ಕಾಶಿ-ಮಥುರಾ: ಮತ್ತೆ ಮಂದಿರ ರಾಜಕಾರಣವೇ?

Update: 2020-09-26 09:12 GMT

ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಕಾರ್ಯ ನಡೆಯುತ್ತಿದ್ದಾಗ ನಾಯಕರು ಕೂಗುತ್ತಿದ್ದ ಘೋಷಣೆ ‘‘ಯೇ ತೋ ಕೇವಲ್ ಜಾಹ್‌ಂ ಕೀ ಹೈ, ಕಾಶಿ, ಮಥುರಾ ಬಾಕಿ ಹೈ’’ (ಇದು ಕೇವಲ ಆರಂಭ, ಮುಂದೆ ಇದೆ ಕಾಶಿ ಮಥುರಾ) ಸುಪ್ರೀಂ ಕೋರ್ಟ್ ಆ ಕಟ್ಟಡವನ್ನು ಧ್ವಂಸಗೊಳಿಸಿದವರಿಗೆ ಅದೇ ಜಾಗವನ್ನು ನೀಡಿತಾದರೂ ಅವರ ಕೃತ್ಯ ಒಂದು ಅಪರಾಧವೆಂದು ಹೇಳಿತ್ತು. ರಾಮಮಂದಿರವನ್ನು ರಾಜಕೀಯ ಉದ್ದೇಶಕ್ಕಾಗಿ, ಚುನಾವಣಾ ಉದ್ದೇಶಕ್ಕಾಗಿ ಹಾಗೂ ಧಾರ್ಮಿಕ ನೆಲೆಯಲ್ಲಿ ಸಮಾಜವನ್ನು ಒಡೆಯುವುದಕ್ಕಾಗಿ ಬಳಸಿಕೊಳ್ಳಲಾಯಿತು.

ಧಾರ್ಮಿಕ ರಾಷ್ಟ್ರೀಯತೆಯ ಈ ಮೈಲಿಗಲ್ಲನ್ನು ಸಾಧಿಸಿದ ಬಳಿಕ ಮುಂದೇನು? ಈಗಾಗಲೇ ಸಮಾಜವನ್ನು ವಿಭಜಿಸುವ, ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಕಸರೆಂದು ಬಿಂಬಿಸುವ ಹಲವಾರು ಪ್ರಶ್ನೆಗಳಿವೆ, ವಿಷಯಗಳಿವೆ. ಇವುಗಳಲ್ಲಿ ಲವ್ ಜಿಹಾದ್, (ಜಮೀನು ಜಿಹಾದ್, ಕೊರೋನ ಜಿಹಾದ್, ನಾಗರಿಕ ಸೇವೆ ಜಿಹಾದ್ ಇತ್ಯಾದಿ ಹೊಸ ಜಿಹಾದ್‌ಗಳೂ ಸೇರಿದಂತೆ) ಪವಿತ್ರ ಹಸು, ಸಮಾನ ನಾಗರಿಕ ಸಂಹಿತೆ ಇತ್ಯಾದಿಗಳಿವೆ.

ಕಾಶಿ ಮತ್ತು ಮಥುರಾ ಈಗಾಗಲೇ ಇರುವ ಹಲವಾರು ವಿವಾದಗಳಿಗೆ ಇನ್ನಷ್ಟು ತೀವ್ರತೆಯನ್ನು ನೀಡುವ ಪ್ರಶ್ನೆಗಳಾಗಿವೆ. ಕಾಶಿಯಲ್ಲಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿ ಗ್ಯಾನ್ ವಾಪ್ಸಿ ಮಸೀದಿ ಇದೆ. ಇದು ಅಕ್ಬರನ ಕಾಲದ್ದು ಎಂದು ಕೆಲವರು ಮತ್ತು ಔರಂಗಜೇಬನ ಕಾಲದ್ದು ಎಂದು ಇನ್ನೂ ಕೆಲವರು ಹೇಳುತ್ತಾರೆ. ಮಥುರಾದಲ್ಲಿ ಶಾಹಿ ಈದ್ಗಾ ಮಸೀದಿ, ಕೃಷ್ಣ ಜನ್ಮಭೂಮಿ ದೇವಾಲಯದ ಪಕ್ಕದಲ್ಲೇ ಇದೆ.

ಭಾರತದ ಮೇಲೆ ದಾಳಿ ಮಾಡಿದ ಮುಸ್ಲಿಂ ದೊರೆಗಳು ಹಲವಾರು ದೇವಾಲಯಗಳನ್ನು ನಾಶ ಮಾಡಿದ್ದಾರೆ; ಇವುಗಳಲ್ಲಿ ಕನಿಷ್ಠ ಮೂರನ್ನಾದರೂ ಮರಳಿ ಪಡೆಯಬೇಕೆನ್ನುವುದು ಹಿಂದೂ ರಾಷ್ಟ್ರೀಯವಾದಿಗಳು ಈಗ ಜನಪ್ರಿಯಗೊಳಿಸುತ್ತಿರುವ ಕಥಾನಕ. ಅಲ್ಲದೆ ದಿಲ್ಲಿಯ ಜಾಮಾ ಮಸೀದಿ ಹಾಗೂ ಅಹಮದಾಬಾದ್‌ನಲ್ಲಿರುವ ಜುಮಾ ಮಸೀದಿ ಕೂಡ ಹಿಂದೂ ಪೂಜಾ ಸ್ಥಳಗಳಲ್ಲಿ ನಿರ್ಮಿಸಿದವುಗಳೆಂಬ ವಾದಗಳು ಕೂಡ ಕೇಳಿಬಂದಿವೆ. ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದ ಹಲವು ವಿದ್ವಾಂಸರು ದೇವಾಲಯಗಳ ನಾಶಗಳ ಬಗ್ಗೆ ಬರೆದಿದ್ದಾರೆ. ರಾಜಕೀಯ ಪ್ರತಿಸ್ಪರ್ಧೆ, ಆಡಳಿತದ ಸ್ಥಾಪನೆ ಹಾಗೂ ಸಂಪತ್ತಿಗಾಗಿ ದೇವಾಲಯಗಳನ್ನು ನಾಶ ಮಾಡಲಾಗಿದೆ. ಮುಸ್ಲಿಂ ದೊರೆಗಳು ದೇವಾಲಯಗಳನ್ನು ನಾಶ ಮಾಡುವುದರ ಜೊತೆಗೆ ಅವರಲ್ಲಿ ಹಲವರು ಹಿಂದೂ ದೇವಾಲಯಗಳಿಗೆ ಉದಾರವಾಗಿ ದೇಣಿಗೆಯನ್ನೂ ನೀಡಿದ್ದಾರೆ. ಹತ್ತಾರು ದೇವಾಲಯಗಳಿಗೆ ಔರಂಗಜೇಬ್ ಹೀಗೆ ದೇಣಿಗೆ ನೀಡಿರುವುದನ್ನು ಅವನ ಫರ್ಮಾನು ಗಳು ಹೇಳುತ್ತವೆ. ಉದಾಹರಣೆಗೆ, ಗುವಾಹಟಿಯ ಕಾಮಾಖ್ಯ ದೇವಿ ದೇವಾಲಯ, ಉಜ್ಜಯಿನಿಯ ಮಹಾಕಾಲ್ ಮತ್ತು ಬೃಂದಾವನದ ಕೃಷ್ಣ ದೇವಾಲಯ. ಸ್ಥಳೀಯ ದೊರೆ ಸತತ ಮೂರು ವರ್ಷಗಳ ಕಾಲ ತನಗೆ ಕಪ್ಪಕಾಣಿಕೆ ನೀಡಲಿಲ್ಲವೆಂಬ ಕಾರಣಕ್ಕಾಗಿ ಔರಂಗಜೇಬ್ ಗೋಲ್ಕೊಂಡದಲ್ಲಿ ಒಂದು ಮಸೀದಿಯನ್ನು ಕೂಡ ನಾಶ ಮಾಡಿದ್ದ.

ಹನ್ನೊಂದನೇ ಶತಮಾನದಲ್ಲಿ ಕಾಶ್ಮೀರದ ದೊರೆ ರಾಜಾ ಹರ್ಷದೇವ ತನ್ನ ರಾಜ್ಯದಲ್ಲಿ ದೇವಾಲಯಗಳಲ್ಲಿ ದೇವರ ಮೂರ್ತಿಗಳಲ್ಲಿರುವ ಚಿನ್ನ, ಬೆಳ್ಳಿ ಹಾಗೂ ವಜ್ರ ವೈಢೂರ್ಯಗಳನ್ನು ಕಿತ್ತು ತೆಗೆದು ರಾಜ ಭಂಡಾರಕ್ಕೆ ಸಲ್ಲಿಸುವುದಕ್ಕಾಗಿ ದೇವೋತ್ಪಾಟನ ನಾಯಕನೆಂಬ ಓರ್ವ ವಿಶೇಷ ಅಧಿಕಾರಿಯನ್ನು ನೇಮಿಸಿದ್ದ ಎಂದು ಡಿ.ಡಿ. ಕೊಸಾಂಬಿ ಬರೆದಿದ್ದಾರೆ. ಹಿಂದೂ ದೊರೆಗಳು ಯುದ್ಧದಲ್ಲಿ ತಮ್ಮಿಂದ ಪರಾಜಿತರಾದ ರಾಜರ ಕುಲದೇವತಾ ದೇವಸ್ಥಾನವನ್ನು ತಮ್ಮದೇ ಕುಲದೇವರ ದೇವಾಲಯವನ್ನು ನಿರ್ಮಿಸುವುದಕ್ಕಾಗಿ ನಾಶ ಮಾಡಿದ ವಿಷಯದ ಬಗ್ಗೆ ರಿಚರ್ಡ್ ಈಟನ್ ಬರೆದಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮರಾಠಾ ಸೇನೆಗಳು ಹಿಂದೂ ದೇವಾಲಯವನ್ನು ನಾಶ ಮಾಡಿದ್ದವು. ಟಿಪ್ಪುಸುಲ್ತಾನ ಅದನ್ನು ದುರಸ್ತಿ ಮಾಡಿದ್ದ. ಆದರೆ ದೇವಾಲಯ ನಾಶವು ಭಾರತದಲ್ಲಿ ವಿಭಾಜಕ ರಾಜಕಾರಣಕ್ಕೆ ಒಂದು ದೊಡ್ಡ ಕಾರಣವಾಗುವಂತೆ ಕೋಮುವಾದ ಇತಿಹಾಸವು ಬರೆಯಲ್ಪಡುತ್ತಿದೆ.

ನಾವು ಇತಿಹಾಸದಲ್ಲಿ ಇನ್ನಷ್ಟು ಹಿಂದಕ್ಕೆ ಹೋದರೆ ಬೌದ್ಧ ಧರ್ಮ ಮತ್ತು ವೈದಿಕ ಶಾಹಿಯ ನಡುವಿನ ಸಂಘರ್ಷವು ಸಾವಿರಾರು ಬುದ್ಧ ವಿಹಾರಗಳ ನಾಶಕ್ಕೆ ಕಾರಣವಾಗಿರುವುದನ್ನು ಕಾಣುತ್ತೇವೆ. ಇತ್ತೀಚೆಗೆ ರಾಮಮಂದಿರ ನಿರ್ಮಾಣಕ್ಕಾಗಿ ನೆಲವನ್ನು ಸಮತಟ್ಟುಗೊಳಿಸುವಾಗ ಬುದ್ಧ ವಿಹಾರದ ಹಲವಾರು ಅವಶೇಷಗಳು ದೊರಕಿದವು. ಹಿಂದೂ ಧರ್ಮದ ಪುನರುಜ್ಜೀವನದ ಹೆಸರಿನಲ್ಲಿ ಭಾರತದಲ್ಲಿ ಕ್ರಿ.ಶ. 830 ಮತ್ತು ಕ್ರಿ.ಶ. 966 ನಡುವೆ ನೂರಾರು ಬುದ್ಧನ ಪ್ರತಿಮೆಗಳು, ಸ್ತೂಪಗಳು ಹಾಗೂ ವಿಹಾರಗಳನ್ನು ನಾಶ ಮಾಡಲಾಯಿತೆಂದು ಇತಿಹಾಸಕಾರ ಡಾ. ಎಂ. ಎಸ್. ಜಯಪ್ರಕಾಶ್ ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮ ದೇವಾಲಯದ ಹೆಸರಿನಲ್ಲಿ ನಡೆದಿರುವ ಹಿಂಸೆ ಹಾಗೂ ಕಟ್ಟಡ ನಾಶದ ಬಳಿಕ ಏಳುವ ಪ್ರಶ್ನೆ: ಮುಂದೇನು?
ತಾನು ಕಾಶಿ ಮತ್ತು ಮಥುರಾದ ವಿಮೋಚನೆಗಾಗಿ ಚಳವಳಿ ಆರಂಭಿಸುವುದಾಗಿ ಅಖಿಲ ಭಾರತೀಯ ಅಖಾಡ ಪರಿಷತ್ ಹೇಳಿದೆ. ಸಂಘ ಪರಿವಾರದ ಘಟಕಗಳನ್ನು ಇದರಲ್ಲಿ ಕೈಜೋಡಿಸುವಂತೆ ಕೇಳಿಕೊಳ್ಳಲಾಗುವುದು ಎಂದು ಅದು ಹೇಳಿದೆ. ಕಾಶಿ, ಮಥುರಾದ ಎರಡು ಮಸೀದಿಗಳು ಗುಲಾಮಗಿರಿಯ ಸಂಕೇತಗಳೆಂದು ಬಿಜೆಪಿ ನಾಯಕ ಹಾಗೂ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ. ಎಸ್. ಈಶ್ವರಪ್ಪ(ಆಗಸ್ಟ್ 5ರಂದು) ಹೇಳಿದ್ದಾರೆ.

ದೇವಾಲಯ ರಾಜಕಾರಣವು ನಮ್ಮನ್ನು ರಾಜಕಾರಣದೊಳಕ್ಕೆ ಎಳೆದು ತಂದಿದೆ. ಇದು ಬಹುತ್ವದ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾದ ಬೆಳವಣಿಗೆಯಾಗಿದೆ. ರಾಮ ದೇವಾಲಯದ ಮೂಲಕ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವಲ್ಲಿ ಬಲಪಂಥೀಯ ಶಕ್ತಿಗಳಿಗೆ ದೊರಕಿರುವ ಯಶಸ್ಸು ವಿಭಾಜಕ ರಾಜಕಾರಣದ ದಿಕ್ಕಿನಲ್ಲಿ ಮುಂದೆ ಸಾಗಲು ಅವುಗಳಿಗೆ ಇನ್ನಷ್ಟು ಪ್ರಚೋದನೆ ನೀಡಬಹುದು. ಬಹುಸಂಖ್ಯಾತ ಜನರು ಇಂತಹ ವಿಷಯಗಳಿಗೆ ಪುನಃ ಕಿಚ್ಚು ಹಚ್ಚುವುದನ್ನು ವಿರೋಧಿಸಿಯಾರು ಎನ್ನುವುದೇ ಈಗ ನಮ್ಮ ಮುಂದಿರುವ ಭರವಸೆ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News