ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಕಡಿವಾಣ ಹಾಕಿ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಬಹುತೇಕ ಸುದ್ದಿ ಚಾನಲ್ಗಳು ಟಿಆರ್ಪಿಗಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಇದು ಸುದ್ದಿಗಳ ಅತಿರಂಜನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲೆ ಕಡಿವಾಣ ಹಾಕುವ ಅಗತ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಆದರೆ ಕೇಂದ್ರ ಸರ್ಕಾರ ಪತ್ರಿಕಾ ಸ್ವಾತಂತ್ರ್ಯದ ಪರವಾಗಿ ವಾದ ಮಂಡಿಸಿ, ಪತ್ರಿಕೋದ್ಯಮದ ನಿಯಂತ್ರಣ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪ್ರತಿಪಾದಿಸಿದೆ.
ಮಾಧ್ಯಮ ಸೆನ್ಸಾರ್ಶಿಪ್ಗೆ ನಾವು ಸಲಹೆ ಮಾಡುತ್ತಿಲ್ಲ; ಆದರೆ ಮಾಧ್ಯಮ ಕ್ಷೇತ್ರಕ್ಕೆ ಒಂದಷ್ಟು ಸ್ವಯಂ ನಿಯಂತ್ರಣ ಅಗತ್ಯ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
"ಇಂಟರ್ನೆಟ್ ನಿಯಂತ್ರಣ ಕಷ್ಟಸಾಧ್ಯ. ಆದರೆ ಈಗ ನಾವು ಎಲೆಕ್ಟ್ರಾನಿಕ್ ಮಾಧ್ಯಮವನ್ನು ನಿಯಂತ್ರಿಸುವ ಅಗತ್ಯವಿದೆ" ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಸುದರ್ಶನ ಟಿವಿಯ ’ಬಿಂದಾಸ್ ಬಾಲ್’ ಕಾರ್ಯಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕೆಲ ಬಗೆಯ ಸ್ವಯಂ ನಿಯಂತ್ರಣ ಮಾಧ್ಯಮಗಳಿಗೆ ಅಗತ್ಯ ಎಂದು ಕೋರ್ಟ್ ಹೇಳಿದಾಗ, ಪತ್ರಕರ್ತರ ಸ್ವಾತಂತ್ರ್ಯ ಎಲ್ಲಕ್ಕಿಂತ ಮುಖ್ಯ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.