ದ.ಕ. ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೊರೋನ ಚಿಕಿತ್ಸೆ : ಸಚಿವ ಕೋಟ

Update: 2020-09-16 12:44 GMT

ಮಂಗಳೂರು, ಸೆ. 16 : ದ.ಕ. ಜಿಲ್ಲೆಯಲ್ಲಿ ಕೊರೋನಕ್ಕೆ ಎಲ್ಲಾ ಆಸ್ಪತ್ರೆಗಳಲ್ಲಿಯೂ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ಸಿಗುವಂತಾಗಲು ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಯೋಜನೆಗೆ ಕಡ್ಡಾಯವಾಗಿ ಎರಡು ವಾರದೊಳಗೆ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದರೆ, ಅಂತಹ ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತದ ವತಿಯಿಂದ ಕೋವಿಡ್ 19, ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ವಿಚಾರದ ಕುರಿತಂತೆ ಮಂಗಳೂರು ಪುರಭವನದಲ್ಲಿ ಬುಧವಾರ ನಡೆದ ವಿಶೇಷ ಜನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯಲ್ಲಿ ಒಟ್ಟು 95 ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, 32 ಆಸ್ಪತ್ರೆಗಳು ಇತರ ರೋಗಗಳಿಗೆ ಅನ್ವಯವಾಗುವಂತೆ ಆುುಷ್ಮಾನ್ ಯೋಜನೆ ನೋಂದಣಿ ಮಾಡಿದೆ. ಆದರೆ, ಕೊರೋನ ಚಿಕಿತ್ಸೆಗಾಗಿ 8 ಮೆಡಿಕಲ್ ಕಾಲೇಜು ಆಸ್ಪತ್ರೆ ಸೇರಿದಂತೆ ಇಟ್ಟು 12 ಆಸ್ಪತ್ರೆಗಳು ಮಾತ್ರ ನೋಂದಣಿ ಮಾಡಿವೆ. ಉಳಿದ 12 ಆಸ್ಪತ್ರೆಗಳು ನೋಂದಣಿ ಪ್ರಕ್ರಿಯೆ ನಡೆಸುತ್ತಿದೆ. ಆದರೆ, ಮುಂದಿನ ಎರಡು ವಾರ ದೊಳಗೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ಕೂಡ ಕೊರೋನ ಚಿಕಿತ್ಸೆಯ ಕಾರಣಕ್ಕಾಗಿ ಆಯುಷ್ಮಾನ್‌ಗೆ ಸೀಮಿತಗೊಳಿಸಿ ನೋಂದಣಿ ಕಡ್ಡಾಯವಾಗಿ ಮಾಡಬೇಕು. ಕೊರೊನಾ ಕಾರಣದಿಂದ ಚಿಕಿತ್ಸೆ ನೀಡುವ ಆಸ್ಪತ್ರೆಯವರು ದುಬಾರಿ ಮೊತ್ತ ಪಡೆಯುತ್ತಿದ್ದಾರೆ ಎಂಬ ಆರೋಪವಿದೆ. ಇದು ನಿಜವಾಗಿದ್ದರೆ ತನಿಖೆ ನಡೆಸಿ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕರೋನ ಚಿಕಿತ್ಸೆ ಪಡೆಯುವ ರೋಗಿಗಳನ್ನು ಸಂಬಂಧಪಟ್ಟ ಆ್ಯಂಬುಲೆನ್ಸ್‌ನ ಚಾಲಕರು ಕಡ್ಡಾಯವಾಗಿ ಆಯುಷ್ಮಾನ್ ಯೋಜನೆ ಇರುವ ಆಸ್ಪತ್ರೆಯಲ್ಲಿಯೇ ದಾಖಲು ಮಾಡಬೇಕು. ಎಲ್ಲಾ ಆಸ್ಪತ್ರೆಗಳಲ್ಲಿಯೂ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ಕಡ್ಡಾಯವಾಗಿ ಜನರ ಕರೆ ಸ್ವೀಕರಿಸಿ ಸೂಕ್ತ ವ್ಯವಸ್ಥೆ ಜನರಿಗೆ ಮಾಡಬೇಕು. ಇಲ್ಲವಾದರೆ ಅಂತವರಿಗೆ ನೋಟೀಸ್ ಜಾರಿಗೊಳಿಸಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಡಿ.ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ವೈ.ಭರತ್ ಶೆಟ್ಟಿ, ಮೇಯರ್ ದಿವಾಕರ್ ಪಾಂಡೇಶ್ವರ, ಉಪಮೇಯರ್ ವೇದಾವತಿ, ಜಿ.ಪಂ., ಸಿಇಓ ಆರ್.ಸೆಲ್ವಮಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವೆನ್ಲಾಕ್ ಅಧೀಕ್ಷಕ ಡಾ.ಸದಾಶಿವ ಎಸ್., ಡಿಸಿಪಿ ಅರುಣ್, ಮನಪಾ ಉಪ ಆಯುಕ್ತ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಆಯುಷ್ಮಾನ್ ಕಾರ್ಡ್ ಬಗ್ಗೆ ಡಾ.ರತ್ನಾಕರ್ ಹಾಗೂ ಜಿಲ್ಲೆಯ ಕೊರೋನ ವಿವರದ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಮಾಹಿತಿ ನೀಡಿದರು.

ಸಾವಿನ ಸಂಖ್ಯೆ ಮಂಗಳೂರಿನಲ್ಲಿ ಗರಿಷ್ಠ: ಜಿಲ್ಲಾಧಿಕಾರಿ

ದ.ಕ. ಜಿಲ್ಲೆಯಲ್ಲಿ ಕೊರೋನ ಸೇರಿದಂತೆ ಇತರ ರೋಗಗಳಿಗೆ ಬಲಿಯಾದವರು ಒಟ್ಟು 450ರಲ್ಲಿ ಶೇ.95ರಷ್ಟು ಜನರು ಮಂಗಳೂರು ಪಾಲಿಕೆ ವ್ಯಾಪ್ತಿಯವರು. ಹೀಗಾಗಿ ಪಾಲಿಕೆಯ ಎಲ್ಲಾ 60 ವಾರ್ಡ್‌ಗಳಲ್ಲಿ ಟಾಸ್ಕ್‌ ಪೋರ್ಸ್ ತಂಡ ರಚಿಸಲಾಗಿದ್ದು, ಅವರು ಇನ್ನಷ್ಟು ಪರಿಣಾಮಕಾರಿ ಯಾಗಿ ಕರ್ತವ್ಯ ನಿರ್ವಹಿಸಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 30 ಮೊಬೈಲ್ ಟೀಮ್ ರಚಿಸಲಾಗಿದ್ದು ಅವರು ಜನರಿರುವ ಬಳಿಗೆ ಹೋಗಿ ಜ್ವರ ತಪಾಸಣೆ ನಡೆಸುತ್ತಾರೆ. - ಡಾ. ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

ಆಯುಷ್ಮಾನ್ ಜನರಲ್ ವಾರ್ಡ್‌ಗೆ ಮಾತ್ರ ಸೀಮಿತ

ಆಯುಷ್ಮಾನ್ ಕಾರ್ಡ್ ಇರುವವರು ಖಾಸಗಿ ಆಸ್ಪತ್ರೆಯಲ್ಲಿ ಜನರಲ್ ವಾರ್ಡ್‌ನಲ್ಲಿ ಇದ್ದರೆ ಮಾತ್ರ ಇದರ ಪ್ರಯೋಜನ ಸಿಗಲಿದೆ. ಆಯುಷ್ಮಾನ್ ಕಾರ್ಡ್ ಇಲ್ಲದಿದ್ದರೂ, ವ್ಯಕ್ತಿಯ ಹೆಸರಿರುವ ರೇಶನ್ ಕಾರ್ಡ್, ಆಧಾರ್ ಕಾರ್ಡ್ ಮಾತ್ರ ಆಸ್ಪತ್ರೆಗೆ ಒದಗಿಸಿದರೂ ಸಾಕಾಗುತ್ತದೆ. ಆಸ್ಪತ್ರೆಗೆ ಬಂದು ರೋಗಿಯು 24 ಗಂಟೆಯೊಳಗೆ ಮೃತಪಟ್ಟರೆ ಆಯುಷ್ಮಾನ್ ಕಾರ್ಡ್ ಅನ್ವಯವಾಗುವುದಿಲ್ಲ. ಆಯುಷ್ಮಾನ್ ನೋಂದಣಿ ಹೊಂದಿದ ಆಸ್ಪತ್ರೆಯಲ್ಲಿ ಕೊರೋನ ಚಿಕಿತ್ಸೆ ಪಡೆಯಲು ರೆಫರಲ್ ಅನ್ನು ಜಿಲ್ಲಾ ವೈದ್ಯಾಧಿಕಾರಿ, ಆಯುಷ್ಮಾನ್ ಅಧಿಕಾರಿ ನೀಡುತ್ತಾರೆ.

ಡಾ. ರತ್ನಾಕರ್, ನೋಡಲ್ ಅಧಿಕಾರಿ, ಆಯುಷ್ಮಾನ್, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News