1 ರೂ. ದಂಡ ಪಾವತಿಸಿ, ಇಲ್ಲದಿದ್ದರೆ 3 ತಿಂಗಳು ಜೈಲು ಶಿಕ್ಷೆ ಅನುಭವಿಸಿ: ಸುಪ್ರೀಂ ಕೋರ್ಟ್ ತೀರ್ಪು

Update: 2020-08-31 15:23 GMT

ಹೊಸದಿಲ್ಲಿ, ಆ. 31: ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ 1 ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿ ಪ್ರಶಾಂತ್ ಭೂಷಣ್ ಅವರು ಸೆಪ್ಟಂಬರ್ 15ರ ಒಳಗೆ 1 ರೂಪಾಯಿ ದಂಡ ಪಾವತಿಸಬೇಕು. ಇಲ್ಲದಿದ್ದರೆ ಮೂರು ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು. ಅಲ್ಲದೆ ಮೂರು ವರ್ಷಗಳ ಕಾಲ ವಕೀಲ ವೃತ್ತಿಗೆ ನಿಷೇಧ ಹೇರಲಾಗುವುದು ಹೇಳಿತು. ಈ ಸಂದರ್ಭ ಪೀಠ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿತು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ಸುಪ್ರೀಂ ಕೋರ್ಟ್ ವಿರುದ್ಧ ಮಾಡಿದ ಟ್ವೀಟ್‌ನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ವಿಚಾರಣೆ ನಡೆಸಿತ್ತು. ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂದಿಸಿ ಪ್ರಶಾಂತ್ ಭೂಷಣ್ ಕ್ಷಮೆ ಕೋರುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ, ‘‘ಅಪ್ರಮಾಣಿಕವಾಗಿ ಕ್ಷಮೆ ಕೋರಿದರೆ, ನನ್ನ ಆತ್ಮಸಾಕ್ಷಿಗೆ ಮೋಸ ಮಾಡಿದಂತೆ ಆಗುತ್ತದೆ’’ ಎಂದು ಪ್ರಶಾಂತ್ ಭೂಷಣ್ ಹೇಳಿದ್ದರು.

ಆಗಸ್ಟ್ 14ರಂದು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ದೋಷಿ ಎಂದು ತೀರ್ಪು ನೀಡಿತ್ತು. ಅಲ್ಲದೆ, ಪ್ರಶಾಂತ್ ಭೂಷಣ್ ಅವರು ಮಾಡಿದ ಟ್ವೀಟ್‌ಗಳು ನ್ಯಾಯಾಂಗ ಕಾರ್ಯಾಚರಣೆಯ ಪಾರದರ್ಶಕ ವಿಮರ್ಶೆ ಅಲ್ಲ ಎಂದು ಹೇಳಿತ್ತು. ಆಗಸ್ಟ್ 25ರಂದು ಪ್ರಶಾಂತ್ ಭೂಷಣ್ ಪರ ವಾದ ಮಂಡಿಸಿದೆ ಹಿರಿಯ ವಕೀಲ ರಾಜೀವ್ ಧವನ್, ಸುಪ್ರೀಂ ಕೋರ್ಟ್ ನ್ಯಾಯಾಂಗ ಮುತ್ಸದ್ದಿತನ ತೋರಿಸಬೇಕು ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಶಿಕ್ಷಿಸುವ ಮೂಲಕ ಹುತಾತ್ಮರನ್ನಾಗಿ ಮಾಡಬಾರದು ಎಂದು ಹೇಳಿದ್ದರು.

ಕೊನೆಯ ವಿಚಾರಣೆ ವೇಳೆ ನ್ಯಾಯಮೂರ್ತಿ ಮಿಶ್ರಾ, ಪ್ರಶಾಂತ್ ಭೂಷಣ್ ಅವರು ಕ್ಷಮೆ ಕೋರುವುದಿಲ್ಲ ಯಾಕೆ ? ಕ್ಷಮೆ ಕೋರುವುದರಲ್ಲಿ ತಪ್ಪೇನಿದೆ ? ಎಂದು ಪ್ರಶ್ನಿಸಿತ್ತು. ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಭೂಷಣ್ ಅವರನ್ನು ಶಿಕ್ಷಿಸದಂತೆ ಹಾಗೂ ಮುಂದೆ ಈ ರೀತಿಯ ವರ್ತನೆ ಪುನಾರಾವರ್ತಿಸದಂತೆ ಎಚ್ಚರಿಕೆ ನೀಡುವಂತೆ ನ್ಯಾಯಾಲಯವನ್ನು ಆಗ್ರಹಿಸಿದ್ದರು. ‘ಅವಿಧೇಯತೆಯ ಹೇಳಿಕೆ’ಯನ್ನು ಮರು ಪರಿಶೀಲಿಸಲು ಹಾಗೂ ನ್ಯಾಯಾಂಗ ನಿಂದನೆಯ ಟ್ವೀಟ್‌ಗಳಿಗೆ ಬೇಷರತ್ ಕ್ಷಮೆ ಯಾಚಿಸಲು ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಅವರಿಗೆ ಸೋಮವಾರದ ವರೆಗೆ ಕಾಲಾವಕಾಶ ನೀಡಿತ್ತು.

‘ನನ್ನ ವಕೀಲ 1 ರೂ. ಕೊಡುಗೆ ನೀಡಿದರು’

“ನ್ಯಾಯಾಂಗ ನಿಂದನೆ ಕುರಿತಂತೆ ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಕೂಡಲೇ ನನ್ನ ವಕೀಲ ಹಾಗೂ ಹಿರಿಯ ಸಹೋದ್ಯೋಗಿ ರಾಜೀವ್ ಧವನ್ ಅವರು ನನಗೆ 1 ರೂಪಾಯಿ ಕೊಡುಗೆ ನೀಡಿದರು. ನಾನು ಅದನ್ನು ಸ್ವೀಕರಿಸಿದೆ” ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

1 ರೂಪಾಯಿ ರಾಷ್ಟ್ರೀಯ ಚಳವಳಿಯಾಗಲಿ: ಯೋಗೇಂದ್ರ ಯಾದವ್

ಪ್ರಶಾಂತ್ ಭೂಷಣ್ ಅವರಿಗೆ 1 ರೂಪಾಯಿ ದಂಡ ವಿಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸ್ವರಾಜ್ ಇಂಡಿಯಾ ವರಿಷ್ಠ ಯೋಗೇಂದ್ರ ಯಾದವ್, 1 ರೂಪಾಯಿ ರಾಷ್ಟ್ರೀಯ ಚಳವಳಿಯಾಗಲಿ ಎಂದಿದ್ದಾರೆ.

ಪ್ರಶಾಂತ್ ಭೂಷಣ್ ಅವರು ದಂಡ ಪಾವತಿಸುವುದಾದಲ್ಲಿ, ತಾನು 1 ರೂಪಾಯಿ ಕೊಡುಗೆಯಾಗಿ ನೀಡಲು ಸಿದ್ಧ ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ. ಪ್ರಕರಣದ ಅರ್ಹತೆ ಬಗ್ಗೆ ಪ್ರತಿಕ್ರಿಯಿಸದೆ, ನ್ಯಾಯಾಲಯ ಪ್ರಬುದ್ಧತೆ ತೋರಿಸಿದೆ. ಅವರನ್ನು ಕ್ಷಮಿಸಿದ್ದರೆ, ಚೆನ್ನಾಗಿತ್ತು. ನ್ಯಾಯಾಲಯ ಅವರಿಗೆ ಎಚ್ಚರಿಕೆ ನೀಡಬಹುದಿತ್ತು. ಆದರೆ, ಇದು ಕಾನೂನಿನಲ್ಲಿ ವಿವರಿಸಲಾದ ಕನಿಷ್ಠ ಪ್ರಮಾಣದ ಸಾಂಕೇತಿಕ ಶಿಕ್ಷೆಯಾಗಿದೆ. ನ್ಯಾಯಾಲಯ ಕಾನೂನಿನ ಘನತೆಯನ್ನು ತೋರಿಸಿದೆ ಎಂದು ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ಹೇಳಿದ್ದಾರೆ.

ಎನ್‌ಸಿಪಿ ನಾಯಕ ಮಜೀದ್ ಮೆಮನ್ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ನಮ್ಮ ನ್ಯಾಯಾಲಯದ ವೈಭವ ಹಾಗೂ ಪ್ರತಿಷ್ಠೆಯನ್ನು ಹೆಚ್ಚಿಸಲು ನಾವು ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಪ್ರಶಾಂತ್ ಭೂಷಣ್ ಅವರನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News