ದ.ಕ.ಜಿಲ್ಲೆಯ ರೈತರಿಂದ ಅರ್ಜಿ ಹಾಕಲು ನಿರಾಸಕ್ತಿ

Update: 2020-07-20 09:32 GMT

► ಕಳೆದ ಬಾರಿಯ ವಿಮೆ ಹಣ ಬಾರದ ಹಿನ್ನೆಲೆ

ಮಂಗಳೂರು: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣಕಾಸು ಸಮಸ್ಯೆಗಳನ್ನು ಎದುರಿಸುತ್ತಿದ್ದ ಬಹುತೇಕ ರೈತರು ಪ್ರಸಕ್ತ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ಡಬ್ಲುಬಿಸಿಐಎಸ್)ಯಡಿ ಅರ್ಜಿ ಹಾಕಲಾಗದೆ ಪರಿತಪಿಸುತ್ತಿರುವ ವಿದ್ಯಮಾನ ಬೆಳಕಿಗೆ ಬಂದಿದೆ.

2020-21ನೇ ಸಾಲಿನ ಯೋಜನೆಗೆ ಅರ್ಜಿ ಹಾಕಲು ಕೊನೆಯ ಕ್ಷಣದಲ್ಲಿ ಪ್ರಕಟನೆ ಹೊರಡಿಸಿದ ತೋಟಗಾರಿಕೆ ಇಲಾಖೆಯು ಪ್ರಭಾವಿ ರೈತರ ಆಗ್ರಹದ ಮೇರೆಗೆ ಜು.10ರವರೆಗೆ ಅವಧಿ ವಿಸ್ತರಿಸಿತ್ತು. ಆದರೆ ಗ್ರಾಮಾಂತರ ಭಾಗದ ಅನೇಕ ರೈತರಿಗೆ ಈ ಬಗ್ಗೆ ಸಕಾಲಕ್ಕೆ ಮಾಹಿತಿ ಸಿಗದ ಕಾರಣ ಅರ್ಜಿ ಹಾಕಲು ಸಾಧ್ಯವಾಗಿಲ್ಲ. ಈ ಮಧ್ಯೆ ಕೆಲವು ಮಂದಿ ರೈತರು ಕಳೆದ ಬಾರಿ ಕಟ್ಟಿದ ವಿಮೆ ಹಣದ ಬಗ್ಗೆ ಈವರೆಗೂ ಯಾವುದೇ ವಿವರ ಸಿಗದ ಕಾರಣ ಮತ್ತೆ ಈ ಬಾರಿ ಅರ್ಜಿ ಹಾಕಲು ಆಸಕ್ತಿ ವಹಿಸಿಲ್ಲ. ಹಾಗಾಗಿ ಈ ಬಾರಿ ಕೊರೋನ-ಲಾಕ್‌ಡೌನ್ ಮತ್ತಿತರ ಸಮಸ್ಯೆಯಿಂದಾಗಿ ಅರ್ಜಿ ಹಾಕುವುದರಿಂದ ಅಧಿಕ ಸಂಖ್ಯೆಯ ರೈತರು ವಂಚಿತರಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ಮಾಹಿತಿ ನೀಡದೆ ಅನ್ಯಾಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

► 2016-17ನೇ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆವಾಗ ದ.ಕ. ಜಿಲ್ಲೆಯ ಲಕ್ಷಕ್ಕೂ ಅಧಿಕ ರೈತರ ಪೈಕಿ 5,295 ರೈತರು ಅರ್ಜಿ ಸಲ್ಲಿಸಿದ್ದರು. 2017-18ನೇ ಸಾಲಿನಲ್ಲಿ ಕೇವಲ 945 ರೈತರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ಈ ಬಗ್ಗೆ ಮಾಹಿತಿ ನೀಡದಿರುವುದೇ ಕಾರಣವಾಗಿತ್ತು. 2018-19ನೇ ಸಾಲಿನಲ್ಲಿ 8,762 ರೈತರು ಅರ್ಜಿ ಸಲ್ಲಿಸಿದ್ದರು. 2019-20ನೇ ಸಾಲಿನಲ್ಲಿ 26,451 ರೈತರು ಅರ್ಜಿ ಸಲ್ಲಿಸಿದ್ದರು.

ಆದರೆ ಬೆಳೆವಿಮೆ ಮೊತ್ತ ಪಾವತಿಸಿಯೂ ಪರಿಹಾರ ಧನದ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ ರೈತರು ಭಾಗಶಃ ಕಂಗಾಲಾಗಿದ್ದಾರೆ. ಕಳೆದ ಬಾರಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿತ್ತು. ಈ ಬಾರಿಯೂ ಮಳೆಯಾಗುತ್ತಿದೆ. ಮಳೆಯಿಂದ ಅಡಕೆಗೆ ರೋಗ ಬಾಧಿಸುವುದು, ಉದುರುವುದು ಸಾಮಾನ್ಯ. ಆದರೆ ಕಟ್ಟಿದ ವಿಮೆ ಹಣದ ಬಗ್ಗೆ ಸಕಾಲಕ್ಕೆ ಯಾವುದೇ ಮಾಹಿತಿ ಸಿಗದ ಕಾರಣ ರೈತರು ಈ ಬಗ್ಗೆ ಆಸಕ್ತಿ ಹೊಂದಿಲ್ಲ. ಅಧಿಕಾರಿಗಳು ಕೂಡ ಕೊನೆಯ ಕ್ಷಣದಲ್ಲಿ ವಿಮೆ ಕಂತು ಪಾವತಿಸಲು ಸೂಚಿಸಿರುವುದು ಕೂಡ ರೈತರಿಗೆ ಹಿನ್ನೆಡೆಯಾಗಿ ಪರಿಣಮಿಸಿದೆ.

► ತೋಟಗಾರಿಕಾ ಇಲಾಖೆಯು ತೋಟಗಾರಿಕೆ ಬೆಳೆಗಳಿಗೆ (ದ.ಕ.ಜಿಲ್ಲೆಯಲ್ಲಿ ಅಡಿಕೆ-ಕರಿಮೆಣಸು)ಸಂಬಂಧಿಸಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು 2016-17ನೇ ಸಾಲಿನಲ್ಲಿ ಆರಂಭಿಸಿತ್ತು. ಅಂದರೆ ಪ್ರತೀ ವರ್ಷದ ಜುಲೈಯಿಂದ ಜೂನ್‌ವರೆಗೆ ಹವಾಮಾನ ವೈಪರಿತ್ಯ (ಮಳೆ, ಬಿಸಿಲು, ಚಳಿಯಲ್ಲಾಗುವ ಬದಲಾವಣೆ)ದಿಂದ ಬೆಳೆಗಳಿಗೆ ಹಾನಿ ಅಥವಾ ಇಳುವರಿಯಲ್ಲಿ ಏರಿಳಿತವಾಗಲಿದೆ. ಹಾಗಾಗಿ ರೈತರು ಕೊಳೆರೋಗ, ಮಳೆಯಿಂದ ಅಡಿಕೆ ಮರ ಉರುಳಿತು, ಅಡಿಕೆ ನಾಶವಾಯಿತು ಎಂದೆಲ್ಲಾ ಅರ್ಜಿ ಸಲ್ಲಿಸಲು ಕಚೇರಿಯಿಂದ ಕಚೇರಿಗೆ ಅಲೆದಾಡುವುದು ಸಾಮಾನ್ಯವಾಗಿದೆ. ಗ್ರಾಮಕರಣಿಕರು ಅಥವಾ ಅವರ ಸಹಾಯಕರು ಕೂಡ ಈ ಬಗ್ಗೆ ಸೂಕ್ತ ಸಮೀಕ್ಷೆ ಮಾಡದೆ ತಮಗೆ ಬೇಕಾದಂತೆ ವರದಿ ಮಾಡಿ ಅರ್ಹ ರೈತರನ್ನು ವಂಚಿಸುವುದಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಗೊಳಿಸಿತ್ತು.

ಕೇಂದ್ರ ಸರಕಾರ ನೀಡುವ ಮಾನದಂಡದ ಆಧಾರದ ಮೇಲೆ ತೋಟಗಾರಿಕೆ ಬೆಳೆಯ ರೈತರಿಗೆ ಬೆಳೆ ನಷ್ಟ ಉಂಟಾದಲ್ಲಿ ವಿಮೆ ನಷ್ಟ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರೈತರು ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ, ಸಹಕಾರಿ ಬ್ಯಾಂಕ್‌ಗಳಲ್ಲಿ ವಿಮೆಯ ಮೊತ್ತ ಪಾವತಿಸಬಹುದು. ಈ ಹಿಂದೆ ಬೆಳೆ ಸಾಲ ಪಡೆದಿರುವ ರೈತರಿಗೆ ಇದು ಕಡ್ಡಾಯವಾಗಿತ್ತು. ಸಾಲ ಪಡೆಯದ ರೈತರು ಇಚ್ಛೆ ಇದ್ದರೆ ಮಾತ್ರ ವಿಮೆ ಮಾಡಿಸಬಹುದಿತ್ತು. ಆದರೆ ಇದೀಗ ಕಡ್ಡಾಯದಿಂದ ವಿನಾಯಿತಿ ನೀಡಲಾಗಿದೆ. ಆಸಕ್ತ ರೈತರು ಇದರ ಅರ್ಜಿ ಹಾಕಿ ಬೆಳೆವಿಮೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 2019ರ ಮೇ 22ರಂದು ರಾಜ್ಯ ಸರಕಾರ ಹೊರಡಿಸಿದ ಹೊಸ ಆದೇಶದಲ್ಲಿ ಇದನ್ನು ಗ್ರಾಮಮಟ್ಟದಲ್ಲಿ ಅನುಷ್ಠಾನಗೊಳಿಸಲು ತಿಳಿಸಿದೆ. ಅದಕ್ಕಾಗಿಯೇ ರಾಜ್ಯ ಸರಕಾರದಿಂದ ಅಭಿವೃದ್ಧಿಪಡಿಸಲಾದ ಆನ್‌ಲೈನ್ ಪೋರ್ಟಲ್ ಮೂಲಕ ರೈತರ ವಿವರವನ್ನು ನೋಂದಾಯಿಸಲಾಗಿದೆ. ಈ ಯೋಜನೆಯ ಸರಕಾರದ ಪಾಲನ್ನು ಕೇಂದ್ರ ಮತ್ತು ರಾಜ್ಯ ಸರಕಾರವು ತಲಾ ಶೇ.50ರಷ್ಟು ಅನುಪಾತದಲ್ಲಿ ಭರಿಸಲಿದೆ. ಅಂದಹಾಗೆ ಪ್ರತಿಯೊಬ್ಬ ರೈತರು ಅಡಕೆಗೆ ಪ್ರತೀ ಹೆಕ್ಟೇರ್‌ಗೆ (ಎರಡುವರೆ ಎಕರೆ) 6,400 ರೂ. ಮತ್ತು ಕರಿಮೆಣಸಿಗೆ 2,350 ರೂ. ಪಾವತಿಸಬೇಕು. ರೈತರ ಪಾವತಿಸಿದ ವಿಮೆಯ ಮೊತ್ತಕ್ಕೆ ಸರಕಾರವು ಅಡಕೆಗೆ 32,000 ರೂ. ಮತ್ತು ಕರಿಮೆಣಸಿಗೆ 8,817 ರೂ. ಭರಿಸಲಿದೆ. ಅಡಕೆಗೆ ಪ್ರತೀ ಹೆಕ್ಟೇರ್‌ಗೆ 1,28,000 ರೂ. ಮತ್ತು ಕರಿಮೆಣಸಿಗೆ 47,000 ರೂ.ವಿಮಾ ಮೊತ್ತ ಲಭಿಸಲಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ವು ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ‘ಮಳೆ ಮಾಪನ’ ಮತ್ತು ‘ಹವಾಮಾನ ಮಾಪನ ಕೇಂದ್ರ’ಗಳು, ಭಾರತೀಯ ಹವಾಮಾನ ಇಲಾಖೆಯ ಕೇಂದ್ರಗಳು, ಕೃಷಿ ವಿವಿಗಳು, ರಾಜ್ಯ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಕೇಂದ್ರಗಳಲ್ಲಿ ದಾಖಲಿಸಲಾದ ಹವಾಮಾನ ಆಧರಿಸಿ ಬೆಳೆ ವಿಮೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುತ್ತದೆ. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ತಾಂತ್ರಿಕ ಸಮಿತಿಯಲ್ಲಿ ಅನುಮೋದನೆ ಪಡೆಯಲಾಗುತ್ತದೆ.

ಬ್ಯಾಂಕ್ ಖಾತೆಗಳಿಗೆ ಜಮೆ

 ಬೆಳೆ ವಿಮೆ ಮಾಡಿಸಿದ ಯಾವೊಬ್ಬ ರೈತ ಕೂಡ ಪರಿಹಾರ ಧನದ ವೆ ೂತ್ತದ ಬಗ್ಗೆ ಆತಂಕಿತರಾಗಬೇಕಿಲ್ಲ. 2019-20ನೇ ಸಾಲಿನ ಹಣವು ಸೆಪ್ಟಂಬರ್ ಅಥವಾ ಅಕ್ಟೋಬರ್‌ನಲ್ಲಿ ಜಮೆ ಆಗಲಿದೆ. ಈ ವರ್ಷದ ಜುಲೈಯಿಂದ ಮುಂದಿನ ವರ್ಷದ ಜೂನ್‌ಗೆ ಅನ್ವಯಗೊಳ್ಳುವಂತೆ ಕಂತು ಪಾವತಿಸಬೇಕಾಗುತ್ತದೆ. ಈ ಅವಧಿಯಲ್ಲಾದ ಪ್ರಾಕೃತಿಕ ವಿಕೋಪಕ್ಕೆ ಪರಿಹಾರ ಧನ ನೀಡಲಾಗುತ್ತದೆ.

 ಪ್ರವೀಣ್

ಹಿರಿಯ ಸಹಾಯಕ ನಿರ್ದೇಶಕರು

ತೋಟಗಾರಿಕಾ ಇಲಾಖೆ ದ.ಕ.ಜಿಲ್ಲೆ

ಮಾಹಿತಿ ಇರಲಿಲ್ಲ

ಕಳೆದ ಬಾರಿ ನಾವು ಬ್ಯಾಂಕ್ ಖಾತೆಯ ಮೂಲಕ ವಿಮೆ ಹಣ ಕಟ್ಟಿದ್ದೆವು. ಈ ಬಾರಿ ಕೊರೋನ-ಲಾಕ್‌ಡೌನ್‌ನಿಂದಾಗಿ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಆದರೆ, ಸಾಲ ಮಾಡಿ ವಿಮೆ ಕಂತು ಕಟ್ಟಬೇಕು ಎಂದು ಬಯಸಿದ್ದೆವು. ಆದರೆ, ತೋಟಗಾರಿಕೆ ಇಲಾಖೆಯಿಂದ ಕೊನೆಯ ಕ್ಷಣದಲ್ಲಿ ಮಾಹಿತಿ ಬಂದ ಕಾರಣ ನಮಗೆ ಸಾಲ ಮಾಡಲಾಗಲಿಲ್ಲ. ವಿಮೆ ಕಂತನ್ನೂ ಕಟ್ಟಲು ಆಗಲಿಲ್ಲ. ಕನಿಷ್ಟ 2 ವಾರದ ಮೊದಲು ಮಾಹಿತಿ ನೀಡಿದ್ದರೆ ನಾವು ಹೇಗಾದರು ಮಾಡಿ ವಿಮೆ ಕಂತು ಕಟ್ಟುತ್ತಿದ್ದೆವು.

 ರಮೇಶ್ ಪೂಜಾರಿ,

ಅಡಕೆ ಬೆಳೆಗಾರ

 ಕಳೆದ ವರ್ಷ ನಾನು ಎರಡು ಎಕರೆ ಅಡಕೆ ತೋಟದ ಬೆಳೆವಿಮೆ ಕಟ್ಟಿದ್ದೆ. ಆದರೆ ಕಟ್ಟಿದ ಆ ಹಣದ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ಈ ಬಾರಿ ಮತ್ತೆ ಹಣ ಕಟ್ಟಲು ಮನಸ್ಸಾಗಲಿಲ್ಲ. ಅಲ್ಲದೆ ನಮಗೆ ಇಲಾಖೆಯಿಂದ ಸ್ಪಷ್ಟ ಮಾಹಿತಿಯೂ ಇರಲಿಲ್ಲ.

 ಅಬ್ದುರ್ರಹ್ಮಾನ್, ದೇರಳಕಟ್ಟೆ

ಅಡಕೆ ಬೆಳೆಗಾರ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News