ಮೋದಿ ಪ್ರಶಂಸಿಸಿದ ಕೇಶ ವಿನ್ಯಾಸಗಾರನ ವಿರುದ್ಧ ವಂಚನೆ ಪ್ರಕರಣ ದಾಖಲು
Update: 2020-09-25 16:56 GMT
ಚೆನ್ನೈ, ಸೆ. 25: ಕೊರೋನ ಸೋಂಕು ನಿಯಂತ್ರಿಸಲು ಘೋಷಿಸಲಾದ ಲಾಕ್ಡೌನ್ ಸಂದರ್ಭ ಬಡವರಿಗೆ ಆಹಾರ ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ನಲ್ಲಿ ಪ್ರಶಂಸೆಗೆ ಒಳಗಾಗಿದ್ದ ಮಧುರೈ ಮೂಲದ ಕೇಶ ವಿನ್ಯಾಸಗಾರನ ವಿರುದ್ಧ ರಾಜ್ಯ ಪೊಲೀಸರು ಮಿತಿ ಮೀರಿದ ಬಡ್ಡಿ ವಸೂಲಿ ಹಾಗೂ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಎಂ. ಗೆಂಗೈರಾಜನ್ ದೂರು ದಾಖಲಿಸಿದ ಬಳಿಕ ಕೇಶ ವಿನ್ಯಾಸಗಾರ ಸಿ. ಮೋಹನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಗರದ ಅಣ್ಣಾ ನಗರ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. 2016ರ ಡಿಸೆಂಬರ್ನಲ್ಲಿ ಮೋಹನ್ನಿಂದ ಪಡೆದ 30 ಸಾವಿರ ರೂಪಾಯಿ ಸಾಲಕ್ಕೆ ಒಟ್ಟು 48 ಸಾವಿರ ರೂಪಾಯಿ ಪಾವತಿಸಿದ್ದೇನೆ ಎಂದು ಗೆಂಗೈರಾಜನ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಈಗ ಮೋಹನ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.