ಪುತ್ತೂರು: ಪ್ರಬಲ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ವಿಹಿಂಪ ಆಗ್ರಹ

Update: 2020-09-22 07:38 GMT

ಪುತ್ತೂರು, ಸೆ.22: ಅಕ್ರಮ ಕಸಾಯಿಖಾನೆ ಹಾಗೂ ಗೋ ಅಪರಾಧವನ್ನು ಸಮರ್ಪಕವಾಗಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಗೋ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತಹ ಪ್ರಬಲ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರಕಾರ ಜಾರಿಗೆ ತರಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಅಧಿವೇಶನದಲ್ಲಿ ಈ ಕಾಯ್ದೆ ಮಂಡಿಸಿ ಜಾರಿಗೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖ್ ಸರಪಾಡಿ ಅಶೋಕ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

ಅಕ್ರಮ ಗೋಸಾಟ, ಗೋಕಳ್ಳತನ, ಗೋವಧೆ ಮಾಡುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೂ ದುರ್ಬಲ ಕಾಯ್ದೆಯ ಕಾರಣದಿಂದಾಗಿ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಗೋವಧೆ ಮಾಡಿದವರಿಗೆ ಹಾಲಿ ಕಾನೂನಿನಲ್ಲಿ 6 ತಿಂಗಳ ಶಿಕ್ಷೆ ಮತ್ತು ರೂ. 1 ಸಾವಿರ ದಂಡ ವಿಧಿಸಲು ಮಾತ್ರ ಅವಕಾಶವಿದೆ. ಆದ ಕಾರಣದಿಂದಲೇ ನಿರಂತರವಾಗಿ ಗೋಕಳ್ಳ ಸಾಗಾಟ, ಗೋ ಹತ್ಯಾ ಪ್ರಕರಣಗಳು ನಡೆಯುತ್ತಿವೆ ಎಂದವರು ಹೇಳಿದರು. ರಾಜ್ಯದಲ್ಲಿ ಗೋಸೇವಾ ಆಯೋಗವನ್ನು ಸ್ಥಾಪಿಸುವ ಮೂಲಕ ಪ್ರಬಲ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸರಕಾರವನ್ನು ಪ್ರಬಲವಾಗಿ ಆಗ್ರಹಿಸುತ್ತದೆ ಎಂದ ಅವರು, ಗೋ ಹಂತಕರಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 5ಲಕ್ಷ ದಂಡ ವಿಧಿಸಬೇಕು. ಅಕ್ರಮ ಗೋಸಾಗಾಟಗಾರರಿಗೆ 7 ವರ್ಷ ಕಠಿಣ ಸಜೆ ಹಾಗೂ ಸಾಗಾಟ ವಾಹನವನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಬೇಕು. ಅಪರಾಧಿ ಚಾಲಕನ ಚಾಲನಾ ಪರವಾನಿಗೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಸತೀಶ್, ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News