ಆಸ್ಪತ್ರೆಗಳ ಇಂತಹ ನಿರ್ಲಕ್ಷ್ಯಕ್ಕೆ ಹೊಣೆ ಯಾರು?

Update: 2020-07-20 17:12 GMT

ಮಾನ್ಯರೇ,

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ತೀವ್ರಗತಿಯಲ್ಲಿ ಏರುತ್ತಿರುವ ಬೆನ್ನೆಲ್ಲೆ ಸಾವಿನ ಸಂಖ್ಯೆಯೂ ಕೂಡ ಹೆಚ್ಚಾಗಿ ಇಡೀ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ. ಮುಂಜಾಗ್ರತಾ ಕ್ರಮವಾಗಿ ಸರಕಾರ ಕೊರೋನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ನೆರವು ಪಡೆದುಕೊಂಡಿದೆ.

ದುರಂತವೆಂದರೆ ರಾಜ್ಯದೆಲ್ಲೆಡೆ ತೀವ್ರವಾಗಿ ರೋಗಲಕ್ಷಣ ಹೊಂದಿರುವವರು ಅಥವಾ ಇನ್ಯಾವುದೋ ಸಾಮಾನ್ಯ ಚಿಕಿತ್ಸೆಗೆಂದು ಬಂದಿರುವವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಎಷ್ಟೇ ಅಲೆದರೂ ಕೂಡ ಯಾವುದೇ ರೀತಿಯಲ್ಲೂ ಖಾಸಗಿ ಆಸ್ಪತ್ರೆಯವರು ಸ್ಪಂದಿಸುತ್ತಿಲ್ಲ ಎಂಬ ವರದಿಗಳು ಬರುತ್ತಿವೆ. ಇಂತಹ ಅಸಡ್ಡೆಗೆ ಒಂದು ತಿಂಗಳಿನ ಮಗುವಿನಿಂದ ಹಿಡಿದು ವಯೋವೃದ್ಧರೂ ಕೂಡ ಹೊರತಾಗಿಲ್ಲ.

ಕನಿಷ್ಠ ಪ್ರಾಥಮಿಕ ಚಿಕಿತ್ಸೆಯನ್ನು ನೀಡಬೇಕೆನ್ನುವ ಸೌಜನ್ಯವನ್ನೂ ಆಸ್ಪತ್ರೆಗಳು ತೋರಿಸುತ್ತಿಲ್ಲ. ರೋಗಿಗಳನ್ನು ದಾಖಲಿಸಿಕೊಳ್ಳಲು 18ರಿಂದ 20 ತಾಸು ಕಾಯಬೇಕಾದ ಕೆಟ್ಟ ಅನಿವಾರ್ಯ ಸ್ಥಿತಿ ಬಂದೊದಗಿದೆ. ಕೇಳಿದರೆ ಸರಕಾರ ರೂಪಿಸಿರುವ ನೀತಿ ನಿಯಮಗಳು ಮತ್ತು ಮಾನದಂಡಗಳ ಬಗ್ಗೆ ಹೇಳುತ್ತಾರೆ ಅಥವಾ ಇನ್ಯಾವುದೋ ಸಬೂಬು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಇಂತಹ ನೂರಾರು ಪ್ರಕರಣಗಳನ್ನು ಮಾಧ್ಯಮ ವರದಿಗಳಲ್ಲಿ ನೋಡುತ್ತಿದ್ದೇವೆ. ಇಂತಹ ಆಸ್ಪತ್ರೆಗಳಿಗೆ ಜನರ ಜೀವಕ್ಕಿಂತ ನೀತಿ-ನಿಯಮಗಳೇ ದೊಡ್ಡದಾಗುತ್ತಿದೆ. ಸರಕಾರದ ಕ್ರಮಗಳಿಂದ ಮತ್ತು ಖಾಸಗಿ ಆಸ್ಪತ್ರೆಗಳ ನಿರ್ಲಕ್ಷದಿಂದಾಗಿ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೆ ದಿನೇ ದಿನೇ ಅಮಾಯಕ ಬಡ ಜೀವಗಳ ಪ್ರಾಣ ಹಾರಿ ಹೋಗುತ್ತಿವೆ. ಖಾಸಗಿ ಆಸ್ಪತ್ರೆಗಳು ಇನ್ನು ಮುಂದೆಯಾದರೂ ಅಮಾಯಕ ಬಡ ಜೀವಗಳ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಲಿ. ಕೂಡಲೇ ಸರಕಾರ ಇತ್ತ ಗಮನಹರಿಸಿ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷತನಕ್ಕೆ ಕಡಿವಾಣ ಹಾಕಬೇಕಾಗಿದೆ. ಅಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ಸರಕಾರ ರೂಪಿಸಿರುವ ನಿಯಮಗಳು ಮತ್ತು ಷರತ್ತುಗಳನ್ನು ಸಡಿಲಗೊಳಿಸಿ ಅಮಾಯಕರ ಪ್ರಾಣವನ್ನು ಉಳಿಸಲು ನೆರವಾಗಬೇಕಾಗಿದೆ.

Writer - -ಮುರುಗೇಶ ಡಿ. ದಾವಣಗೆರೆ

contributor

Editor - -ಮುರುಗೇಶ ಡಿ. ದಾವಣಗೆರೆ

contributor

Similar News