ಕಾಸರಗೋಡು ಜಿಲ್ಲಾದ್ಯಂತ ಧಾರಾಕಾರ ಮಳೆ: ನದಿ ತೀರದ ಮನೆಗಳಿಗೆ ನುಗ್ಗಿದ ನೆರೆ ನೀರು

Update: 2020-08-08 07:26 GMT

ಕಾಸರಗೋಡು, ಆ.8: ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಗ್ಗುಪ್ರದೇಶ ಜಲಾವೃತಗೊಂಡಿದೆ. ನದಿಗಳು ಉಕ್ಕಿ ಹರಿಯುತ್ತಿದೆ.

ಕೆಲ ದಿನಗಳ ಬಳಿಕ ಮಳೆ ತೀವ್ರಗೊಡಿದ್ದು, ಜಿಲ್ಲೆಯ ಎಲ್ಲ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ. ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ.
ತೇಜಸ್ವಿನಿ ನದಿ ಉಕ್ಕಿ ಹರಿಯುತ್ತಿರುವುದರಿಂದ ನೀಲೇಶ್ವರ ನಗರಸಭೆಯ ಕಾರ್ಯಂಗೋಡು, ನಿಲಾಯಿ, ಪಾಲಯಿ ಹಾಗೂ ಇನ್ನಿತರ ಸ್ಥಳಗಳಿಗೆ ನೀರು ನುಗ್ಗಿದೆ. 15ರಷ್ಟು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.


 ಭೀಮನಡಿ ಕೊನ್ನಕ್ಕೊಡ್ ನಲ್ಲಿ ಭೂಕುಸಿತ ಉಂಟಾಗಿದೆ. ಮುತ್ತಾಡಿ ಕಾಲನಿಯ ಆರು ಮನೆಗಳನ್ನು ಸ್ಥಳಾಂತರಿಸಲಾಗಿದೆ.

ಚೈತ್ರ ವಾಹಿನಿ ಹೊಳೆ ಉಕ್ಕಿ ಹರಿಯುತ್ತಿದೆ. ಬಾಯಾರು ಮುಳಿಗದ್ದೆಯಲ್ಲಿ ಇಂದು ಮುಂಜಾನೆ ಭೂಕುಸಿತ ಸಂಭವಿಸಿದ್ದು, 15 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. 

ಉಪ್ಪಳ, ಕುಂಬಳೆ, ಕಾಸರಗೋಡು ತೀರದಲ್ಲಿ ಕಡಲ್ಕೊರೆತದ ಅಬ್ಬರ ತೀವ್ರಗೊಂಡಿದ್ದು, 25ಕ್ಕೂ ಅಧಿಕ ಮನೆಗಳು ಅಪಾಯದಲ್ಲಿದೆ. ಉಪ್ಪಳ ಮುಸೋಡಿಯಲ್ಲಿ ಕಾಂಕ್ರಿಟ್ ರಸ್ತೆ ಕೊಚ್ಚಿ ಹೋಗಿದೆ. ಹಲವು ಮನೆಗಳು ಅಪಾಯದಲ್ಲಿದೆ. ಪುತ್ತಿಗೆ ಅಂಗಡಿಮೊಗರು ಹೊಳೆಯು ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.
ಕಾಸರಗೋಡು ತೆರುವತ್ ಹೊನ್ನಮೂಳೆಯಲ್ಲಿ ಹದಿನಾರರಷ್ಟು ಮನೆಗಳಿಗೆ ನೀರು ನುಗ್ಗಿದೆ. ಹೊಳೆ ಬದಿಯ
 ತಳಂಗರೆ ಕೊಪ್ಪಲ್ ಪರಿಸರದಲ್ಲಿ 150ರಷ್ಟು ಮನೆಗಳು ದ್ವೀಪದಂತಿದೆ. ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಈ ಪ್ರದೇಶದ ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜಿಲ್ಲೆಯ ಹಲವು ಕಡೆ ರಸ್ತೆ ಕೊಚ್ಚಿ ಹೋಗಿದ್ದು, ಸಂಚಾರಕ್ಕೂ ಅಡ್ಡಿಯಾಗಿದೆ.
ಮಳೆ ಬಿರುಸುಗೊಳ್ಳುತ್ತಿರುವ ಹಿನ್ನಲೆಯಲ್ಲಿ ಭೂಕುಸಿತಕ್ಕೂ ಸಾಧ್ಯತೆ ಇದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News