ಕೊರೋನ ವಾರಿಯರ್ಸ್‌ಗೆ ದೇಶ ಚಿರಋಣಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್

Update: 2020-08-14 17:18 GMT

ಹೊಸದಿಲ್ಲಿ, ಆ. 14: ಕೊರೋನ ಪಿಡುಗನ್ನು ನಿಯಂತ್ರಿಸಲು ನೆರವು ನೀಡುತ್ತಿರುವ ಮುಂಚೂಣಿಯ ಕೊರೋನ ವಾರಿಯರ್ಸ್‌ಗೆ ದೇಶ ಚಿರಋಣಿಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ಹೇಳಿದ್ದಾರೆ.

ಕೊರೋನ ಪಿಡುಗಿನ ಕಾರಣದಿಂದ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮವನ್ನು ಮಿತಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ದೇಶದಲ್ಲಿ ಕೊರೋನ ಸೋಂಕಿನಿಂದ ಹಲವರು ಮೃತಪಟ್ಟಿದ್ದಾರೆ. ಆದುದರಿಂದ ಈ ವರ್ಷದ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮವನ್ನು ಮಿತಿಗೊಳಿಸಲಾಗಿದೆ ಎಂದು 74ನೇ ಸ್ವಾತಂತ್ರ ದಿನಾಚರಣೆಯ ಮುನ್ನಾ ದಿನವಾದ ಶುಕ್ರವಾರ ದೂರದರ್ಶನದಲ್ಲಿ ಪ್ರಸಾರವಾದ ಭಾಷಣದಲ್ಲಿ ಅವರು ಹೇಳಿದರು.

ಕೊರೋನ ಸಾಂಕ್ರಾಮಿಕ ರೋಗದ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ಸರಕಾರ ಸಾಕಷ್ಟು ಶ್ರಮಿಸಿದೆ. ಆದುದರಿಂದ ಕೊರೋನ ಸೋಂಕು ನಿಯಂತ್ರಣದಲ್ಲಿದೆ ಹಾಗೂ ಅಸಂಖ್ಯಾತ ಜನರನ್ನು ಸಾವಿನಿಂದ ಉಳಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ‘‘ಕೊರೋನ ಸೋಂಕಿನ ವಿರುದ್ಧ ಹೋರಾಡುವ ಮುಂಚೂಣಿಯ ವಾರಿಯರ್‌ಗಳಾದಎಲ್ಲ ವೈದ್ಯರು, ದಾದಿಯರು ಹಾಗೂ ಇತರ ಆರೋಗ್ಯ ಕಾರ್ಯಕರ್ತರಿಗೆ ದೇಶ ಚಿರಋಣಿಯಾಗಿದೆ’’ ಎಂದು ಅವರು ಹೇಳಿದರು.

‘‘ಈ ಎಲ್ಲಾ ವಾರಿಯರ್ಸ್‌ ತಮ್ಮ ಕರ್ತವ್ಯದ ಸಮಯ ಮಿತಿ ಲೆಕ್ಕಿಸದೆ ಕಾರ್ಯ ನಿರ್ವಹಿಸಿ ಜನರ ಜೀವ ಉಳಿಸಿದ್ದಾರೆ ಹಾಗೂ ಅವರಿಗೆ ಅಗತ್ಯದ ವಸ್ತುಗಳು ಲಭ್ಯವಾಗುವಂತೆ ಮಾಡಿದ್ದಾರೆ’’ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News