ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾಗೆ ಪ್ಲಾಸ್ಮಾ ಚಿಕಿತ್ಸೆ
ಹೊಸದಿಲ್ಲಿ: ಕೊರೋನ ವೈರಸ್ ಸೋಂಕು ತಗಲಿ ಆಸ್ಪತ್ರೆಗೆ ದಾಖಲಾಗಿರುವ ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸ್ಸೆಗೆ ಒಳಗಾದರು.
ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದಾಗಿ ಬುಧವಾರ ಸರಕಾರಿ ಸ್ವಾಮ್ಯದ ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ಅವರಿಗೆ ಬಿಳಿ ರಕ್ತ ಕಣಗಳ ಕೊರತೆ ಇರುವುದಾಗಿ ತಿಳಿಸಿದ್ದರು. ಮರುದಿನ ಗುರುವಾರ ಆಸ್ಪತ್ರೆಯ ಅಧಿಕಾರಿಗಳು ಸಿಸೋಡಿಯಾ ಅವರಿಗೆ ಡೆಂಗಿ ಇರುವುದು ಕೂಡ ಪರೀಕ್ಷೆಯಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದ್ದರು
ದಿಲ್ಲಿ ಸರಕಾರದ ಇತರ ಮಂತ್ರಿಗಳೊಂದಿಗೆ ವೈರಸ್ ವಿರುದ್ಧದ ಹೋರಾಟದಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಿಸೋಡಿಯಾಗೆ ಸೆಪ್ಟಂಬರ್ 14 ರಂದು ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಕೋವಿಡ್ ದೃಢಪಟ್ಟ ಬಳಿಕ ಮನೆಯಲ್ಲಿ ಪ್ರತ್ಯೇಕವಾಗಿದ್ದ ಅವರು ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಬಳಿಕ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಾಗಿದ್ದರು.