ಚಿತ್ರಹಿಂಸೆ ನೀಡಿದ ಆರೋಪಿಗಳ ಮನೆಯಲ್ಲಿಯೇ ಆತ್ಮಹತ್ಯೆಗೈದ ಯುವಕ: ದೂರು

Update: 2020-07-22 15:10 GMT
ಸಾಂದರ್ಭಿಕ ಚಿತ್ರ

ಶಂಕರನಾರಾಯಣ, ಜು.22: ಚಿತ್ರಹಿಂಸೆ ತಾಳಲಾರದೆ ಯುವಕನೋರ್ವ ಆರೋಪಿಗಳ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಅಂಪಾರು ನಿವಾಸಿ ಕೀರ್ತಿ(27) ಎಂದು ಗುರುತಿಸಲಾಗಿದೆ. ಈ ಬಗ್ಗೆ ಮೃತರ ಸಹೋದರಿ ಬೆಂಗಳೂರಿನಲ್ಲಿರುವ ಲಲಿತಾ ಪೊಲೀಸರಿಗೆ ದೂರು ನೀಡಿದ್ದಾರೆ.

ಕೀರ್ತಿ ಆರೋಪಿಗಳಾದ ಅಂಪಾರಿನ ಗಿರಿಜಾ ಪೂಜಾರಿ, ಮಮತಾ ಪೂಜಾರಿ, ಉಮೇಶ ಪೂಜಾರಿ ಎಂಬವರ ಮನೆಯ ಬಳಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದರು. ಈ ವೇಳೆ ಆರೋಪಿಗಳು ಕೀರ್ತಿಯವರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಈ ಚಿತ್ರಹಿಂಸೆ ತಾಳಲಾರದೆ ಕೀರ್ತಿ ಜು.20ರಂದು ರಾತ್ರಿ ಆರೋಪಿಗಳ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದರೆ ಈ ಸಂದರ್ಭ ಆರೋಪಿಗಳು ಬೆಂಗಳೂರಿನಲ್ಲಿರುವ ಲಲಿತಾ ಅವರಿಗೆ ಕರೆ ಮಾಡಿ, ಕೀರ್ತಿಗೆ ಹೃದಯಘಾತವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು  ಹೋಗುತ್ತಿದೇವೆ ಎಂದು ಹೇಳಿದ್ದರು. ಆ ಬಳಿಕ ಬೆಳಗ್ಗಿನ ಜಾವ 4:30ಕ್ಕೆ ಮತ್ತೆ ಕರೆ ಮಾಡಿ, ಕೀರ್ತಿ ಹೃದಯಘಾತದಿಂದ ತೀರಿ ಹೋಗಿದ್ದಾನೆ ಎಂದು ಹೇಳಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶಂಕರ ನಾರಾಯಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News