ದ.ಕ. ಜಿಲ್ಲಾಧಿಕಾರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ

Update: 2020-07-28 06:09 GMT
ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

ಮಂಗಳೂರು, ಜು. 28: ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ರವರಿಗೆ ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾನುವಾರು ಸಾಗಾಟಗಾರರ ಮೇಲೆ ನಡೆಸಲಾಗುತ್ತಿರುವ ಹಲ್ಲೆಗಳನ್ನು ಉಲ್ಲೇಖಿಸಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದ ಜಿಲ್ಲಾಧಿಕಾರಿಯವರ ಹೇಳಿಕೆಯ ಸುದ್ದಿಯನ್ನು ಉಲ್ಲೇಖಿಸಿ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ನೇರವಾಗಿ ತುಳುವಿನಲ್ಲಿ ಜಿಲ್ಲಾಧಿಕಾರಿಯ ಹತ್ಯೆಯ ಬೆದರಿಕೆಯೊಡ್ಡಿದ್ದಾನೆ. ಮಾತ್ರವಲ್ಲದೆ, ''ನಮ್ಮ ಹಿಂದುತ್ವಕ್ಕಾಗಲಿ, ಅಥವಾ ದೇವರಿಗಾಗಲಿ ಯಾರಾದರೂ ಧಕ್ಕೆ ಮಾಡುವ ಕೆಲಸ ಮಾಡಿದ್ದಲ್ಲಿ ಅವರ ಪ್ರಾಣ ತೆಗೆಯಲೂ ರೆಡಿ ಪ್ರಾಣ ನೀಡಲೂ ಸಿದ್ಧ'' ಎಂಬುದಾಗಿಯೂ ತುಳುವಿನಲ್ಲಿ ಆ ವ್ಯಕ್ತಿ ಬೆದರಿ ಹಾಕಿದ್ದಾನೆ.

ಈ ನಡುವೆ, ಜಿಲ್ಲಾಡಳಿತದ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದ್ದು, ‘‘ಸಾಮಾಜಿಕ ಜಾಲತಾಣಗಳಲ್ಲಿ ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆ ಅನೇಕರು ಗೊಂದಲ ಉಂಟು ಮಾಡುತ್ತಿರುವುದು ಕಂಡು ಬಂದಿರುತ್ತದೆ. ಯಾವುದೇ ಅಕ್ರಮ ಜಾನುವಾರು ಸಾಗಣೆ ಕಂಡುಬಂದಲ್ಲಿ ಪೊಲೀಸರಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ವದಂತಿಗಳಿಗೆ ಕಿವಿಕೊಡಬಾರದು’’ ಎಂದು ಕೋರಿದೆ.


‘‘ಇದು ಇಲಾಖೆಯ ಗಮನಕ್ಕೆ ಬಂದಿದೆ. ಈಗಾಗಲೇ ತನಿಖೆ ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ಜತೆ ಮಾತನಾಡಿದ್ದೇವೆ. ಜಿಲ್ಲಾಧಿಕಾರಿ ದೂರು ನೀಡಿದ್ದಲ್ಲಿ ಸ್ವೀಕರಿಸಲಾಗುವುದು. ಇಲ್ಲವಾದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗುವುದು, ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷಿಸುವುದಿಲ್ಲ.’’

- ಅರುಣಾಂಶಗಿರಿ, ಉಪ ಆಯುಕ್ತರು ( ಕಾನೂನು ಮತ್ತು ಸುವ್ಯವಸ್ಥೆ), ಮಂಗಳೂರು ಪೊಲೀಸ್.


ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಾಟ್ಸ್ ಆ್ಯಪ್ ಸಂದೇಶದ ಸ್ಕ್ರೀನ್ ಶಾಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News