ಸರಕಾರದಿಂದ ಪ್ರತಿಭಟನೆ ಹತ್ತಿಕ್ಕುವ ಕ್ರಮ ಖಂಡನೀಯ : ಕಾಂಗ್ರೆಸ್
Update: 2020-09-28 15:47 GMT
ಉಡುಪಿ, ಸೆ.28: ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕ ಹಾಗೂ ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹಾಗೂ ಸರ್ವಪಕ್ಷಗಳು ಕರೆ ನೀಡಿದ ಪ್ರತಿಭಟನೆಯನ್ನು ಹತ್ತಿಕ್ಕಿಲು ಆಡಳಿತ ವ್ಯವಸ್ಥೆಯನ್ನು ದುರುಪ ಯೋಗ ಪಡಿಸಿಕೊಂಡ ಸರಕಾರದ ಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಪ್ರತಿಭಟನೆ ಪ್ರತೀ ಪ್ರಜೆಯ ಹಕ್ಕು. ಅದನ್ನು ಕಸಿದುಕೊಳ್ಳುವ ಪ್ರಯತ್ನ ಆಡಳಿತ ವ್ಯವಸ್ಥೆಯಲ್ಲಿರುವ ಬಿಜೆಪಿಯಿಂದ ನಡೆದಿದೆ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ. ಜಿಲ್ಲೆಯ ಖಾಸಗಿ ಬಸ್ ಮಾಲಕರ ಸಂಘ ಹಾಗೂ ರಿಕ್ಷಾ ಮಾಲಕರ ಸಂಘ ರೈತರ ಪರವಾಗಿ ನಿಲ್ಲದೆ ವಿರೋಧಿ ನಿಲುವು ವ್ಯಕ್ತಪಡಿಸಿದ್ದು ದುರ್ಧೈವ. ಇದು ಅನ್ನದಾತನಿಗೆ ಬಗೆದ ದ್ರೋಹವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.