ಉಪ್ಪುಂದ ಉದ್ಯೋಗ ಖಾತ್ರಿ ಕೂಲಿಕಾರರ ಸಮಾವೇಶ
ಬೈಂದೂರು, ಸೆ.9: ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಸಮಾವೇಶ ಉಪ್ಪುಂದದ ಕಾಸನಾಡಿ ದೈವಸ್ಥಾನ ವಠಾರ ಹಾಗೂ ಉಪ್ಪುಂದ ಅಮ್ಮನರ್ ತೊಪ್ಲುನಲ್ಲಿ ಸೆ.9ರಂದು ಜರಗಿತು.
ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಸನಾಡಿ ಮತ್ತು ಅಮ್ಮನರ್ ತೊಪ್ಲು ಪ್ರದೇಶದ ಎರಡು ಕಾಯಕ ಸಂಘ ರಚಿಸಲಾಯಿತು. ಕ್ರಮವಾಗಿ ಜ್ಯೋತಿ ಜನಾರ್ದನ ಕುಂದರ್ ಮತ್ತು ಲಕ್ಷ್ಮಿ ರಾಮ ಖಾರ್ವಿ ಇವರನ್ನು ಕಾಯಕ ಬಂಧುಗಳನ್ನಾಗಿ ಆಯ್ಕೆ ಮಾಡಲಾಯಿತು.
ಮೀನುಗಾರರ ಸಂಘದ ಅಧ್ಯಕ್ಷ ಕೆ.ಶಂಕರ್, ಮೀನುಗಾರರ ಸಂಘಟನೆ ಉದ್ದೇಶ, ಕಾರ್ಯಕ್ರಮದ ಕುರಿತು ಹಾಗೂ ಸಂಘಟನೆಯ ಅವಶ್ಯಕತೆ ಬಗ್ಗೆ ವಿವರಿಸಿದರು. ಉಪ್ಪುಂದ ಕಾಸನಾಡಿಯಲ್ಲಿ ಸೆ.17ರಂದು ಮೀನುಗಾರರ ಮತ್ತು ಮೀನು ಕಾರ್ಮಿಕರ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಕಾರ್ಮಿಕ ಮುಖಂಡರಾದ ಮಾಧವ ದೇವಾಡಿಗ ಉಪ್ಪುಂದ, ಮಾಧವ ಪೂಜಾರಿ, ಶ್ರೀಧರ್ ಅಮ್ಮನರ್ ತೊಪ್ಲು, ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಬೈಂದೂರು ಅಧ್ಯಕ್ಷ ಬಾಬು ಕೆ.ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಕಾಯಕ ಬಂಧು ಜ್ಯೋತಿ ಜನಾರ್ದನ ಕುಂದರ್ ವಂದಿಸಿದರು.