ಕೋವಿಡ್ ಜನಸಾಮಾನ್ಯರಿಗೆ ಹಲವಾರು ಪಾಠಗಳನ್ನು ಕಲಿಸಿಕೊಟ್ಟಿದೆ: ಡಾ.ಅಬ್ದುಲ್ ಹಕೀಮ್ ಅಲ್-ಅಝ್’ಹರಿ

Update: 2020-09-05 17:41 GMT

ಸೌದಿ ಅರೇಬಿಯಾ: ಕೋವಿಡ್ ವೈರಸ್ ಬಗ್ಗೆ ತಲೆಕೆಡಿಸಬೇಕಾದ ಆವಶ್ಯಕತೆ ಇಲ್ಲ. ಕೋವಿಡ್ ಜನಸಾಮಾನ್ಯರಿಗೆ ಹಲವಾರು ಪಾಠಗಳನ್ನು ಕಲಿಸಿಕೊಟ್ಟಿದೆ. ಪವಿತ್ರ ಇಸ್ಲಾಮಿನಲ್ಲಿ ಶುಚಿತ್ವಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಿದೆ. ಆದ್ದರಿಂದ ಎಲ್ಲಾ ಸಮಯದಲ್ಲೂ ಶುಚಿತ್ವ ವನ್ನು ಕಾಪಾಡಬೇಕು. ಆತ್ಮವಿಶ್ವಾಸ ಎಂದಿಗೂ ಕೈ ಬಿಡಬಾರದು ಎಂದು ಮುಖ್ಯ ಭಾಷಣಕಾರ ಮರ್ಕಝ್ ನಾಲೆಡ್ಜ್ ಸಿಟಿಯ ಡೈರೆಕ್ಟರ್ ಡಾ.ಅಬ್ದುಲ್ ಹಕೀಮ್ ಅಲ್-ಅಝ್’ಹರಿ ಹೇಳಿದರು

 ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್)ಇದರ ಅಂತರ್‌ರಾಷ್ಟ್ರೀಯ ಸಮಿತಿ ಸೆ.4ರಂದು ಆಯೋಜಿಸಿದ ಕೋವಿಡ್-19 ಸಮಯದಲ್ಲಿ ಹಾಗೂ ನಂತರದ ಜೀವನ ಎಂಬ ವಿಚಾರಗೋಷ್ಠಿಯ ಆನ್‌ಲೈನ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಕೋವಿಡ್‌ನಿಂದಾಗಿ ಸರಳವಾದ ಜೀವನ ಹೇಗೆ ನಡೆಸಬೇಕು ಎಂಬುದು ತಿಳಿದಿದೆ. ಪ್ರಮುಖವಾಗಿ ಒಂದು ಮದುವೆ ನಡೆಸಬೇಕಾದರೆ ಲಕ್ಷಗಟ್ಟಲೆ ಖರ್ಚು ಮಾಡುತ್ತಿದ್ದವರು ಈಗ ಕೇವಲ ಬೆರಳೆಣಿಕೆಯಷ್ಟು ಜನರನ್ನು ಮಾತ್ರ ಆಹ್ವಾನಿಸಿ ಬಹಳ ಸರಳವಾಗಿ ನಡೆಸುತ್ತಿದ್ದಾರೆ ಹೀಗೆ ಎಲ್ಲಾ ವಿಷಯದಲ್ಲೂ ಸರಳತೆ ಕಾಣಬಹುದಾಗಿದೆ. ಕೋವಿಡ್ ನಂತರವೂ ಇದೇ ರೀತಿ ಅನುಸರಿಸಿ ಇಸ್ಲಾಮ್ ಧರ್ಮ ಕಲಿಸಿಕೊಟ್ಟ ನೀತಿಗಳನ್ನು ಅನುಸರಿಸಬೇಕು ಎಂದವರು ಹೇಳಿದರು.

ಕೆಸಿಎಫ್ ಅಂತರ್‌ರಾಷ್ಟ್ರೀಯ ಸಾಂತ್ವನ ಇಲಾಖೆಯ ಅಧ್ಯಕ್ಷ ಅಲೀ ಮುಸ್ಲಿಯಾರ್ ಬಹರೈನ್ ದುಆದೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಅಡ್ಮಿನ್ ಇಲಾಖೆಯ ಕಾರ್ಯದರ್ಶಿ ಇಕ್ಬಾಲ್ ಬರ್ಕಾ ಒಮಾನ್ ಸ್ವಾಗತಿಸಿದರು. ಹಾಫಿಲ್ ದರ್’ವೇಷ್ ಬಹರೈನ್ ಕಿರಾಅತ್ ಪಾರಾಯಣ ನಡೆಸಿದರು. ಅಂತರ್‌ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಉದ್ಘಾಟಿಸಿದರು.

ಅಂತರ್‌ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ.ಶೇಖ್ ಬಾವ ಮಂಗಳೂರು, ಫೈನಾನ್ಶಿಯಲ್ ಕಂಟ್ರೋಲರ್ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಡಾ. ಅಬ್ದುರ್ರಶೀದ್ ಝೈನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರು ಹಾಗೂ ಸರಕಾರ ಸೂಚಿಸುವ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಲ್ಲಿ ಕೊರೋನ ಹರಡುವುದನ್ನು ತಡೆಗಟ್ಟಬಹುದು. ಆದ್ದರಿಂದ ಇದಕ್ಕಾಗಿ ಹೆದರಬೇಕಾದ ಅವಶ್ಯಕತೆ ಇಲ್ಲ ಎಂದರು.

ಎಸ್ಸೆಸ್ಸೆಫ್, ಎಸ್‌ವೈಎಸ್ ಹಾಗೂ ಕೆಸಿಎಫ್ ಸಂಘಟನೆಗಳು ಆತ್ಮೀಯ ಮಜ್ಲಿಸ್ ಗಳನ್ನು ನಡೆಸುವುದರೊಂದಿಗೆ ಸಂದರ್ಭಕ್ಕೆ ಸರಿಯಾಗಿ ಅಚ್ಚುಕಟ್ಟಾದ ರೀತಿಯಲ್ಲಿ ಸಾಂತ್ವನ ಕಾರ್ಯಗಳನ್ನೂ ನಡೆಸಿ ಸಮೂಹಕ್ಕೆ ಮಾದರಿಯಾಗುತ್ತಿದೆ ಅವರು ಹೇಳಿದರು.

ಅಂತರ್‌ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಅಧ್ಯಕ್ಷ ಅಬ್ದುಲ್ ಹಮೀದ್ ಈಶ್ವರಮಂಗಳ ಮಾತನಾಡಿ, ಕೋವಿಡ್ ವೈರಸ್‌ಗಿಂತಲೂ ಮಾರಕವಾಗಿದ್ದ ಸ್ಪಾನಿಷ್ ಜ್ವರ, ಇದು ಮಾತ್ರವಲ್ಲದೇ, ವಿಶ್ವ ಮಹಾಯುದ್ಧಗಳಿಂದ ಕೂಡ ವಿಶ್ವ ಹೊರಬಂದಿದೆ ಹೀಗಿರುವಾಗ ಖಂಡಿತವಾಗಿಯೂ ಕೊರೋನ ವೈರಸ್‌ನಿಂದಲೂ ಹೊರ ಬರಲಿದ್ದೇವೆ ಎಂದು ಧೈರ್ಯವನ್ನು ತುಂಬಿದರು.

ಕೋವಿಡ್ ಕಾಲದಲ್ಲಿ ಕೆಸಿಎಫ್ ಕಾರ್ಯಕರ್ತರು ನಡೆಸಿದ ಸಾಂತ್ವನ ಕಾರ್ಯಗಳನ್ನು ಮೆಚ್ಚಿದ ಅವರು ಕೆಸಿಎಫ್ ಕಾರ್ಯಕರ್ತರು ಕೋವಿಡ್ ಸಮಯದಲ್ಲಿ ನಿರಾಶ್ರಿತರ ನೆರವಿಗೆ ಧಾವಿಸಿದ್ದಾರೆ ಎಂಬ ಸಂತೋಷವನ್ನು ಹಂಚಿಕೊಂಡರು. 

ಇಕ್ಬಾಲ್ ಬರ್ಕಾ ಒಮಾನ್ ನಿರೂಪಿಸಿದರು. ರಹೀಮ್ ಸಅದಿ ಕತರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News