ರಿ ಒದಗಿಸಲು ಒತ್ತಾಯಿಸಿ ಸಿಪಿಎಂ ಧರಣಿ

Update: 2020-07-15 06:51 GMT

ಮಂಗಳೂರು, ಜು.15:  ಲಾಕ್ ಡೌನ್ ಸಂಧರ್ಭದಲ್ಲಿ ಜನತೆಗೆ ಆಹಾರ ಸಾಮಗ್ರಿಗಳನ್ನು,ಕೋರೋನ ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ಒದಗಿಸಬೇಕು ಹಾಗೂ ಸೀಲ್ ಡೌನ್ ಪ್ರದೇಶಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಸಿಪಿಎಂ ನೇತೃತ್ವದಲ್ಲಿ ನಗರದಲ್ಲಿಂದು ಭಿತ್ತಿಚಿತ್ರ ಪ್ರದರ್ಶಿಸುವ ಮೂಲಕ ಧರಣಿ ನಡೆಯಿತು.

ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಈ ಹಿಂದಿನ ಲಾಕ್ ಡೌನ್ ನಿಂದಾಗಿ ದುಡಿಯುವ ವರ್ಗದ ಜನತೆ ತೀರಾ ಸಂಕಷ್ಟಗಳಿಗೆ ಒಳಗಾಗಿದ್ದು, ಈಗ ಮತ್ತೆ ವಿಧಿಸಿರುವ ಲಾಕ್ ಡೌನ್ ನಿಂದ ಕಂಗಾಲಾಗಿದ್ದಾರೆ. ಆದ್ದರಿಂದ ಉದ್ಯೋಗವಿಲ್ಲದೆ, ಕಾಸಿಲ್ಲದೆ, ಆಹಾರವಿಲ್ಲದೆ ಪರದಾಡುವ ತೀರಾ ಬಡ ಕಾರ್ಮಿಕರಿಗೆ ಅಹಾರ ಸಾಮಗ್ರಿಗಳನ್ನು ಜಿಲ್ಲಾಡಳಿತ ಒದಗಿಸಬೇಕು ಎಂದು ಆಗ್ರಹಿಸಿದರು.

 ಕೋರೋನ ನೆಪದಲ್ಲಿ ಜನರನ್ನು ಲೂಟಿ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ತೊಡಿಸಲು ಸರಕಾರ ಮುಂದಾಗಬೇಕು. ಕೋರೋನ ಸೋಂಕಿತರಿಗೆ ತಾರತಮ್ಯವಿಲ್ಲದೆ ಉಚಿತ ಚಿಕಿತ್ಸೆಯನ್ನು ಒದಗಿಸಬೇಕು ಹಾಗೂ ಖಾಸಗಿ ಆಸ್ಪತ್ರೆಗಳು ಕೋರೋನ ಸೇರಿದಂತೆ ಇತರ ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಡ್ಡಾಯಗೊಳಿಸಬೇಕು ಎಂದವರು ಸರಕಾರವನ್ನು ಒತ್ತಾಯಿಸಿದರು.

ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಜೆ.ಬಾಲಕ್ರಷ್ಣ ಶೆಟ್ಟಿ ಮಾತನಾಡಿ, ಕೋರೋನ ವೈರಸ್ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಈಗಾಗಲೇ ಘೋಷಿಸಿರುವ ಸೀಲ್ ಡೌನ್  ಪ್ರದೇಶಗಳ ಜನರ  ಸಂಕಷ್ಟಗಳು ಹೇಳ ತೀರಾದಾಗಿದೆ. ಅವರಿಗೆ ಬೇಕಾಗುವ ಆಹಾರ, ಔಷಧಿ ಸಾಮಗ್ರಿಗಳನ್ನು ಇಲ್ಲಿಯವರೆಗೂ ತಲುಪಿಸುವ ವ್ಯವಸ್ಥೆ ಇಲ್ಲ. ಅಧಿಕಾರಿಗಳು ಅತ್ತ ಗಮನವನ್ನೂ ಹರಿಸುತ್ತಿಲ್ಲ ಎಂದು ದೂರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಕೋರೋನ ನಿಗ್ರಹಿಸಲು ವೈಜ್ಞಾನಿಕ ನೆಲೆಯಲ್ಲಿ ಕಾರ್ಯ ನಿರ್ವಹಿಸುವ ಬದಲು ಲಾಕ್ ಡೌನ್ ಮಾತ್ರವೇ ಪರಿಹಾರವೆಂದು ಬಿಂಬಿಸಿ, ತನ್ನೆಲ್ಲಾ ವೈಫಲ್ಯವನ್ನು ಮರೆಮಾಚಲು ಲಾಕ್ ಡೌನ್ ಘೋಷಿಸಿ ಮತ್ತೊಮ್ಮೆ ಜನರನ್ನು ಸಂಕಷ್ಟಕ್ಕೆ ದೂಡಿದ ರಾಜ್ಯ ಸರಕಾರದ ನಡೆ ತೀರಾ ಖಂಡನೀಯ. ತಜ್ಞ ವೈದ್ಯರ ಕೊರತೆಯಿಂದ ಬಳಲುತ್ತಿರುವ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಸುರಕ್ಷತಾ ಆರೋಗ್ಯ ಕಿಟ್ ಗಳನ್ನು ಒದಗಿಸಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಧರಣಿಯಲ್ಲಿ ಸಿಪಿಎಂ ಜಿಲ್ಲಾ ನಾಯಕರಾದ ಜಯಂತಿ ಬಿ.ಶೆಟ್ಟಿ, ಸುರೇಶ್ ಬಜಾಲ್, ಸಿಐಟಿಯು ನಾಯಕರಾದ ಜಯಲಕ್ಷ್ಮೀ, ಮುಸ್ತಫ, ಹರೀಶ್ ಪೂಜಾರಿ, ಸಂತೋಷ್ ಆರ್.ಎಸ್., ಅನ್ವರ್ ಶೇಕ್, ನಾಗೇಶ್ ಕೋಟ್ಯಾನ್, ದಲಿತ ಹಕ್ಕುಗಳ ಸಮಿತಿಯ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಡಿವೈಎಫ್ ಐ ನಾಯಕರಾದ ಪ್ರಶಾಂತ್ ಉರ್ವಾಸ್ಟೋರ್, ನಾಗೇಂದ್ರ ಮುಂತಾದವರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News