ಉಡುಪಿ: ಲಾಟರಿ ಗೆದ್ದ ಸಂದೇಶ ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ !

Update: 2020-09-17 15:51 GMT

ಉಡುಪಿ, ಸೆ.17: ಲಾಟರಿ ಹಣ ಗೆದ್ದಿರುವ ಮೊಬೈಲ್ ಸಂದೇಶವನ್ನು ನಂಬಿ ಯುವಕನೋರ್ವ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಬೆಳ್ಮಣ್‌ನಲ್ಲಿ ನಡೆದಿದೆ.

ಬೆಳ್ಮಣ್ ಪುನಾರ್ ನಿವಾಸಿ ಸುರೇಶ್ ಪ್ರಭು ಎಂಬವರ ಮಗ ಸುಜಿತ್ ಪ್ರಭು (19) ಎಂಬವರ ಮೊಬೈಲ್‌ಗೆ ಸೆ.4ರಂದು 12,18,095ರೂ. ಲಾಟರಿ ಗೆದ್ದಿರುವುದಾಗಿ ಸಂದೇಶ ಬಂದಿದ್ದು, ತದನಂತರ ವ್ಯಕ್ತಿಯೊಬ್ಬ ಕರೆ ಮಾಡಿ, ಲಾಟರಿಯಲ್ಲಿ ಗೆದ್ದ 17,400 ಡಾಲರ್ ಹಣ ವನ್ನು ರೂಪಾಯಿಗೆ ವರ್ಗಾವಣೆ ಮಾಡಲು 6,500ರೂ. ಪಾವತಿಸಬೇಕು ಎಂದು ನಂಬಿಸಿದ್ದ ಎನ್ನಲಾಗಿದೆ.

ಅದರಂತೆ ಸುಜಿತ್ ಪ್ರಭು ಹಣವನ್ನು ಅವರ ಖಾತೆಗೆ ಹಾಕಿದ್ದನು. ನಂತರ ಮತ್ತೊಬ್ಬ ಕರೆ ಮಾಡಿ ಬೇರೆ ಬೇರೆ ಖಾತೆಯ ನಂಬ್ರಗಳನ್ನು ನೀಡಿ ಆ ಖಾತೆಗಳಿಗೆ ಹಣ ಡಿಪಾಸಿಟ್ ಮಾಡುವಂತೆ ತಿಳಿಸಿದ್ದು, ಹೀಗೆ ಸುಜಿತ್ ಒಟ್ಟು 2,05,500ರೂ. ಹಣವನ್ನು ಡಿಪಾಸಿಟ್ ಮಾಡಿ ವಂಚನೆಗೆ ಒಳಗಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News