ಕೆ.ಸಿ.ರೋಡ್: ಆ್ಯಂಬುಲೆನ್ಸ್ ವಾಹನ ಲೋಕಾರ್ಪಣೆ
ಕೆ.ಸಿ.ರೋಡ್, ಜು.16: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕೆ.ಸಿ.ರೋಡ್ ಹಾಗೂ ಎಸ್ಕೆಎಸ್ಎಸ್ಎಫ್ ಅಜ್ಜಿನಡ್ಕ, ಕೆ.ಸಿ ರೋಡ್, ಉಚ್ಚಿಲ ಶಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಇಂದು ಸಂಜೆ ಕೆ.ಸಿ.ರೋಡ್ ಜಂಕ್ಷನ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಅವರು ಆ್ಯಂಬುಲೆನ್ಸ್ ವಾಹನವನ್ನು ಲೋಕಾರ್ಪಣೆಗೈದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ಕಾರುಣ್ಯ ಸೇವೆಯನ್ನು ಶ್ಲಾಘಿಸಿದರು. ಇಂದಿನ ಸಂಕಷ್ಟದ ಸಮಯದಲ್ಲಿ ಸಮಾಜ ಸೇವೆಗಾಗಿ ಮತ್ತಷ್ಟು ಯುವಕರು ಮುಂದೆ ಬರಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಅಬ್ದುಲ್ ಸಲಾಮ್.ಯು ವಹಿಸಿದ್ದರು. ಕಾಸರಗೋಡ್ ಚಂಬರಿಕ ಮಲಬಾರ್ ಇಸ್ಲಾಮಿಕ್ ಕಾಂಪೆಕ್ಸ್ ನ ಪ್ರೊ.ಅಬ್ದುಲ್ಲಾ ಅರ್ಶದಿ ದುವಾಃ ನೆರವೇರಿಸಿದರು. ಸಮಸ್ತ ಕೇರಳ ಜಂ-ಇಯ್ಯತುಲ್ ಖುತ್ಬಾದ ದ.ಕ.ಜಿಲ್ಲಾಧ್ಯಕ್ಷ ಇಬ್ರಾಹಿಮ್ ಬಾಖವಿ ಕೆ.ಸಿ.ರೋಡ್ ಪ್ರಾಸ್ತಾವಿಕ ಮಾತನ್ನಾಡಿದರು.
ಮುಖ್ಯ ಅತಿಥಿಗಳಾಗಿ ಸ್ಥಳೀಯ ಶಾಸಕರೂ, ಮಾಜಿ ಸಚಿವ ಯು.ಟಿ.ಖಾದರ್, ಅಜ್ಜಿನಡ್ಕ ಜುಮ್ಹಾ ಮಸೀದಿ ಖತೀಬ್ ಬಶೀರ್ ರಹ್ಮಾನಿ, ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ, ಕಿನ್ಯಾ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ತಾಲೂಕ್ ಪಂಚಾಯತ್ ಸದಸ್ಯ ಸಿದ್ದೀಕ್ ತಲಪಾಡಿ, ಎಸ್ಕೆಎಸ್ಎಸ್ಎಫ್ ಶಾಖಾಧ್ಯಕ್ಷ ಎಮ್.ಕೆ.ಹಿದಾಯತ್, ಅಹ್ಮದ್ ಅಜ್ಜಿನಡ್ಕ, ಯಾಕೂಬ್ ಪೂಮಣ್ಣ್, ಸಾಹುಲ್ ಹಮೀದ್ ಕೆ.ಸಿ., ಹಸೈನಾರ್ ಕೊಳಂಗೆರೆ, ಬಶೀರ್ ಅಜ್ಜಿನಡ್ಕ ಸೇರಿ ಹಲವರು ಪಾಲ್ಗೊಂಡಿದ್ದರು.
ಎಸ್ಕೆಎಸ್ಎಸ್ಎಫ್ ಶಾಖಾ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಹನೀಫ್ ಸ್ವಾಗತಿಸಿ, ವಂದಿಸಿದರು.