ಆಸ್ಪತ್ರೆಯ 3ನೇ ಮಹಡಿಯಿಂದ ಹಾರಿ ಕೊರೋನ ಸೋಂಕಿತ ಆತ್ಮಹತ್ಯೆ

Update: 2020-08-01 18:00 GMT

ಅಗರ್ತಲಾ, ಆ. 1: ಇಲ್ಲಿನ ಗೋವಿಂದ ಬಲ್ಲಾಭ್ ಪಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 31 ವರ್ಷದ ಕೊರೋನ ಸೋಂಕಿತನೋರ್ವ ಶನಿವಾರ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ತ್ರಿಪುರಾ ಜಿಲ್ಲೆಯ ಮುಹುರಿಪುರ ಗ್ರಾಮದ ವ್ಯಕ್ತಿಯನ್ನು ಕೊರೋನ ಲಕ್ಷಣದ ಹಿನ್ನೆಲೆಯಲ್ಲಿ ಶುಕ್ರವಾರ ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ನಡೆಸಿ ಪರೀಕ್ಷೆಯಲ್ಲಿ ಅವರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಯ ಹೇಳಿಕೆ ಹಾಗೂ ವ್ಯಕ್ತಿ ಆತ್ಮಹತ್ಯೆ ಪ್ರಯತ್ನಿಸಿದ ಇತ್ತೀಚೆಗಿನ ಇತಿಹಾಸವನ್ನು ಗಮನಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳಲು ಅವರು ಖಿನ್ನತೆಯಿಂದ ಬಳಲುತ್ತಿರುವುದೇ ಕಾರಣ ಎಂದು ಕಾಣುತ್ತದೆ. ಆಸ್ಪತ್ರೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಯಾವುದೇ ಸಾಕ್ಷ್ಯ ನಮಗೆ ಇದುವರೆಗೆ ಸಿಕ್ಕಿಲ್ಲ. ತನಿಖೆ ಮುಂದುವರಿದಿದೆ ಎಂದು ಜಿಬಿ ಪೊಲೀಸ್ ಹೊರಠಾಣೆಯ ಉಸ್ತುವಾರಿ ಅಧಿಕಾರಿ ರಾಕೇಶ್ ಪಟೋರಿ ತಿಳಿಸಿದ್ದಾರೆ.

ಈ ವ್ಯಕ್ತಿಯನ್ನು ರಾತ್ರಿ 11 ಗಂಟೆಗೆ ಕೊರೋನ ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ಶುಕ್ರವಾರ ರಾತ್ರಿ ಅವರು ಕಟ್ಟಡದ ಮೂರನೇ ಮಹಡಿಯಿಂದ ಹಾರಿದರು. ಗಂಭೀರ ಗಾಯಗೊಂಡ ಅವರಿಗೆ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಕೂಡಲೇ ಚಿಕಿತ್ಸೆ ನೀಡಿದರು. ಶನಿವಾರ ಮುಂಜಾನೆ ಅವರು ಸಾವನ್ನಪ್ಪಿದರು ಎಂದು ದಾದಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News