ಆಕಸ್ಮಿಕವಾಗಿ ಮನೆ ಬಾವಿಗೆ ಬಿದ್ದ ವೃದ್ಧೆ: ಬಾವಿಗಿಳಿದ ಪಿಎಸ್ಐ, ಇತರರಿಂದ ರಕ್ಷಣೆ

Update: 2020-08-06 11:40 GMT

ಉಡುಪಿ, ಆ.6: ಬಾವಿಗೆ ಬಿದ್ದ ವೃದ್ಧೆಯೊಬ್ಬರನ್ನು ಉಡುಪಿ ನಗರ ಠಾಣಾ ಎಸ್ಸೈ ಸಹಿತ ಮೂವರು ಬಾವಿಗೆ ಇಳಿದು ರಕ್ಷಿಸಿದ ಘಟನೆ ಆ.6ರಂದು ಬೆಳಗ್ಗೆ ಕುಕ್ಕಿಕಟ್ಟೆ ಸಮೀಪದ ಅನಂತಕೃಷ್ಣ ನಗರ ಎಂಬಲ್ಲಿ ನಡೆದಿದೆ.

ಅನಂತಕೃಷ್ಣ ನಗರದ ಶಾರದಾ ಶೆಟ್ಟಿಗಾರ್(80) ಎಂಬವರು ಇಂದು ಬೆಳಗ್ಗೆ ತಮ್ಮ ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದರೆನ್ನಲಾಗಿದೆ. ನೀರಿನಲ್ಲಿ ಮುಳುಗಿದ ಇವರು, ಬಾವಿಗೆ ಅಳವಡಿಸಿದ ಪಂಪ್ ಹಿಡಿದು ತನ್ನ ಜೀವ ಉಳಿಸಿಕೊಂಡಿದ್ದರು. ಕೂಡಲೇ ಮಾಹಿತಿ ತಿಳಿದ ಸ್ಥಳೀಯ ಆಟೊ ರಿಕ್ಷಾ ಚಾಲಕ ರಾಜೇಶ್ ನಾಯಕ್ ಬಾವಿಗೆ ಇಳಿದು ವೃದ್ಧೆಯ ರಕ್ಷಣೆಗೆ ಮುಂದಾದರು.

ಈ ಮಧ್ಯೆ ಮಾಹಿತಿ ತಿಳಿದು ಉಡುಪಿ ನಗರ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದರು. ರಿಕ್ಷಾ ಚಾಲಕರಿಗೆ ಒಬ್ಬರಿಗೆ ವೃದ್ಧೆಯನ್ನು ಮೇಲಕ್ಕೆತ್ತಲು ಸಾಧ್ಯವಾಗದೆ ಇದ್ದಾಗ ನಗರ ಠಾಣಾ ಎಸ್ಸೈ ಸದಾಶಿವ ಗವರೋಜಿ ಕೂಡ ಬಾವಿಗೆ ಇಳಿದರು. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮದ ದಳ ಸಿಬ್ಬಂದಿ ಪೈಕಿ ವಿನಾಯಕ ಕೂಡ ಬಾವಿಗೆ ಇಳಿದರು.

ನಂತರ ಈ ಮೂವರು ವೃದ್ಧೆಯನ್ನು ಸುರಕ್ಷಿತವಾಗಿ ಹಗ್ಗದ ಸಹಾಯದಿಂದ ಮೇಲಕ್ಕೆತ್ತಿದರು. ಶಾರದಾ ಶೆಟ್ಟಿಗಾರ್ ಆರೋಗ್ಯವಾಗಿದ್ದು, ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News